ಮತದಾರರಿಗೆ ಆಮಿಷ ನೀಡುವ ವಾಹನಗಳ ವಿರುದ್ಧ ಕಠಿಣ ಕ್ರಮ: ಉಡುಪಿ ಡಿಸಿ ಎಚ್ಚರಿಕೆ

Update: 2019-04-14 15:50 GMT

ಉಡುಪಿ, ಎ.14: ಜಿಲ್ಲೆಯಲ್ಲಿ ಎ.18ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ಉಚಿತ ವಾಹನ ಸೌಕರ್ಯ, ಸಾಮರ್ಥ್ಯಕ್ಕಿಂತ ಹೆಚ್ಚು ಜನರ ಸಾಗಾಟ ಮುಂತಾದ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣವೇ ಸಂಬಂಧಪಟ್ಟ ವಾಹನಗಳನ್ನು ಸ್ಥಳದಲ್ಲೇ ಮುಟ್ಟುಗೋಲು ಹಾಕಿ, ವಾಹನ ಚಾಲಕರು ಹಾಗೂ ಮಾಲಕರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗು ವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಎಚ್ಚರಿಕೆ ನೀಡಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರವಿವಾರ ನಡೆದ ಜಿಲ್ಲೆಯ ಖಾಸಗಿ ಬಸ್ ಸಂಘ, ಆಟೋರಿಕ್ಷಾ ಚಾಲಕ ಮಾಲಕರ ಸಂಘ, ಟ್ಯಾಕ್ಸಿ ಚಾಲಕ ಮಾಲಕರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಈ ರೀತಿ ಕಾನೂನು ಉಲ್ಲಂಘಿಸುವ ವಾಹನವನ್ನು ಕೂಡಲೇ ಮುಟ್ಟು ಗೋಲು ಹಾಕಿ ಪರವಾನಿಗೆ ಅಮಾನತು, ಡ್ರೈವಿಂಗ್ ಲೈಸೆನ್ಸ್ ಅಮಾನತು ಮಾಡಲಾಗುವುದು. ಸಂಬಂದಪಟ್ಟ ವಾಹನ ಚಾಲಕ ಮತ್ತು ಮಾಲಕರ ವಿರುದ್ದ ಮೋಟಾರು ವಾಹನ ಕಾಯಿದೆ ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗುವುದು ಎಂದು ಅವರು ತಿಳಿಸಿದರು.

ಮತದಾನ ದಿನದಂದು ವಾಹನ ಚಾಲಕರು, ತಮ್ಮ ವಾಹನಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡು, ಅಧಿಕಾರಿಗಳ ಪರಿಶೀಲ ನೆಗೆ ನೀಡಿ ಸಹಕರಿಸಬೇಕು. ಈ ಮಾಹಿತಿಯನ್ನು ತಮ್ಮ ಸಂಘಗಳ ಮೂಲಕ ಎಲ್ಲಾ ಪದಾಧಿಕಾರಿಗಳಿಗೆ ತಲುಪಿಸಿ, ಯಾವುದೇ ಕಾರಣಕ್ಕೂ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಅವಕಾಶ ನೀಡಾರದು ಎಂದು ಅವರು ಸೂಚಿಸಿದರು.

ಮತಗಟ್ಟೆಯ 200 ಮೀಟರ್ ಒಳಗೆ ಯಾವುದೇ ವಾಹನ ಪ್ರವೇಶ ಮಾಡ ಬಾರದು. ಈಗಾಗಲೇ ಮತಗಟ್ಟೆಯ 200 ಮೀಟರ್ ಒಳಗೆ ರಿಕ್ಷಾ, ಟ್ಯಾಕ್ಸಿ ನಿಲ್ದಾಣ ಇದ್ದಲ್ಲಿ ಅವುಗಳನ್ನು ತಾತ್ಕಾಲಿವಾಗಿ ಮುಚ್ಚಬೇಕು. ವಾಹನಗಳ ಮೇಲೆ ನೀತಿ ಸಂಹಿತೆ ಉಲ್ಲಂಘನೆಯಾಗುವ, ಯಾವುದೇ ರಾಜಕೀಯ ಪಕ್ಷ ಮತ್ತು ವ್ಯಕ್ತಿಗಳ ಸ್ಟಿಕರ್ ಅಳವಡಿಸಿದಲ್ಲಿ ಸಹ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗು ವುದು. ಈ ಎಲ್ಲಾ ನಿಯಮಗಳು ಖಾಸಗಿ ವಾಹನಗಳೂ ಸೇರಿದಂತೆ ಎಲ್ಲಾ ವಾಹನಗಳಿಗೂ ಅನ್ವಯವಾಗಲಿದೆ ಎಂದು ಅವರು ಹೇಳಿದರು.

ಮತದಾರರು ರಾಜಕೀಯ ಪಕ್ಷ ಮತ್ತು ಅ್ಯರ್ಥಿಗಳು ನೀಡುವ ಉಚಿತ ಪ್ರಯಾಣದ ಆಮಿಷಗಳಿಗೆ ಒಳಗಾಗಬಾರದು. ಈ ರೀತಿ ಉಚಿತ ಆಮಿಷ ನೀಡಿ ಮತದಾರರನ್ನು ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಲ್ಲಿ ಸೀ ವಿಜಿಲ್ ಆಪ್ ಮೂಲಕ ಅಥವಾ ಉಚಿತ ಸಹಾಯವಾಣಿ ಸಂಖ್ಯೆ 1950ಗೆ ಕೂಡ ಮಾಹಿತಿ ನೀಡಿದಲ್ಲಿ ಸಂಬಂಧಪಟ್ಟವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಮಕೃಷ್ಣ ರೈ ಹಾಗೂ ವಿವಿಧ ವಾಹನ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News