ನಕಲಿ ಆಡಿಯೋ ಸೃಷ್ಟಿಸಿ ಪುಲ್ವಾಮ ದಾಳಿ ಮಾಡಿಸಿದ್ದೇ ಬಿಜೆಪಿ ಎಂದು ಸುಳ್ಳು ಹರಡುವ ಷಡ್ಯಂತ್ರ ಬಯಲು

Update: 2019-03-02 14:54 GMT

ಫೆಬ್ರವರಿ 27ರಂದು ಅವಿ ದಾಂಡಿಯಾ ಎಂಬವರು ಪೋಸ್ಟ್ ಮಾಡಿದ ಫೇಸ್‍ ಬುಕ್ ಲೈವ್‍ ವಿಡಿಯೋದಲ್ಲಿ, ಪುಲ್ವಾಮ ದಾಳಿಯನ್ನು ಬಿಜೆಪಿ ಸಂಘಟಿಸಿದ ಕೃತ್ಯ ಎಂದು ಪ್ರತಿಪಾದಿಸಲಾಗಿತ್ತು. ಇದನ್ನು 24 ಗಂಟೆ ಒಳಗಾಗಿ ಲಕ್ಷಾಂತರ ಮಂದಿ ವೀಕ್ಷಿಸಿದ್ದರು. ಫೇಸ್‍ ಬುಕ್ ಲೈವ್‍ ನಲ್ಲಿ ದಾಂಡಿಯಾ ಒಂದು ಧ್ವನಿ ಮುದ್ರಿತ ತುಣುಕನ್ನು ಪ್ರಸ್ತುತಪಡಿಸಿದ್ದು, ಗೃಹ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಒಬ್ಬ ಅಪರಿಚಿತ ಮಹಿಳೆಯ ನಡುವಿನ ಸಂಭಾಷಣೆಯ ತುಣುಕು ಇದು ಎಂದು ಹೇಳಲಾಗಿತ್ತು. ದೇಶಾದ್ಯಂತ ರಾಷ್ಟ್ರೀಯತೆಯ ಭಾವನೆಯನ್ನು ಕೆದಕುವ ಸಲುವಾಗಿ ಯೋಧರ ಮೇಲೆ ದಾಳಿಗೆ ಬಿಜೆಪಿ ಯೋಜಿಸಿತ್ತು ಎಂದು ವಿಡಿಯೋ ಪೋಸ್ಟ್ ಮಾಡಿದ್ದ ದಾಂಡಿಯಾ ಆರೋಪಿಸಿದ್ದರು.

ದಾಂಡಿಯಾ ಅವರ ಫೇಸ್‍ ಬುಕ್ ಲೈವ್‍ ಅನ್ನು thepost.com.pk, defence.pk, siasat.pk, zemtv.com, dailycapital.pk. ಸೇರಿದಂತೆ ಹಲವು ಪಾಕಿಸ್ತಾನಿ ವೆಬ್‍ ಸೈಟ್‍ಗಳು ಪ್ರಕಟಿಸಿತ್ತು.

ಆದರೆ ದಾಂಡಿಯಾ ಪ್ರಸ್ತುತಪಡಿಸಿದ ಆಡಿಯೋ ಕ್ಲಿಪ್ ಸಂಪೂರ್ಣ ತಿರುಚಿದ್ದು ಮತ್ತು ಕಪೋಲ ಕಲ್ಪಿತ ಎಂದು altnews.in ವರದಿ ಮಾಡಿದೆ. ಬಿಜೆಪಿ ಮುಖಂಡರು ನೀಡಿದ ಹಳೆಯ ಸಂದರ್ಶನಗಳ ಭಾಗಗಳನ್ನು ಎತ್ತಿಕೊಂಡು ಈ ನಕಲಿ ಆಡಿಯೋ ಸಿದ್ಧಪಡಿಸಲಾಗಿದೆ. ಈ ಮೂಲಕ ಭಾರತೀಯ ಸೈನಿಕರನ್ನು ಹತ್ಯೆ ಮಾಡಲು ರಾಜನಾಥ್ ಸಿಂಗ್ ಹಾಗೂ ಅಮಿತ್ ಶಾ ಸಂಚು ರೂಪಿಸಿದ್ದರು ಎಂದು ಸುಳ್ಳು ಸುದ್ದಿ ಹರಡುವ ಷಡ್ಯಂತ್ರ ನಡೆಸಲಾಗಿದೆ.

ಭಾರತ ಹಾಗೂ ಪಾಕಿಸ್ತಾನದ ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಈ ನಕಲಿ ಆಡಿಯೋ ಬಗ್ಗೆ  ಟ್ವಿಟರ್ ಬಳಕೆದಾರ ಆರಿಫ್ ಖಾನ್ ಎಂಬವರು ಮೊದಲ ಬಾರಿಗೆ ಎಚ್ಚರಿಸಿದ್ದರು.

ಆಪಾದಿತ ಸಂಭಾಷಣೆಯ ಭಾಷಾಂತರ

ಅವಿ ದಾಂಡಿಯಾ ಪೋಸ್ಟ್ ಮಾಡಿದ ಆಡಿಯೊದ ಭಾಷಾಂತರವನ್ನು ಈ ಕೆಳಗೆ ಕಾಣಬಹುದು.

ಅಮಿತ್ ಶಾ- “ದೇಶದ ಜನರ ದಾರಿ ತಪ್ಪಿಸಬಹುದು. ಚುನಾವಣೆಗಾಗಿ ಯುದ್ಧ ನಡೆಯಲೇಬೇಕು ಎನ್ನುವುದು ನಮ್ಮ ನಂಬಿಕೆ”.

ಅಪರಿಚಿತ ಮಹಿಳೆ- “ಅಮಿತ್‍ ಜಿ, ನೀವು ಹಾಗೆ ಹೇಳಿದ ಮಾತ್ರಕ್ಕೆ ಅದು ಸಂಭವಿಸದು; ನಿರ್ದಿಷ್ಟ ಉದ್ದೇಶವಿಲ್ಲದೇ ಯುದ್ಧ ಮಾಡಲಾಗದು. ಉಗ್ರರು ದಾಳಿ ಮಾಡಿದರೆ, ಉಗ್ರರ ದಾಳಿಯ ಬಗೆಗೆ ತನಿಖೆ ನಡೆಸಬಹುದು”.

ರಾಜನಾಥ್ ಸಿಂಗ್- “ಸೈನಿಕರ ವಿಚಾರಕ್ಕೆ ಬಂದಾಗ ನಮ್ಮ ದೇಶ ತೀರಾ ಸೂಕ್ಷ್ಮಭಾವನೆ ಹೊಂದಿದೆ. ಅವರ ಬಗ್ಗೆ ಜನತೆಯಲ್ಲಿ ಸಾಕಷ್ಟು ಉತ್ತಮ ಭಾವನೆಗಳು ತುಂಬಿವೆ”.

ಅಪರಿಚಿತ ಮಹಿಳೆ- “ದೇಶದ ಸೈನಿಕರನ್ನು ಹುತಾತ್ಮರನ್ನಾಗಿ ಮಾಡಲು ನೀವು ಬಯಸಿದ್ದೀರಾ?”

ರಾಜನಾಥ್ ಸಿಂಗ್- “ಈ ಬಗೆಯ ಕಾರ್ಯಕ್ಕೆ ನೀವು ದುರ್ಬಲರೇ?”

ಅಪರಿಚಿತ ಮಹಿಳೆ- “ಒಬ್ಬ ಅಥವಾ ಇಬ್ಬರು ಸೈನಿಕರಿಂದ ಏನೂ ಆಗದು. ನಾವು ಉರಿ ದಾಳಿ ಮಾಡಿದೆವು, ಏನೂ ಸಂಭವಿಸಲಿಲ್ಲ. ಚುನಾವಣೆ ಬರುತ್ತಿದೆ. ದೇಶದ ಭದ್ರತೆಯ ಬಗ್ಗೆ ನೀವು ಗಮನ ಹರಿಸಬಹುದು. ಅದರ ಮೇಲೆ ರಾಜಕೀಯ ಮಾಡಿ”.

ರಾಜನಾಥ್ ಸಿಂಗ್- “ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಪ್ರಶ್ನೆಯನ್ನು ರಾಜಕೀಯಗೊಳಿಸಲೇಬೇಕು”.

ಅಪರಿಚಿತ ಮಹಿಳೆ- “ರಾಜಕೀಯಕ್ಕಾಗಿ ನೀವು ಯುದ್ಧ ಆರಂಭಿಸಲು ಬಯಸಿದ್ದೀರಾ?, ಏನಾದರೂ ಮಾಡೋಣ. ಕಾಶ್ಮೀರ ಅಥವಾ ಕಾಶ್ಮೀರದ ಬಳಿ..)”

ರಾಜನಾಥ್ ಸಿಂಗ್- “ಜಮ್ಮು ಮತ್ತು ಶ್ರೀನಗರ”

ಅಪರಿಚಿತ ಮಹಿಳೆ- “ನಾವು ಅಲ್ಲಿ ಸ್ಫೋಟ ನಡೆಸಬಹುದು, ಅದರಲ್ಲಿ ಕೆಲ ಸೈನಿಕರು, ಕೆಲ ಅರೆಸೇನಾ ಪಡೆ ಸಿಬ್ಬಂದಿ, ಕೆಲ ಸಿಆರ್‍ಪಿಎಫ್ ನವರು ಸಾಯಬಹುದು. 100-50 ಯೋಧರು ಸತ್ತರೆ ನಂತರ ದೇಶದ ರಾಷ್ಟ್ರೀಯತೆ ಒಗ್ಗೂಡುತ್ತದೆ..”

ಟ್ರ್ಯಾಕ್ ಬದಲಾವಣೆ...ಸಂಗೀತ

ರಾಜನಾಥ್ ಸಿಂಗ್- “ಸೈನಿಕರ ಹುತಾತ್ಮತೆಯನ್ನು ರಾಜಕೀಯಗೊಳಿಸಬೇಕು”.

ಮಹಿಳೆ- “ಅಮಿತ್‍ ಜೀ, ಇದು ಕೊಳಕು ರಾಜಕೀಯ”.

ಅಮಿತ್ ಶಾ- “ಇದು ರಾಜಕೀಯವಲ್ಲ”

ಮಹಿಳೆ- “ಮತ್ತೇನು? ಇದು ಕೊಳಕು ರಾಜಕೀಯ”

ಅಮಿತ್ ಶಾ- “ನೀವು ನನ್ನನ್ನು ನೇರವಾಗಿ ಕೇಳುತ್ತಿದ್ದೀರಿ. ಏಕೆ ಇದು ಸಂಭವಿಸಿತು ಹೇಗೆ ಸಂಭವಿಸಿತು ಕೇಳಿ”

ಮಹಿಳೆ- “ನಾನು ಕೇಳಬಯಸುವುದಿಲ್ಲ. ನಾನು ಅದನ್ನು ಮಾಡದಿದ್ದರೆ, ಬೇರೆಯವರು ಮಾಡಬಹುದು. ನೀವು ಬಾಂಬ್ ಸ್ಫೋಟ ಬಯಸಿದ್ದೀರಿ, ನಾವು ಅದು ಸಂಭವಿಸುವಂತೆ ಮಾಡುತ್ತೇವೆ. ನೀವು ಅದನ್ನು ಬಯಸಿದ್ದರೆ ಅದು ಆಗುತ್ತದೆ. ದೇಶದ ಸೈನಿಕರು ಹುತಾತ್ಮರಾದರೆ, ಅವರ ಕುಟುಂಬಗಳ ಗತಿ ಏನಾಗುತ್ತದೆ ಎಂಬ ಬಗ್ಗೆಯೂ ನೀವು ಯೋಚಿಸಬೇಕು”

ಅಮಿತ್ ಶಾ- “ಎಲ್ಲ ಸೈನಿಕರ ಮನೆಗಳ ಸ್ಥಿತಿ ಏನಾಗಬಹು?”

ಮಹಿಳೆ- “ಭೀತಿ ಹೆಚ್ಚುತ್ತಿದೆ”

ಅಮಿತ್ ಶಾ- “ಭೀತಿಯಂತೂ ಹೆಚ್ಚುತ್ತಿದೆ. ಆದರೆ ಅನ್ಯ ಮಾರ್ಗವಿಲ್ಲ”

ಮಹಿಳೆ- “ಅಮಿತ್ ಜೀ, ಸಾಕಷ್ಟು ಬೇರೆ ಮಾರ್ಗಗಳಿವೆ. ನಿಮ್ಮಲ್ಲಿ ಇವಿಎಂ ಇದೆ. ನಿಮ್ಮಲ್ಲಿಲ್ಲವೇ?, ನೀವು ಸೈನಿಕರನ್ನು ಹುತಾತ್ಮರನ್ನಾಗಿಸಲು ಏಕೆ ಬಯಸಿದ್ದೀರಿ ಎಂದು ಅರ್ಥವಾಗುತ್ತಿಲ್ಲ. ನೀವು ಬಯಸಿದಲ್ಲಿ ಸ್ಫೋಟ ಸಂಭವಿಸುವಂತೆ ನಾವು ಮಾಡುತ್ತೇವೆ. 100-50 ಜವಾನರು ಸಾಯಬಹುದು. ಅದರೆ ವೈರಿಯ ಜತೆಗೆ ನೀವು ಕೂಡಾ ಸೇನೆಯ ವೈರಿಯಾಗುವುದಾದರೆ, ಮತ್ತೆ ಯಾರು ಏನು ಮಾಡಲು ಸಾಧ್ಯ?”

ಅಮಿತ್ ಶಾ- “ಇದು ಸಂಭವಿಸಿಯೇ ತೀರುತ್ತದೆ, ಇದನ್ನು ಹೇಗೆ ಬದಲಾಯಿಸಲು ಸಾಧ್ಯ?”

ಮಹಿಳೆ- ನಿ”ಮ್ಮೊಂದಿಗೆ ನಾನು ವಾದಕ್ಕೆ ಇಳಿಯುವುದಿಲ್ಲ. ನಿಮ್ಮ ಕೆಲಸ ಆಗುವಂತೆ ನಾನು ಮಾಡುತ್ತೇನೆ. ನನಗೆ ಹಣವನ್ನಷ್ಟೇ ಕಳುಹಿಸಿ. ಫೆಬ್ರವರಿ 12-13ರ ವೇಳೆಗೆ ನಾನು ನಿಮಗೆ ಮತ್ತೆ ಕರೆ ಮಾಡುತ್ತೇನೆ. ನನಗೆ ಹಣ ಕಳುಹಿಸಿ”.

ಅಮಿತ್ ಶಾ- “ನಿಮಗೆ ತಿಳಿಸುತ್ತೇನೆ”.

ಸಂಭಾಷಣೆಯ ಸತ್ಯಾಸತ್ಯತೆ

ರಾಜನಾಥ್ ಸಿಂಗ್ ಅವರು ಹೇಳುವ, "ನಮ್ಮ ದೇಶವು ಸೈನಿಕರ ವಿಚಾರಕ್ಕೆ ಬಂದಾಗ ತೀರಾ ಸೂಕ್ಷ್ಮವಾಗುತ್ತದೆ.." ಎನ್ನುವ ಭಾಗ 2019ರ ಫೆಬ್ರವರಿ 22ರಂದು ಇಂಡಿಯಾ ಟುಡೇಗೆ ರಾಜನಾಥ್ ಸಿಂಗ್ ಅವರು ನೀಡಿದ ಸಂದರ್ಶನದಿಂದ ಎತ್ತಿಕೊಳ್ಳಲಾಗಿದೆ. ಪುಲ್ವಾಮ ದಾಳಿಯ ಬಳಿಕ ಗೃಹ ಸಚಿವರು ನೀಡಿದ ಮೊದಲ ಸಂದರ್ಶನ ಇದು.

8:39ನೇ ನಿಮಿಷದಲ್ಲಿ ರಾಜನಾಥ್ ಸಿಂಗ್, "ನಮ್ಮ ಸರ್ಕಾರ ಸೈನಿಕರ ವಿಚಾರ ಬಂದಾಗ ತೀರಾ ಭಾವಸೂಕ್ಷ್ಮವಾಗುತ್ತದೆ” ಎಂದಿದ್ದಾರೆ. ದಾಂಡಿಯಾ ಪೋಸ್ಟ್ ಮಾಡಿದ ಆಡಿಯೊ ತುಣುಕಿನಲ್ಲಿ ‘ಸೈನಿಕರು’ ಎಂಬ ಪದವನ್ನು ‘ದೇಶ’ ಎಂದು ಬದಲಿಸಲಾಗಿದೆ.

10:41ನೇ ನಿಮಿಷದಲ್ಲಿ ಗೃಹ ಸಚಿವರು, "ಆತ ರಾಷ್ಟ್ರೀಯತೆಯ ಭಾವನೆಗಳನ್ನು ಹೊಂದಿದ್ದ" ಎಂದು ಹೇಳಿದ್ದಾರೆ. ಇಲ್ಲಿ ಸಚಿವರು ಉಲ್ಲೇಖಿಸಿರುವುದು ಭಾರತೀಯ ಸೇನೆಯ ಉತ್ತರ ಕಮಾಂಡ್‍ ನ ಮಾಜಿ ಜನರಲ್ ಆಫೀಸರ್ ಕಮಾಂಡ್ ಇನ್ ಚೀಫ್, ಲೆಫ್ಟಿನೆಂಟ್ ಜನರಲ್ ದೀಪೇಂದ್ರ ಸಿಂಗ್ ಹೂಡಾ ಅವರನ್ನು. ಆದರೆ ರಾಷ್ಟ್ರೀಯತೆ ಎಂಬ ಪದವನ್ನು ಸಂಭಾಷಣೆಯ ಸಂದರ್ಭದ ಆಡಿಯೊ ತುಣುಕಿನಲ್ಲಿ ಸೇರಿಸಿಲ್ಲ. ಗೃಹ ಸಚಿವರು ದೇಶದ ಸೈನಿಕರೆಡೆಗಿನ ಭಾವನೆಗಳ ಬಗ್ಗೆ ಮಾತನಾಡುತ್ತಾರೆಯೇ ವಿನಃ, ದೇಶದ ಬಗೆಗೆ ಅಲ್ಲ ಎಂಬ ಅರ್ಥದಲ್ಲಿ ಬಿಂಬಿಸಲು ದಾಂಡಿಯಾ ಇಚ್ಛಿಸಿದಂತಿದೆ.

ಸಂದರ್ಶನದ 5:10ನೇ ನಿಮಿಷದಲ್ಲಿ ರಾಜನಾಥ್ ಸಿಂಗ್ ಅವರು, “ಕನಿಷ್ಠ ನಮ್ಮ ದೇಶದ ಭದ್ರತೆಗೆ ಸಂಬಂಧಿಸಿದ ಪ್ರಶ್ನೆಗಳನ್ನಾದರೂ ರಾಜಕೀಯಗೊಳಿಸಬಾರದು" ಎಂದು ಹೇಳಿದ್ದರು. ಪುಲ್ವಾಮ ಘಟನೆ ನಡೆದಾಗ ದೇಶದ ಪ್ರಧಾನಿ ಜಿಮ್ ಕಾರ್ಬೆಟ್‍ನಲ್ಲಿ ವಿಹರಿಸುತ್ತಿದ್ದರು ಎಂಬ ಕಾಂಗ್ರೆಸ್ ಆರೋಪದ ಬಗ್ಗೆ ನಿರೂಪಕಿ ಶ್ವೇತಾ ಸಿಂಗ್ ಗಮನ ಸೆಳೆದಾಗ ಸಚಿವರು ಮೇಲಿನಂತೆ ಉತ್ತರಿಸಿದ್ದರು.

ಸಾರ್ವಜನಿಕವಾಗಿ ಲಭ್ಯವಿರುವ ಅಮಿತ್ ಶಾ ಅವರ ವಿಡಿಯೊಗಳಲ್ಲಿ ಎಲ್ಲೂ ಕಪೋಲಕಲ್ಪಿತ ಸಂಭಾಷಣೆಯ ಧ್ವನಿ ತುಣುಕಿನ ಭಾಗಗಳು ಕಂಡುಬಂದಿಲ್ಲ. ಆದ್ದರಿಂದ altnews.in ಅಮಿತ್ ಶಾ ಭಾಗವನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಆದಾಗ್ಯೂ ಈ ಧ್ವನಿಯನ್ನು ಆಲಿಸಿದರೆ, ಶಾ ಹೇಳಿಕೆಯ ಭಾಗವನ್ನು ಕೂಡಾ ಅವರ ಭಾಷಣ ಅಥವಾ ಸಂದರ್ಶನದಿಂದ ಆರಿಸಿಕೊಳ್ಳಲಾಗಿದೆ ಎನ್ನುವುದು ಸ್ಪಷ್ಟ.

ಅವಿ ದಾಂಡಿಯಾ ಆನ್‍ಲೈನ್ ಜನಪ್ರಿಯತೆಯನ್ನು ಪಡೆಯಲು ಇಂಥ ಹೀನ ಪ್ರಯತ್ನ ಮಾಡಿದ್ದು, ಪುಲ್ವಾಮ ದಾಳಿಯು ಭಾರತ ಸರ್ಕಾರವೇ ರೂಪಿಸಿದ ಸಂಚು ಎಂದು ಬಿಂಬಿಸುವ ಹುಚ್ಚುಸಾಹಸ ಮಾಡಿದ್ದಾರೆ. ಅನಿವಾಸಿ ಭಾರತೀಯ ಎಂದು ಹೇಳಿಕೊಂಡಿರುವ ದಾಂಡಿಯಾ ಪೇಜ್ ಗೆ ಎರಡು ಲಕ್ಷ ಫಾಲೋವರ್ ಗಳಿದ್ದಾರೆ. ಪ್ರತಿ ನಿಮಿಷಗಳು ಕಳೆದಂತೆಲ್ಲ, ಅವರ ಅಪಪ್ರಚಾರದ ವಿಡಿಯೊ ಬಗೆಗಿನ ಅಭಿಪ್ರಾಯಗಳು ಹಲವು ಪಟ್ಟು ಹೆಚ್ಚುತ್ತಲೇ ಇವೆ. ಈ ತುಣುಕನ್ನು 85 ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದು, ಅಷ್ಟೊಂದು ದೊಡ್ಡ ಸಂಖ್ಯೆಯ ಮಂದಿ ಈ ಆಡಿಯೊ ತುಣುಕು ನಿಜ ಎಂದು ನಂಬಿದ್ದನ್ನು ಇದು ಸೂಚಿಸುತ್ತದೆ.

Writer - ಪೂಜಾ ಚೌಧರಿ, altnews.in

contributor

Editor - ಪೂಜಾ ಚೌಧರಿ, altnews.in

contributor

Similar News