ರಫೇಲ್ ಕಡತಗಳನ್ನೇ ರಕ್ಷಿಸಲಾಗದ ಮೋದಿ ದೇಶವನ್ನು ಹೇಗೆ ರಕ್ಷಿಸಬಲ್ಲರು: ಸ್ಟಾಲಿನ್ ಪ್ರಶ್ನೆ
ಚೆನ್ನೈ, ಮಾ.9: ರಕ್ಷಣಾ ಸಚಿವಾಲಯದಿಂದ ರಫೇಲ್ ಕಡತಗಳು ಕಳವಾಗಿದೆ ಎಂದು ಹೇಳಿದ ನಂತರ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಉಲ್ಟಾ ಹೊಡೆದಿದ್ದು, ರಫೇಲ್ ದಾಖಲೆಗಳು ಕಳವಾಗಿದೆ ಎಂದು ನಾನು ಹೇಳಿರಲಿಲ್ಲ ಎಂದಿದ್ದರು. ಇದೀಗ ಈ ವಿವಾದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್, ರಫೇಲ್ ದಾಖಲೆಗಳನ್ನೇ ರಕ್ಷಿಸಲಾಗದ ಮೋದಿ ದೇಶವನ್ನು ಹೇಗೆ ರಕ್ಷಿಸಬಲ್ಲರು ಎಂದು ಪ್ರಶ್ನಿಸಿದ್ದಾರೆ.
ಇದೇ ಕಾರಣಕ್ಕಾಗಿ ವಿಪಕ್ಷಗಳು ಬಿಜೆಪಿ ವಿರುದ್ಧ ಒಗ್ಗೂಡಿವೆ ಎಂದೂ ಅವರು ಹೇಳಿದರು.
ಡಿಎಂಕೆ ಖಜಾಂಜಿ ದೊರೈ ಮುರುಗನ್ ಜತೆ ಡಿಎಂಡಿಕೆ ನಡೆಸುತ್ತಿರುವ ವ್ಯಾಗ್ಯುದ್ಧ ಹಾಗೂ ಡಿಎಂಡಿಕೆಯು ಡಿಎಂಕೆ ವಿರುದ್ಧ ಮಾಡುತ್ತಿರುವ ಟೀಕೆಗಳ ಬಗ್ಗೆ ಪ್ರಶ್ನಿಸಿದಾಗ ಇಂತಹ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸಿ ಸಮಯ ವ್ಯರ್ಥ ಮಾಡಲು ಬಯಸುವುದಿಲ್ಲ ಎಂದು ಸ್ಟ್ಯಾಲಿನ್ ಖಾರವಾಗಿ ನುಡಿದರು.
ತಮ್ಮ ಇಬ್ಬರು ಪದಾಧಿಕಾರಿಗಳು ಮುರುಗನ್ ಅವರನ್ನು ವೈಯಕ್ತಿಕ ನೆಲೆಯಲ್ಲಿ ಭೇಟಿಯಾಗಿದ್ದರು ಎಂದು ಡಿಎಂಡಿಕೆ ಹೇಳಿದ್ದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಮಿತ್ರಕೂಟದಲ್ಲಿ ತಮ್ಮ ಪಕ್ಷಕ್ಕೂ ಸ್ಥಾನ ನೀಡುವಂತೆ ಅವರು ಕೋರಿದ್ದರೆಂದು ಮುರುಗನ್ ಹೇಳಿದ್ದರು.