ನಗರ : ಇತಿಹಾಸ ಪ್ರಸಿದ್ಧ ದರ್ಗಾ ಉರೂಸ್ ಗೆ ಚಾಲನೆ

Update: 2019-04-14 16:36 GMT

ಹೊಸನಗರ, ಎ.14: ತಾಲೂಕಿನ ಬಿದನೂರು ನಗರದಲ್ಲಿರುವ ಇತಿಹಾಸ ಪ್ರಸಿದ್ಧ ಹಝ್ರತ್ ಶೇಖುಲ್ ಅಕ್ಬರ್ ಅನ್ವರ್  ವಲಿಯುಲ್ಲಾ ದರ್ಗಾ ಇದರ ಉರೂಸ್‌ಗೆ ಶುಕ್ರವಾರ ರಾತ್ರಿ ಚಾಲನೆ ನೀಡಲಾಗಿದೆ.

ಕಾರ್ಗಲ್ ಸಿರಾಜ್ ತಂಙಳ್‌ ನೇತೃತ್ವದಲ್ಲಿ ದುಆದೊಂದಿಗೆ ನಾಲ್ಕು ದಿನಗಳ ಕಾಲ ನಡೆಯುವ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮಗ್ರಿಬ್ ನಮಾಝಿನ ಬಳಿಕ ಮೌಲೂದ್ ಪಾರಾಯಣ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ದ.ಕ., ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿ ಹರಕೆ ಕಾಣಿಕೆ ಅರ್ಪಿಸಿದರು.

ಉರೂಸ್‌ಗೆ ಸಕಲ ಸಿದ್ಧತೆ: ಈಗಾಗಲೇ ಉರೂಸ್‌ಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ದೂರದೂರಿನಿಂದ ಬರುವ ಭಕ್ತಾದಿಗಳಿಗೆ ಸೂಕ್ತ ಮೂಲ ಸೌಲಭ್ಯ ಒದಗಿಸಲಾಗಿದೆ. ಭಕ್ತರ ಹಲವು ವರ್ಷಗಳ ಬೇಡಿಕೆಯಾಗಿದ್ದ ಮಹಿಳೆಯರಿಗೆ ಪ್ರತ್ಯೇಕ ನಮಾಝ್ ನಿರ್ವಹಿಸಲು ಸ್ಥಳ, ವಾಹನ ನಿಲುಗಡೆ ಮೈದಾನ ನಿರ್ಮಾಣ, ದರ್ಗಾ ಮುಂಭಾಗದ ಮೈದಾನ ಅಗಲೀಕರಣ ಕಾಮಗಾರಿಯನ್ನು ಅಬ್ಬಾಸ್ ನೂಲಿಗ್ಗೇರಿ, ಖಾದರ್ ನಿಟ್ಟೂರು, ಸಾದಿಕ್ ಕಚ್ಚಿಗೆಬೈಲು, ಯೂಸುಫ್ ಸಾಬ್ ಹೊಸನಗರ ಇವರ ನೇತೃತ್ವದಲ್ಲಿ ಕೈಗೊಳ್ಳಲಾಗಿದೆ ಎಂದು ಉರೂಸ್ ಸಮಿತಿ ಅಧ್ಯಕ್ಷ ವಿನಾಯಕ ಉಡುಪ ಹೇಳಿದ್ದಾರೆ.

ನೂತನ ದರ್ಗಾ ಕಚೇರಿ ಉದ್ಘಾಟನೆ: ಭಕ್ತಾದಿಗಳ ಸಂಪರ್ಕ ಮತ್ತು ಸೂಕ್ತ ಮಾಹಿತಿ ನೀಡಲು ಪೂರಕವಾಗಿ ನೂತನವಾಗಿ ನಿರ್ಮಿಸಲಾದ ದರ್ಗಾ ಕಚೇರಿಯನ್ನು ಉರೂಸ್ ಸಮಿತಿ ಗೌರವಾಧ್ಯಕ್ಷ ಪಟೇಲ್ ಗರುಡಪ್ಪ ಗೌಡ ಉದ್ಘಾಟಿಸಿದರು.

ಪ್ರಮುಖರಾದ ಜಿ.ಮುಹಮ್ಮದ್ ಸಾಬ್, ಅಬ್ಬಾಸ್ ನೂಲಿಗ್ಗೇರಿ, ಚಾಬುಸಾಬ್ ರಿಪ್ಪನ್‌ಪೇಟೆ, ಯಾಕೂಬ್ ಹೊಸನಗರ ಕಚ್ಚಿಗೆಬೈಲು ಸಾದಿಕ್, ಖಾದರ್ ನಿಟ್ಟೂರು, ಸಿದಿಹಬ್ಬ ಹೊಸನಗರ, ಸಾಬ್‌ಜನ್‌ಸಾಬ್ ನಗರ ಉರೂಸ್ ಮತ್ತು ದರ್ಗಾ ಸಮಿತಿ ಪ್ರತಿನಿಧಿಗಳು ಇದ್ದರು.

ಉರೂಸ್‌ ಹಿನ್ನೆಲೆ: ಹಿರಿಯ ಸ್ವಾತಂತ್ರ ಹೋರಾಟಗಾರ ಎನ್. ವೆಂಕಟರಮಣ ಉಡುಪರಿಗೆ 46 ವರ್ಷದ ಹಿಂದೆ ಅವರ ಕನಸ್ಸಿನಲ್ಲಿ ಬಂದ ಹಝ್ರತ್ ಅವರು ಜನವಸತಿ ಇರದ ನಿರ್ಜನ ಪ್ರದೇಶವೊಂದರಲ್ಲಿ ನೆಲೆನಿಂತಿದ್ದು ವರ್ಷಂಪ್ರತಿ ಉರೂಸ್ ಆಚರಿಸಲು ಸೂಚನೆ ನೀಡಿದ್ದರು. ಆನಂತರ ಸಿ.ವೆಂಕಟರಮಣ ಉಡುಪರ ನೇತೃತ್ವದಲ್ಲಿ ಉರೂಸ್ ನಡೆಯುತ್ತಾ ಬಂದಿದೆ. ಅವರ ಕಾಲಾ ನಂತರ ಅವರ ಮಗ ವಿನಾಯಕ ಉಡುಪರ ನೇತೃತ್ವದಲ್ಲಿ ಮುಂದುವರಿದಿದೆ. ಹಿಂದೂ-ಮುಸ್ಲಿಮ್ ಭಾವೈಕ್ಯತಾ ತಾಣವಾಗಿ ನಗರ ದರ್ಗಾ ಮಹತ್ವ ಪಡೆದಿದೆ. ವರ್ಷಂ ಪ್ರತಿ ನಡೆಯುವ ಉತ್ಸವದಲ್ಲಿ ಮುಸ್ಲಿಮ್ ಸಮುದಾಯ ಮಾತ್ರವಲ್ಲದೆ ಬಹುತೇಕ ಹಿಂದೂಗಳು ಈ ದರ್ಗಾಕ್ಕೆ ಬರುತ್ತಿರುವುದು ಇಲ್ಲಿಯ ವಿಶೇಷವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News