ವಿಭಜನೆ ನೀತಿ, ಮುಸ್ಲಿಮರಿಗೆ ಕಿರುಕುಳ: ಭಾರತಕ್ಕೆ ವಿಶ್ವಸಂಸ್ಥೆ ಎಚ್ಚರಿಕೆ
Update: 2019-03-06 18:13 GMT
ಹೊಸದಿಲ್ಲಿ,ಮಾ.6: ಈಗಾಗಲೇ ಅಸಮಾನವಾಗಿರುವ ಸಮಾಜದಲ್ಲಿ ಸಂಕೀರ್ಣ ರಾಜಕೀಯ ಸಿದ್ಧಾಂತಗಳು ಸೂಕ್ಷ್ಮ ಜನರನ್ನು ಮತ್ತಷ್ಟು ಸೀಮಿತಗೊಳಿಸುತ್ತವೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಮುಖ್ಯಸ್ಥೆ ಮಿಶೆಲ್ ಬಶೆಲೆಟ್ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.
ಭಾರತದ ವಿಭಜಕ ನೀತಿಗಳಿಂದ ಆರ್ಥಿಕ ಪ್ರಗತಿಗೆ ಧಕ್ಕೆಯಾಗಬಹುದು ಎಂದು ಬುಧವಾರ ಸ್ವಿಝರ್ಲ್ಯಾಂಡ್ನ ಜಿನೆವಾದಲ್ಲಿರುವ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಸಭೆಯಲ್ಲಿ ಮಾತನಾಡುವ ವೇಳೆ ಬಶೆಲೆಟ್ ಅಭಿಪ್ರಾಯಿಸಿದ್ದಾರೆ.
ಮುಸ್ಲಿಮರು ಮತ್ತು ಐತಿಹಾಸಿಕವಾಗಿ ಸೌಲಭ್ಯವಂಚಿತ ಮತ್ತು ಸೀಮಿತಗೊಳಿಸಲ್ಪಟ್ಟ ಸಮುದಾಯಗಳಾದ ದಲಿತ ಮತ್ತು ಆದಿವಾಸಿಗಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿರುವ ಬಗ್ಗೆ ನಮಗೆ ವರದಿಗಳು ಬಂದಿವೆ ಎಂದು ಬಶೆಲೆಟ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.