ರಂಗೇರಿದ ಲೋಕಸಭಾ ಚುನಾವಣಾ ರಣಕಣ

Update: 2019-03-30 16:56 GMT

ಬೆಂಗಳೂರು, ಮಾ. 30: ಬೇಸಿಗೆ ಬಿಸಿಲಿನ ಬೇಗೆ ಏರುತ್ತಿರುವಂತೆಯೆ ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಕಾವು ಏರುತ್ತಿದ್ದು ಪರಸ್ಪರ ಆರೋಪ-ಪ್ರತ್ಯಾರೋಪ, ಅಧಿಕಾರ ದುರ್ಬಳಕೆಯ ಸದ್ದು-ಸುದ್ದಿಗಳು ಹೆಚ್ಚಾಗಿವೆ.

ರಾಜ್ಯ-ದೇಶದ ಗಮನ ಸೆಳೆದಿರುವ ಮಂಡ್ಯ, ಹಾಸನ ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾಧಿಕಾರಿಗಳು ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲೆ ಮಂಡ್ಯಕ್ಕೆ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಮಧ್ಯೆ ಹಾಸನ ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷಾ ಅವರನ್ನು ವರ್ಗಾವಣೆ ಮಾಡಲಾಗಿದೆ.

ಮತ್ತೊಂದೆಡೆ ಐಟಿ ಅಧಿಕಾರಿಗಳು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ದಾಳಿ ಮುಂದುವರಿಸಿದ್ದು, ಮಂಡ್ಯದ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಅಕ್ಕಿ ಗಿರಣಿಗಳ ಮೇಲೆ ದಾಳಿ ಮಾಡಿದ್ದು, ಬೆದರಿಸಲು ಈ ತಂತ್ರ ಹೆಣೆದಿದ್ದಾರೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಮುಖಂಡರು, ಗುತ್ತಿಗೆದಾರರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರೆ, ಇವರಿಗೆ ಅಸಮಾಧಾನವೇಕೆ ಎಂದು ಪ್ರಶ್ನಿಸಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಏಕೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆಂದು ಲೇವಡಿ ಮಾಡಿದ್ದಾರೆ.

ಒತ್ತಡ ಆರೋಪ: ಇವಿಎಂನಲ್ಲಿ ಎ.ಸುಮಲತಾ ಎಂಬ ನನ್ನ ಹೆಸರು ಮೊದಲು ಬರಬೇಕಿತ್ತು. ಆದರೆ, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಕ್ರಮಸಂಖ್ಯೆ 1ನ್ನು ನೀಡಿದ್ದು, ನನಗೆ ಕ್ರಮಸಂಖ್ಯೆ 20ನ್ನು ನೀಡಿದ್ದು, ಚುನಾವಣಾಧಿಕಾರಿಗಳ ಮೇಲೆ ಒತ್ತಡ ಹೇರಿ ನನ್ನ ಹೆಸರನ್ನು ಕೊನೆಯಲ್ಲಿ ಬರುವಂತೆ ಮಾಡಲಾಗಿದೆ ಎಂದು ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಆರೋಪಿಸಿದ್ದಾರೆ.

ಈ ಆರೋಪಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಇವಿಎಂನಲ್ಲಿ ಮಾನ್ಯತೆ ಇರುವ ಪಕ್ಷಗಳ ಹೆಸರು ಮೊದಲಿಗೆ ಬರುತ್ತದೆ. ಹೀಗಾಗಿ ನಿಖಿಲ್ ಕುಮಾರಸ್ವಾಮಿಗೆ ಕ್ರಮಸಂಖ್ಯೆ 1 ಬಂದಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಆರೋಪಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು. ಮಂಡ್ಯ ಕ್ಷೇತ್ರದಲ್ಲಿ ಚುನಾವಣೆ ನೀತಿ ನಿಯಮದ ಪ್ರಕಾರ ಪ್ರಕ್ರಿಯೆ ನಡೆಯುತ್ತಿದೆ. ಅದರಲ್ಲಿ ತಪ್ಪು ಕಂಡರೆ ಯಾರು ಬೇಕಾದರೂ ಕೋರ್ಟ್‌ಗೆ ಹೋಗಲಿ. ಬಿಜೆಪಿಯವರು ಸುಮಲತಾ ಪರ ಪ್ರಚಾರ ಮಾಡುತ್ತಿರುವುದು ಸಂತೋಷ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.

ಎ.18ರಂದು ನಡೆಯಲಿರುವ ಮೊದಲ ಹಂತದಲ್ಲಿ 14 ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಪೈಪೋಟಿ ಏರ್ಪಟ್ಟಿದ್ದು, ರಾಜಕೀಯ ಮುಖಂಡರು ಬಿಸಿಲ ಬೇಗೆಯನ್ನು ಲೆಕ್ಕಿಸದೆ ಮತದಾರರ ಮನಗೆಲ್ಲಲು ಬೆವರು ಹರಿಸುತ್ತಿದ್ದಾರೆ.

ಜಟಾಪಟಿ: ಹಾಸನ ಜಿಲ್ಲೆ ಬೇಲೂರಿನಲ್ಲಿ ಏರ್ಪಡಿಸಿದ್ದ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಜಟಾಪಟಿ ನಡೆದಿದ್ದು, ಮುಖಂಡರ ಸಮ್ಮುಖದಲ್ಲೇ ಕಾರ್ಯಕರ್ತರು ಪರಸ್ಪರ ಕೈ-ಕೈ ಮಿಲಾಯಿಸಿದ್ದು, ಕುರ್ಚಿಗಳನ್ನು ಎಸೆದು ಗಲಾಟೆ ಮಾಡಿಕೊಂಡಿದ್ದಾರೆ.

Writer - -ಪ್ರಕಾಶ್ ರಾಮಜೋಗಿಹಳ್ಳಿ

contributor

Editor - -ಪ್ರಕಾಶ್ ರಾಮಜೋಗಿಹಳ್ಳಿ

contributor

Similar News