ಅಧಿಕ ಮೊತ್ತದ ನಗದು ವಶ; ಮೇಲ್ಮನವಿಗೆ ಸಮಿತಿ ರಚನೆ
ಉಡುಪಿ, ಮಾ.19: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ 50,000 ರೂ.ಗಿಂತ ಅಧಿಕ ಮೊತ್ತದ ನಗದನ್ನು ಯಾವುದೇ ದಾಖಲೆ ಇಲ್ಲದೇ ಕೊಂಡೊಯ್ಯುವುದು ಕಂಡು ಬಂದಲ್ಲಿ ಚುನಾವಣಾ ನೀತಿ ಸಂಹಿತೆ ಅನುಷ್ಠಾನ ನಿರತ ಸರಕಾರಿ ಸಿಬ್ಬಂದಿಗಳು ನಿಯಮಾನುಸಾರ ನಗದು ವಶಪಡಿಸಿ ಖಜಾನೆಗೆ ಜಮಾ ಮಾಡಿ ರಶೀದಿ ನೀಡಲಿದ್ದಾರೆ.
ಈ ಸಂದರ್ದಲ್ಲಿ ಬಾಧಿತ ವ್ಯಕ್ತಿಗಳು ಸೂಕ್ತ ದಾಖಲೆಗಳೊಂದಿಗೆ (ಆಧಾರ್ ಕಾರ್ಡ್ ಪ್ರತಿ, ಎಟಿಎಂ ಸ್ಲಿಪ್, ಬ್ಯಾಂಕ್ ಪಾಸ್ಬುಕ್ನ ಪ್ರತಿ ಸೇರಿದಂತೆ ಇತರ ವ್ಯವಹಾರದ ಮಾಹಿತಿ) ಜಿಪಂನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಧ್ಯಕ್ಷತೆಯ ಸಮಿತಿಗೆ ಅಪೀಲು ಸಲ್ಲಿಸಬಹುದಾಗಿದೆ. ಈ ಬಗ್ಗೆ ಸೂಕ್ತ ವಿಚಾರಣೆ ನಡೆಸಿ ನಗದು ಬಿಡುಗಡೆ ಬಗ್ಗೆ ಕ್ರಮ ವಹಿಸಲಾಗುವುದು.
ಈ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಸಚಿನ್ ಕಾಮತ್, ಅಸಿಸ್ಟೆಂಟ್ ಕಮೀಷನರ್, ಸೆಂಟ್ರಲ್ ಟ್ಯಾಕ್ಸ್ (ದೂರವಾಣಿ ಸಂ: 9741735301) ಇವರು ಕಾರ್ಯನಿರ್ವಹಿಸಲಿದ್ದಾರೆ ಎಂದು ಜಿಪಂನ ಸಿಇಓ ಸಿಂಧು ಬಿ. ರೂಪೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.