ಉಗ್ರ ಗುಂಪುಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ: ಪಾಕಿಸ್ತಾನಕ್ಕೆ ಆಸ್ಟ್ರೇಲಿಯ ಒತ್ತಾಯ
Update: 2019-02-26 16:09 GMT
ಕ್ಯಾನ್ಬೆರ (ಆಸ್ಟ್ರೇಲಿಯ), ಫೆ. 26: ಭಯೋತ್ಪಾದಕ ಸಂಘಟನೆ ಜೈಶೆ ಮುಹಮ್ಮದ್ನ ಪಾಕಿಸ್ತಾನದಲ್ಲಿರುವ ತರಬೇತಿ ಶಿಬಿರಗಳ ಮೇಲೆ ಭಾರತ ನಡೆಸಿರುವ ದಾಳಿಯ ಹಿನ್ನೆಲೆಯಲ್ಲಿ, ಸಂಯಮ ಕಾಯ್ದುಕೊಳ್ಳುವಂತೆ ಆಸ್ಟ್ರೇಲಿಯ ಭಾರತ ಮತ್ತು ಪಾಕಿಸ್ತಾನಗಳೆರಡನ್ನೂ ಒತ್ತಾಯಿಸಿದೆ.
ಅದೇ ವೇಳೆ, ಜೈಶೆ ಮುಹಮ್ಮದ್ ಮತ್ತು ಲಷ್ಕರೆ ತಯ್ಯಬ ಮುಂತಾದ ಭಯೋತ್ಪಾದಕ ಸಂಘಟನೆಗಳನ್ನು ನಿಷೇಧಿಸುವಂತೆಯೂ ಅದು ಪಾಕಿಸ್ತಾನವನ್ನು ಒತ್ತಾಯಿಸಿದೆ.
ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿದೆ ಎಂಬುದಾಗಿ ವಿದೇಶ ಕಾರ್ಯದರ್ಶಿ ವಿಜಯ ಗೋಖಲೆ ಘೋಷಿಸಿದ ಗಂಟೆಗಳ ಬಳಿಕ ಹೇಳಿಕೆಯೊಂದನ್ನು ನೀಡಿದ ಆಸ್ಟ್ರೇಲಿಯ, ಪಾಕ್ ನೆಲದಲ್ಲಿರುವ ಭಯೋತ್ಪಾದಕ ಗುಂಪುಗಳ ವಿರುದ್ಧ ‘‘ತುರ್ತು ಹಾಗೂ ಅರ್ಥಪೂರ್ಣ’’ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪಾಕಿಸ್ತಾನವನ್ನು ಒತ್ತಾಯಿಸಿದೆ.