ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿತ ಮಣಿಪುರದ ಪತ್ರಕರ್ತ ತೀವ್ರ ಅಸ್ವಸ್ಥ

Update: 2019-03-22 15:30 GMT

ಹೊಸದಿಲ್ಲಿ, ಮಾ.22: ಕಳೆದ ನವೆಂಬರ್ 27ರಿಂದ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್‌ಎಸ್‌ಎ)ಯಡಿ ಬಂಧನಲ್ಲಿರುವ ಮಣಿಪುರ ಮೂಲದ ಪತ್ರಕರ್ತ ಕಿಶೋರ್‌ಚಂದ್ರ ವಾಂಗ್‌ಚೆಮ್ ತೀವ್ರ ಅಸ್ವಸ್ಥಗೊಂಡಿದ್ದು ಇಂಫಾಲ್‌ನಲ್ಲಿರುವ ಜವಾಹರಲಾಲ್ ನೆಹರೂ ವೈದ್ಯವಿಜ್ಞಾನ ಸಂಸ್ಥೆ(ಜೆಐಎಂಎಸ್)ಗೆ ದಾಖಲಿಸಲಾಗಿದೆ ಎಂದು ಅವರ ಪತ್ನಿ ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಣಿಪುರದ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್‌ರನ್ನು ಟೀಕಿಸಿದ್ದ ವಾಂಗ್‌ಚೆಮ್‌ರನ್ನು ಎನ್‌ಎಸ್‌ಎ ಅಡಿ ಜೈಲಿಗೆ ಹಾಕಲಾಗಿದೆ.

ವಾಂಗ್‌ಚೆಮ್ ಅಸೌಖ್ಯಗೊಂಡಿರುವ ಕಾರಣ ಮಾರ್ಚ್ 20ರಂದು ಅವರನ್ನು ಜೆಐಎಂಎಸ್‌ಗೆ ದಾಖಲಿಸಿರುವುದನ್ನು ವಕೀಲರು ತನಗೆ ತಿಳಿಸಿದರು . ತಕ್ಷಣ ತಾನು ಆಸ್ಪತ್ರೆಗೆ ಧಾವಿಸಿದ್ದು ಅದಾಗಲೇ ಅವರ ರಕ್ತ ಪರೀಕ್ಷೆ ಇತ್ಯಾದಿಗಳನ್ನು ನಡೆಸಲಾಗಿತ್ತು ಎಂದು ವಾಂಗ್‌ಚೆಮ್ ಪತ್ನಿ ರಂಜಿತಾ ಇಳಾಂಗಮ್ ಹೇಳಿರುವುದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಆಸ್ಪತ್ರೆಯಲ್ಲಿ ಬಿಗು ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾರ್ಚ್ 20ರಂದು ಮಣಿಪುರಕ್ಕೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಈ ಬಂದೋಬಸ್ತ್ ಮಾಡಿರಬಹುದು ಎಂದು ಭಾವಿಸಿದ್ದೆ. ಆದರೆ ಕಿಶೋರ್‌ಚಂದ್ರ ವಾಂಗ್‌ಚೆಮ್‌ನನ್ನು ಚಿಕಿತ್ಸೆಗೆ ದಾಖಲಿಸಿದ ಕಾರಣ ಈ ಭದ್ರತಾ ವ್ಯವಸ್ಥೆ ಎಂದು ಬಳಿಕ ತಿಳಿಯಿತು. ಪತಿಯನ್ನು ಭೇಟಿ ಮಾಡಲೂ ತನಗೆ ಅವಕಾಶ ಮಾಡಿಕೊಡಲಿಲ್ಲ ಎಂದು ರಂಜಿತಾ ಇಳಾಂಗಮ್ ಹೇಳಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಪತಿಯನ್ನು ಜೈಲಿನ ವ್ಯಾನ್‌ನತ್ತ ಕರೆದೊಯ್ಯುವಾಗ ತನ್ನೊಂದಿಗಿದ್ದ ಸಹೋದರ ಮೊಬೈಲ್‌ನಲ್ಲಿ ಫೋಟೋ ಕ್ಲಿಕ್ಕಿಸಿದ. ಆದರೆ ಭದ್ರತಾ ಸಿಬ್ಬಂದಿ ಈ ಫೋಟೋವನ್ನು ಡಿಲೀಟ್ ಮಾಡುವಂತೆ ಗದರಿದರು ಎಂದು ರಂಜಿತಾ ಹೇಳಿದ್ದಾರೆ.

ಪತಿಯ ದೇಹತೂಕದಲ್ಲಿ ಭಾರೀ ಇಳಿಕೆಯಾಗಿರುವುದನ್ನು ಕಂಡು ತನಗೆ ಆಘಾತವಾಯಿತು. ಅವರ ಅಸೌಖ್ಯಕ್ಕೆ ಕಾರಣ ತಿಳಿದುಕೊಳ್ಳುವ ಉದ್ದೇಶದಿಂದ ಅವರಿಗೆ ಬರೆದುಕೊಟ್ಟಿದ್ದ ಔಷಧದ ವಿವರ ಇರುವ ಚೀಟಿಯ ಫೋಟೋ ತೆಗೆಯಲೂ ಭದ್ರತಾ ಸಿಬ್ಬಂದಿ ಅವಕಾಶ ನೀಡಲಿಲ್ಲ. ಬಳಿಕ ಆಸ್ಪತ್ರೆಯ ಸಿಬ್ಬಂದಿಯಲ್ಲಿ ವಿಚಾರಿಸಿದಾಗ, ಊಟದ ಬಳಿಕ ವಾಂಗ್‌ಚೆಮ್‌ನ ರಕ್ತದಲ್ಲಿ ಸಕ್ಕರೆಯ ಅಂಶ 543ಕ್ಕೇರಿದ್ದ ಕಾರಣ ಆತ ಅಸ್ವಸ್ಥಗೊಂಡಿದ್ದನೆಂದು ತಿಳಿಸಿದರು.

ತಕ್ಷಣ ಪತಿಯೊಂದಿಗಿದ್ದ ಅಧಿಕಾರಿಯನ್ನು ಭೇಟಿಯಾಗಿ ಅವರಲ್ಲಿ ವಿಚಾರಿಸಿದೆ. ಆಸ್ಪತ್ರೆಯವರು ಕೆಲವೊಂದು ಆಹಾರ ಕ್ರಮ (ಪಥ್ಯ)ವನ್ನು ಬರೆದುಕೊಟ್ಟಿದ್ದಾರೆ. ಜೈಲಿನ ಅಧಿಕಾರಿಗಳು ಇದನ್ನು ಒದಗಿಸುತ್ತಾರೆಯೋ ಎಂಬುದು ತಿಳಿದಿಲ್ಲ. ನಿಗದಿತ ಆಹಾರವನ್ನು ಒದಗಿಸುವಂತೆ ಇದುವರೆಗೆ ಅನುಮತಿ ನೀಡಿಲ್ಲ ಎಂದು ಅಧಿಕಾರಿ ತಿಳಿಸಿದಾಗ ಇನ್ನಷ್ಟು ಆತಂಕಕ್ಕೆ ಒಳಗಾದೆ .ಮಾರ್ಚ್ 21ರಂದು ಕಿಶೋರ್‌ಚಂದ್ರನ ವಕೀಲರನ್ನು ಸಂಪರ್ಕಿಸಿದ ಜೈಲು ಅಧಿಕಾರಿಗಳು ಔಷಧದ ಪಟ್ಟಿಯೊಂದನ್ನು ನೀಡಿ ತಕ್ಷಣ ಅವನ್ನು ತಲುಪಿಸುವಂತೆ ತಿಳಿಸಿದ್ದಾರೆ. ಅದರಂತೆ ತನ್ನ ಸಹೋದರ ಔಷಧವನ್ನು ಖರೀದಿಸಿ ಜೈಲಿನ ಅಧಿಕಾರಿಗಳಿಗೆ ತಲುಪಿಸಿದ್ದಾನೆ. ಔಷಧೋಪಚಾರ ಮತ್ತು ಪಥ್ಯಕ್ರಮ ತಕ್ಷಣ ಆರಂಭವಾಗಿ ಪತಿ ಶೀಘ್ರ ಚೇತರಿಸಿಕೊಳ್ಳುತ್ತಾರೆ ಎಂದು ಆಶಿಸುವುದಾಗಿ ರಂಜಿತಾ ಹೇಳಿದ್ದಾರೆ.

ಮಾರ್ಚ್ 12ರಂದು ಜೈಲಿನಲ್ಲಿ ಪತಿಯನ್ನು ಭೇಟಿಯಾದಾಗ ಅವರು ದೃಷ್ಟಿ ಮಂದವಾಗುತ್ತಿರುವ ಬಗ್ಗೆ ದೂರಿದ್ದರು. ಓರ್ವ ನರ್ಸ್ ಆಗಿರುವ ತನಗೆ ಬಹುಷಃ ಸಕ್ಕರೆಯ ಪ್ರಮಾಣ ಹೆಚ್ಚುತ್ತಿದೆ ಎಂಬ ಅನುಮಾನ ಮೂಡಿದೆ. ಆದ್ದರಿಂದ ಸಕ್ಕರೆಯ ಪ್ರಮಾಣ ಪರೀಕ್ಷಿಸಿಕೊಳ್ಳಲು ತಿಳಿಸಿದ್ದೆ ಮತ್ತು ಮರುದಿನ ‘ಗ್ಲುಕೋಮೀಟರ್’ ಅನ್ನು ಜೈಲು ಅಧಿಕಾರಿಗಳಿಗೆ ನೀಡಿ ಪತಿಗೆ ತಲುಪಿಸುವಂತೆ ವಿನಂತಿಸಿದ್ದೆ. ಆದರೆ, ಕೆಲ ದಿನದ ಬಳಿಕ ಈ ಬಗ್ಗೆ ವಿಚಾರಿಸಲು ತೆರಳಿದಾಗ ಅಧಿಕಾರಿಗಳು ಗ್ಲುಕೋಮೀಟರ್ ವಾಪಾಸು ಕೊಂಡೊಯ್ಯುವಂತೆ ತಿಳಿಸಿದರು. ಇದೀಗ ಮಾರ್ಚ್ 26 ಅಥವಾ 27ರಂದು ಪತಿಯನ್ನು ಭೇಟಿಯಾಗುವ ಅವಕಾಶ ಮತ್ತೆ ದೊರಕಿದಾಗ ಸಂಪೂರ್ಣ ಮಾಹಿತಿ ಸಿಗಬಹುದು ಎಂದು ರಂಜಿತಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News