ಪುತ್ತೂರು: ಯುವಕನೊಂದಿಗೆ ಪರಾರಿಯಾದ ಅಪ್ರಾಪ್ತೆ ಪತ್ತೆ

Update: 2019-03-23 13:37 GMT

ಪುತ್ತೂರು: ಅಸ್ಸಾಂ ಮೂಲದ ಯುವಕನೊಂದಿಗೆ ಪ್ರೇಮಾಂಕುರವಾಗಿ ಪರಾರಿಯಾಗಿದ್ದ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಕಟ್ಟತ್ತಾರು ಎಂಬಲ್ಲಿನ ಅಪ್ರಾಪ್ತೆ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯನ್ನು ಸಂಪ್ಯ ಪೊಲೀಸರು ಅಸ್ಸಾಂಗೆ ತೆರಳಿ ಕರೆ ತಂದಿದ್ದು, ಯುವಕ ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. 

ಕಟ್ಟತ್ತಾರು ಎಂಬಲ್ಲಿನ ನಿವಾಸಿ ಭಾಸ್ಕರ ಪೂಜಾರಿ ಎಂಬವರ ಜೊತೆಗೆ ಅಸ್ಸಾಂನ 6 ಮಂದಿ ಕಾರ್ಮಿಕರು ಗಾರೆ ಕೆಲಸ ಮಾಡಿಕೊಂಡಿದ್ದು, ಈ ಪೈಕಿ ಅಖ್ತರ್ ಹುಸೈನ್ ಎಂಬಾತ ಕಳೆದ 2 ವರ್ಷಗಳಿಂದ ಗಾರೆ ಕೆಲಸ ಮಾಡುತ್ತಿದ್ದು, ಅವರ ಮನೆಯಲ್ಲಿಯೇ ವಾಸವಾಗಿದ್ದ ಎನ್ನಲಾಗಿದೆ. ಈ ನಡುವೆ ಅಖ್ತರ್ ಹುಸೈನ್ ಮತ್ತು ಭಾಸ್ಕರ ಪೂಜಾರಿಯವರ ಪುತ್ರಿ ವಿದ್ಯಾರ್ಥಿನಿಯ ನಡುವೆ ಸ್ನೇಹ ಬೆಳೆದಿತ್ತು ಎನ್ನಲಾಗಿದ್ದು, ಮಾ.9ರಂದು ಇವರಿಬ್ಬರೂ ನಾಪತ್ತೆಯಾಗಿದ್ದರು. 

ತನ್ನ ಪುತ್ರಿಯನ್ನು ಅಸ್ಸಾಂ ಮೂಲದ ಹಿಂದಿ ಮಾತನಾಡುವ ಅಖ್ತರ್ ಹುಸೈನ್ ಎಂಬಾತ ಅಪಹರಿಸಿರುವುದಾಗಿ ಭಾಸ್ಕರ ಪೂಜಾರಿಯವರು ಸಂಪ್ಯ ಠಾಣೆಗೆ ದೂರು ನೀಡಿದ್ದರು. ಸಂಪ್ಯ ಎಸ್‍ಐ ಸಕ್ತಿವೇಲು ನೇತೃತ್ವದಲ್ಲಿ ಪೊಲೀಸ್ ತಂಡವು ಜೋಡಿಗಳ ಪತ್ತೆಗಾಗಿ ಪುತ್ತೂರು, ಮಂಗಳೂರು, ಕಾಸರಗೋಡು  ಸೇರಿದಂತೆ ಹಲವಾರು ಕಡೆಗಳಲ್ಲಿ ವ್ಯಾಪಕ ಹುಡುಕಾಟ ನಡೆಸಿದ್ದರು. ಬಳಿಕ ಅಸ್ಸಾಂಗೆ ತೆರಳಿ ಅಲ್ಲಿನ ಮಿಲಿಟರಿ ಪೊಲೀಸರ ನೆರವಿನೊಂದಿಗೆ ಅಸ್ಸಾಂ ಜೋಗಿಪುರ ಎಂಬಲ್ಲಿನ ಮನೆಯೊಂದರಿಂದ ಯುವತಿಯನ್ನು ವಶಕ್ಕೆ ಪಡೆದುಕೊಂಡು ಕರೆ ತಂದಿದ್ದಾರೆ. ಕಾರ್ಯಾಚರಣೆ ವೇಳೆಯಲ್ಲಿ ಆರೋಪಿ ಅಖ್ತರ್ ಹುಸೈನ್ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News