ಬಿಜೆಪಿಯೊಳಗಿನ ಮುಸುಕಿನ ಗುದ್ದಾಟ ತೇಜಸ್ವಿ ಸೂರ್ಯಗೆ ಮುಳುವಾಗಲಿದೆಯೇ ?

Update: 2019-04-07 16:24 GMT

ಬೆಂಗಳೂರು, ಎ.7: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಂದರ್ಭದಲ್ಲಿ ತೂಗಿ ಅಳೆದು, ಬಿಜೆಪಿ ರಾಜ್ಯ ನಾಯಕರ ಅರಿವಿಗೂ ಬಾರದಂತೆ ರಾತ್ರೋರಾತ್ರಿ ಆರೆಸ್ಸೆಸ್‌ನ ಕಟ್ಟಾಳು ತೇಜಸ್ವಿ ಸೂರ್ಯರಿಗೆ ಟಿಕೆಟ್ ನೀಡಿದ್ದು, ಇದರ ಹಿಂದಿನ ಮರ್ಮ ಏನು ಎಂಬುವುದು ನಿಗೂಢವಾಗಿದೆ.

ಈ ಕ್ಷೇತ್ರದ ಹಾಲಿ ಸಂಸದರಾಗಿದ್ದ ಕೇಂದ್ರ ಸಚಿವ ಎಚ್.ಎನ್.ಅನಂತಕುಮಾರ್ ಅನಾರೋಗ್ಯದಿಂದ ನಿಧನರಾದ ಬಳಿಕ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರೇ ಈ ಕ್ಷೇತ್ರದ ಮುಂದಿನ ಅಭ್ಯರ್ಥಿಯೆಂದು ಬಿಜೆಪಿ ನಾಯಕರು ಭರವಸೆ ನೀಡಿದ್ದರು. ಇದಕ್ಕೆ ಇಂಬು ಕೊಡುವಂತೆ ರಾಜ್ಯ ಬಿಜೆಪಿಯ ಯಾವ ನಾಯಕರು ಕೂಡ ತೇಜಸ್ವಿನಿ ಅನಂತಕುಮಾರ್ ಅವರನ್ನು ಹೊರತು ಪಡಿಸಿ ಪರ್ಯಾಯ ಹೆಸರನ್ನು ಎಲ್ಲಿಯೂ ಪ್ರಸ್ತಾಪಿಸಿರಲಿಲ್ಲ. ಹೀಗಾಗಿ ತೇಜಸ್ವಿನಿ ಅನಂತಕುಮಾರ್ ಕಳೆದ ಮೂರು ತಿಂಗಳಿನಿಂದ ಚುನಾವಣಾ ಪ್ರಚಾರದ ಸಿದ್ಧತೆಯಲ್ಲಿ ತೊಡಗಿದ್ದರು. ರಾಜ್ಯದ ಬಿಜೆಪಿ ನಾಯಕರ ಮಾತಿಗೆ ಮಾನ್ಯತೆ ಕೊಡದ ಬಿಜೆಪಿ ರಾಷ್ಟ್ರೀಯ ನಾಯಕರು, ರಾಜ್ಯದ ಆರೆಸ್ಸೆಸ್ ನಾಯಕರ ಮಾತಿಗೆ ತಲೆದೂಗಿ ತೇಜಸ್ವಿ ಸೂರ್ಯನಿಗೆ ಟಿಕೆಟ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. 

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಅದರಲ್ಲಿ ಗೋವಿಂದರಾಜ್‌ನಗರ, ಬಸವನಗುಡಿ, ಬೊಮ್ಮನಹಳ್ಳಿ, ಚಿಕ್ಕಪೇಟೆ, ಪದ್ಮನಾಭನಗರ ಬಿಜೆಪಿಯ ಹಿಡಿತದಲ್ಲಿದ್ದರೆ, ವಿಜಯನಗರ, ಬಿಟಿಎಂ ಲೇಔಟ್, ಜಯನಗರ ಕಾಂಗ್ರೆಸ್ ವಶದಲ್ಲಿದೆ. ಹೀಗಾಗಿ ಮೇಲ್ನೋಟಕ್ಕೆ ಬೆಂ.ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಲೆಯಿದೆ ಎಂದೆನಿಸುತ್ತದೆ. ಆದರೆ, ಯಾವಾಗ ದೆಹಲಿಯ ಬಿಜೆಪಿ ನಾಯಕರು ತೇಜಸ್ವಿನಿ ಅನಂತಕುಮಾರ್ ಬದಲಿಗೆ ತೇಜಸ್ವಿ ಸೂರ್ಯನಿಗೆ ಟಿಕೆಟ್ ನೀಡಿದರೊ, ಅಲ್ಲಿಂದೀಚೆಗೆ ಬಿಜೆಪಿ ಪಾಳಯದಲ್ಲಿ ಮುಸುಕಿನ ಗುದ್ದಾಟ ಶುರವಾಗಿದೆ. ತೇಜಸ್ವಿ ಸೂರ್ಯನಿಗೆ ಟಿಕೆಟ್ ನೀಡಿರುವುದಕ್ಕೆ ಬಿಜೆಪಿಯ ಪ್ರಮುಖ ನಾಯಕರಾದ ಪದ್ಮನಾಭ ಕ್ಷೇತ್ರದ ಶಾಸಕ ಆರ್.ಅಶೋಕ್, ಗೋವಿಂದರಾಜ್‌ ನಗರ ಕ್ಷೇತ್ರದ ಶಾಸಕ ವಿ.ಸೋಮಣ್ಣ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದರು.

ಇದರಿಂದ ಕ್ಷೇತ್ರದ ಬಜೆಪಿ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಬೇಕೇ ಬೇಡವೆ ಎಂಬ ಗೊಂದಲದಲ್ಲಿದ್ದರು. ಈ ವೇಳೆ ಆರೆಸ್ಸೆಸ್ ವರಿಷ್ಠರು ಮಧ್ಯೆ ಪ್ರವೇಶಿಸಿ ಆರ್.ಅಶೋಕ್ ಹಾಗೂ ವಿ.ಸೋಮಣ್ಣ ಅವರನ್ನು ಮನವೊಲಿಸಿ ಪ್ರಚಾರ ತೊಡಗುವಂತೆ ಸೂಚನೆ ನೀಡಿದ್ದಾರೆ. ಇಷ್ಟಾಗಿಯೂ ಕ್ಷೇತ್ರದಲ್ಲಿ ಬಿಜೆಪಿ ನಾಯಕರ ಹಾಗೂ ಕಾರ್ಯಕರ್ತರ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿದೆ. ಒಟ್ಟಾರೆ, ಬಿಜೆಪಿ ಪಾಳಯದಲ್ಲಿ ಮುಸುಕಿನ ಗುದ್ದಾಟ ಆರಂಭವಾಗಿದ್ದು, ಅದು ತೇಜಸ್ವಿ ಸೂರ್ಯಗೆ ದುಬಾರಿಯಾಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

ಅಷ್ಟಕ್ಕೂ, ಈ ಯುವ ಆರೆಸೆಸ್ಸ್ ಕಟ್ಟಾಳುವಿಗೆ ಟಿಕೆಟ್ ನೀಡಿರುವ ಹಿಂದಿನ ಉದ್ದೇಶವಾದರು ಏನು ? ಆರೆಸ್ಸೆಸ್ ನಾಯಕರಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕುರಿತು ಯಾಕಿಷ್ಟು ಆಸಕ್ತಿ ? ಎಂಬುದನ್ನು ಗಮನಿಸಿದರೆ ಕೆಲವೊಂದು ವಾಸ್ತವಾಂಶಗಳು ತೆರೆದುಕೊಳ್ಳುತ್ತದೆ.

ಆರೆಸ್ಸೆಸ್‌ನ ಕೇಂದ್ರ ಕಚೇರಿ ಕೇಶವಕೃಪ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿದೆ. ರಾಜ್ಯ ರಾಜಕಾರಣ ಹಾಗೂ ಬಿಜೆಪಿ ನಾಯಕರ ನಿಯಂತ್ರಣ ಇಲ್ಲಿಂದಲೇ ಎನ್ನುವ ಮಾತುಗಳು ಹಿಂದಿನಿಂದಲೂ ಕೇಳಿ ಬರುತ್ತಿದೆ. ಹೀಗಾಗಿ ಈ ಕ್ಷೇತ್ರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವಂತಹ ಅವಕಾಶ ಆರೆಸ್ಸೆಸ್ ನಾಯಕರಿಗೆ ಈ ಬಾರಿ ಸಿಕ್ಕಿತ್ತು. ಅದನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹಾಲಿ ಸಂಸದರಾಗಿದ್ದ ಅನಂತಕುಮಾರ್ ರಾಜ್ಯದ ಆರೆಸ್ಸೆಸ್ ನಾಯಕರನ್ನು ಮೀರಿ ತಮ್ಮ ವರ್ಚಸ್ಸನ್ನು ಬೆಳೆಸಿಕೊಂಡಿದ್ದರು. ಹೀಗಾಗಿ ಈ ಕ್ಷೇತ್ರದಲ್ಲಿ ಅನಂತಕುಮಾರ್ ಅವರ ಅರಿವಿಗೆ ಬಾರದಂತೆ ಆರೆಸ್ಸೆಸ್ ಯಾವ ಚಟುವಟಿಕೆಗಳನ್ನು ಕಾರ್ಯರೂಪಕ್ಕೆ ಇಳಿಸಲು ಸಾಧ್ಯವಾಗುತ್ತಿರಲಿಲ್ಲ. ಅದೇ ದಾರಿಯಲ್ಲಿ ತೇಜಸ್ವಿನಿ ಅನಂತಕುಮಾರ್ ಮುಂದುವರೆಯುತ್ತಿದ್ದಾರೆ ಎಂಬುದು ಆರೆಸ್ಸೆಸ್‌ಗೆ ಗೊತ್ತಿರುವ ವಿಚಾರ.

ಆರೆಸ್ಸೆಸ್ ನಾಯಕರಿಗೆ ತಮ್ಮ ಮಾತಿಗೆ ತಲೆತೂಗುವಂತಹ ಅಭ್ಯರ್ಥಿ ಬೇಕಿತ್ತು. ಅದರಲ್ಲೂ ಅದು ಬಸವನಗುಡಿಯ ಆಸುಪಾಸಿನವರೇ ಆಗಬೇಕಿತ್ತು. ಹೀಗಾಗಿ ಬಸವನಗುಡಿಯ ಬಿಜೆಪಿ ಶಾಸಕ ರವಿಸುಬ್ರಹ್ಮಣ್ಯ ಅವರ ಸಂಬಂಧಿ ತೇಜಸ್ವಿ ಸೂರ್ಯನಿಗೆ ಟಿಕೆಟ್ ನೀಡಿದೆ. ಆ ಮೂಲಕ ತಮ್ಮ ಮುಂದಿನ ಕಾರ್ಯ ಚಟುವಟಿಕೆಗಳಿಗೆ ಸುಗಮ ಹಾದಿಯನ್ನು ಮಾಡಿಕೊಂಡಿದೆ. ತೇಜಸ್ವಿ ಸೂರ್ಯನಿಗೆ ಟಿಕೆಟ್ ನೀಡಿದರೆ ಪಕ್ಷದ ಒಳಗಿಂದಲೇ ಕೆಲವೊಂದು ಅಪಸ್ವರಗಳು ಕೇಳಿ ಬರುತ್ತವೆ. ಹಾಗೂ ಅದರಿಂದ ಪ್ರಚಾರದಲ್ಲಿ ಏರುಪೇರು ಆಗಲಿದೆ ಎಂಬುದು ಆರೆಸ್ಸೆಸ್ ನಾಯಕರಿಗೆ ಅರಿವಿಗೆ ಬಂದಿರದೆ ಇರದು. ಆದಾಗ್ಯು ಈ ಗಟ್ಟಿ ನಿರ್ಧಾರದ ಹಿಂದೆ ಇರುವುದು ಆರೆಸ್ಸೆಸ್ ಕಾರ್ಯಕರ್ತರ ಮೇಲಿರುವ ವಿಶ್ವಾಸ. ಹಾಗೆ ನೋಡಿದರೆ ಬೆಂಗಳೂರು ದಕ್ಷಿಣ ಲೋಕಸಭೆ ಆರೆಸ್ಸೆಸ್‌ನ ಶಾಖೆಗಳು ಹೆಚ್ಚಾಗಿರುವ ಕ್ಷೇತ್ರವಾಗಿದೆ. ಹೀಗಾಗಿ ಆರೆಸ್ಸೆಸ್ ಕಾರ್ಯಕರ್ತರ ಪ್ರಾಮಾಣಿಕ ಪ್ರಚಾರವೇ ತೇಜಸ್ವಿ ಸೂರ್ಯನ ಗೆಲುವಿಗೆ ಮೆಟ್ಟಿಲಾಗಬಹುದು ಎಂಬುದು ಆರೆಸ್ಸೆಸ್ ನಾಯಕರ ಲೆಕ್ಕಾಚಾರವಾಗಿದೆ.

Writer - -ಮಂಜುನಾಥ ದಾಸನಪುರ

contributor

Editor - -ಮಂಜುನಾಥ ದಾಸನಪುರ

contributor

Similar News