ಮುರುಡೇಶ್ವರ ಸಮುದ್ರಲೆಗಳಿಗೆ ಸಿಲುಕಿ ಪ್ರವಾಸಿ ನೀರುಪಾಲು

Update: 2019-03-17 17:39 GMT

ಭಟ್ಕಳ: ಸಮುದ್ರದಲೆಗೆ ಸಿಲುಕಿ ಪ್ರವಾಸಿಯೋರ್ವ ನೀರು ಪಾಲಾಗಿರುವ ಘಟನೆ ಮುರುಡೇಶ್ವರ ಬೀಚ್ ನಲ್ಲಿ ರವಿವಾರ ನಡೆದಿದೆ.

ಸಮುದ್ರದಲ್ಲಿ ಈಜುತ್ತಿರುವಾಗ ಭಾರೀ ಅಲೆಗೆ ಸಿಲುಕಿ ನೀರುಪಾಲಾಗಿರುವ ವ್ಯಕ್ತಿಯನ್ನು ಚಾಮರಾಜನಗರ ಜಿಲ್ಲೆಯ ಮಾದಪ್ಪ ಶಿವಣ್ಣ ಮಡಿವಾಳ ಶೆಟ್ಟಿ ಎಂದು ಗುರುತಿಸಲಾಗಿದೆ.

ಚಾಮರಾಜನಗರ ಹಾಗೂ ರಾಮನಗರ ಜಿಲ್ಲೆಯಿಂದ ಮುರುಡೇಶ್ವರಕ್ಕೆ ಪ್ರವಾಸಕ್ಕೆಂದು ಬಂದಿದ್ದ ಶಿವಣ್ಣ ಮಡಿವಾಳ ಶೆಟ್ಟಿ ಜತೆ ಯೋಗೇಶ ಸುರೇಶ ನಾಯ್ಕ, ಸಿದ್ದರಾಜು, ನಾಗರಾಜ ಶೆಟ್ಟಿ, ರವೀಶ್ ಮತ್ತು ಲೋಕೇಶ್ ಸಮುದ್ರದಲ್ಲಿ ಈಜಾಡುತ್ತಿದ್ದರು. ಹಠಾತ್ತನೆ ಭಾರೀ ಅಲೆಯೊಂದು ಅಪ್ಪಳಿಸಿತು. ಇದರಿಂದಾಗಿ ಇವರೆಲ್ಲರೂ ಮುಳುಗಲಾರಂಭಿಸಿದ್ದು, ಸ್ಥಳದಲ್ಲಿದ್ದ ಲೈಫ್ ಗಾರ್ಡ್ ಳಾದ ಜಯರಾಮ, ಹರಿಕಾಂತಾ, ಚಂದ್ರಶೇಖರ ದೇವಾಡಿಗ ಐವರನ್ನು ರಕ್ಷಿಸಿದರು. ಪ್ರವಾಸಿಗರ ಮಿತ್ರ ಮಂಜುನಾಥ್ ಶೇಟ್ ಇವರಿಗೆ ನೆರವಾದರು. ಆದರೆ, ಮಾದಪ್ಪ ಶಿವಣ್ಣ ಮಡಿವಾಳ ಶೆಟ್ಟಿ ನೀರಿನಲ್ಲಿ ಸಿಲುಕಿ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.

ಈ ಬಗ್ಗೆ ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News