‘ಚೌಕಿದಾರ್ ಹೆಸರಲ್ಲಿ ದೇಶ ಲೂಟಿಗೈದ ಮೋದಿ ಸರಕಾರ’

Update: 2019-04-13 17:07 GMT

ಮಂಗಳೂರು, ಎ.13: ಕಳೆದ 5 ವರ್ಷಗಳ ಹಿಂದೆ ಕಪ್ಪುಹಣ ತರುವುದಾಗಿ, ಭ್ರಷ್ಟಾಚಾರ ನಿಗ್ರಹಿಸುವುದಾಗಿ, ಅಚ್ಛೇದಿನ್, ಮುಂತಾದ ಪೊಳ್ಳು ಭರವಸೆ ನೀಡಿ, ಚೌಕಿದಾರ್ ಹೆಸರಿನಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶವನ್ನೇ ಲೂಟಿಗೈದಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಆರೋಪಿಸಿದರು.

ನಗರದ ಉರ್ವ ಸ್ಟೋರ್‌ನಲ್ಲಿ ಜರುಗಿದ ಸಿಪಿಎಂ ಪಕ್ಷದ ಕಾರ್ಯಕರ್ತರ, ಹಿತೈಷಿಗಳ ಸಭೆಯನ್ನುದ್ದೇಶಿಸಿ ಶನಿವಾರ ಅವರು ಮಾತನಾಡಿದರು.
ತನ್ನನ್ನು ತಾನು ಚಾಯ್‌ವಾಲಾ, ಫಕೀರ ಮುಂತಾದ ಹೆಸರಿನಿಂದ ಕರೆಸಿಕೊಂಡು ದೇಶದ ಜನರಿಗೆ ಮಂಕುಬೂದಿ ಎರಚಿ ಇಡೀ ದೇಶದ ಆರ್ಥಿಕತೆಯನ್ನೇ ಅಧೋಗತಿಗೆ ತಂದಿದ್ದಾರೆ. ನರೇಂದ್ರ ಮೋದಿ ಸರಕಾರ ಮತ್ತೊಮ್ಮೆ ಅಧಿಕಾರಕ್ಕೇರಿದರೆ ದೇಶದ ಜಾತ್ಯತೀತ ಪರಂಪರೆ ಮತ್ತಷ್ಟು ಅಪಾಯವನ್ನು ಎದುರಿಸಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ದೇಶ ಕಟ್ಟಬೇಕಾದ ಯುವ ಜನತೆಗೆ ತಾನು ಅಧಿಕಾರಕ್ಕೆ ಬಂದರೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ, ಅದಕ್ಕಾಗಿ ಮೇಕ್ ಇನ್ ಇಂಡಿಯಾ ಎಂಬ ಘೋಷಣೆಯನ್ನು ನೀಡಿದ ನರೇಂದ್ರ ಮೋದಿ, ಕಳೆದ 5 ವರ್ಷದಲ್ಲಿ ಸೃಷ್ಟಿಯಾಗಬೇಕಾಗಿದ್ದ 10 ಕೋಟಿ ಉದ್ಯೋಗದಲ್ಲಿ ಕನಿಷ್ಠ 10 ಲಕ್ಷ ಉದ್ಯೋಗವೂ ಸೃಷ್ಟಿಯಾಗಿಲ್ಲ ಎಂಬುದನ್ನು ಕೇಂದ್ರ ಸರಕಾರದ ಇಲಾಖೆಯೇ ದೃಢಪಡಿಸಿದೆ ಎಂದರು.

ನೋಟು ರದ್ದತಿಯಿಂದಾಗಿ ಇದ್ದ ಲಕ್ಷಾಂತರ ಉದ್ಯೋಗಗಳೇ ನಾಶವಾಗಿದೆ. ಸರಕಾರದ ತಪ್ಪು ನೀತಿಗಳಿಂದಾಗಿ ಲಕ್ಷಗಟ್ಟಲೇ ಕೈಗಾರಿಕೆಗಳು ಮುಚ್ಚುಗಡೆ ಯಾಗಿ ಕಾರ್ಮಿಕರು ಬೀದಿಪಾಲಾಗಿದ್ದಾರೆ. ನಿರುದ್ಯೋಗ ಸಮಸ್ಯೆ ಗಂಭೀರ ಹಂತಕ್ಕೆ ತಲುಪಿದೆ. ಕೆಲವೆಡೆ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಗೊಳಿಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರು.

ರಫೇಲ್ ಹಗರಣದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವೇ ನಡೆದಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆಗಳೇ ಕಳವಾಗಿದೆ ಎಂದು ದೇಶದ ಸರ್ವೋಚ್ಚ ನ್ಯಾಯಾಲ ಯಕ್ಕೆ ಸುಳ್ಳು ಹೇಳುವ ಮೂಲಕ ಭ್ರಷ್ಟಾಚಾರ ನಡೆದಿರುವುದನ್ನು ಒಪ್ಪಿಕೊಂಡಂತಾಗಿದೆ. ವಾಸ್ತವ ಹೀಗಿದ್ದರೂ ತನ್ನನ್ನು ತಾನು ದೇಶ ಕಾಯುವ ಕಾವಲುಗಾರನಂತೆ ಬಿಂಬಿಸಿ, ಚೌಕಿದಾರ್ ಹೆಸರಿನಲ್ಲಿ ಮತ್ತೆ ದೇಶವನ್ನು ಲೂಟಿಗೈಯಲು ಸಂಚು ರೂಪಿಸುತ್ತಿದೆ ಎಂದು ಹೇಳಿದರು.

ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿದ್ದರೂ ಕಳೆದ 25 ವರ್ಷಗಳಿಂದ ಬಿಜೆಪಿ ಗೆದ್ದು ಬಂದಿದ್ದರೂ ಯಾವುದೇ ಅಭಿವೃದ್ಧಿಯಾಗಿಲ್ಲ. ಕಳೆದ 10 ವರ್ಷಗಳಿಂದ ನಳಿನ್‌ಕುಮಾರ್ ಸಂಸದರಾಗಿದ್ದರೂ ಜಿಲ್ಲೆಯ ಅಭಿವೃದ್ಧಿಗೆ ಕಿಂಚಿತ್ತೂ ಶ್ರಮವಹಿಸಿಲ್ಲ. ಜಾತಿ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿ, ಹಿಂದುತ್ವದ ಅಮಲನ್ನು ಯುವಜನರ ತಲೆಗೇರಿಸಿದ್ದಾರೆ ಎಂದರು.

ಜಿಲ್ಲೆಯಲ್ಲಿ ಭಯದ ವಾತಾವರಣ ಸೃಷ್ಟಿಸಿ, ಬೆಂಕಿ ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆಯೇ ಹೊರತು, ಈ ಜಿಲ್ಲೆಯ ಯುವಜನರಿಗೆ ಉದ್ಯೋಗ ದೊರಕಿಸಲು ಎಲ್ಲಷ್ಟೂ ಪ್ರಯತ್ನಿಸಿಲ್ಲ.ಇಂತಹ ಸಂಸದರು ಪ್ರಜ್ಞಾವಂತ ಜಿಲ್ಲೆಯ ಪ್ರತಿಷ್ಠೆಗೆ ಕಪ್ಪು ಚುಕ್ಕೆ. ಅಂತಹವರನ್ನು ಹೀನಾಯವಾಗಿ ಸೋಲಿಸುವ ಮೂಲಕ ಪ್ರಬಲ ಜಾತ್ಯತೀತ ಶಕ್ತಿಗಳ ಗೆಲುವಿಗೆ ಶ್ರಮಿಸಬೇಕೆಂದು ಕರೆ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಸ್ಥಳೀಯ ಸಿಪಿಎಂ ನಾಯಕ ಮನೋಜ್ ಉರ್ವಸ್ಟೋರ್ ವಹಿಸಿದ್ದರು. ವೇದಿಕೆಯಲ್ಲಿ ಸಿಪಿಎಂ ನಾಯಕರಾದ ಪ್ರದೀಪ್, ರಘುವೀರ್, ಕಿಶೋರ್, ಇಕ್ಬಾಲ್, ನಾಗೇಂದ್ರ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News