ಭೀಕರ ಅಪಘಾತ: ಪಾದಚಾರಿ ಮಹಿಳೆ ಮೃತ್ಯು, ಇಬ್ಬರಿಗೆ ಗಾಯ

Update: 2019-04-15 18:35 GMT

ಮಂಗಳೂರು, ಎ.15: ನಗರದ ಹೊರವಲಯದ ಅಡ್ಯಾರ್ ಸೋಮನಾಥಕಟ್ಟೆ ಬಳಿ ಸೋಮವಾರ ಮುಂಜಾನೆ ನಡೆದ ಭೀಕರ ಅಪಘಾತದಲ್ಲಿ ಪಾದಚಾರಿ ಮಹಿಳೆಯೊಬ್ಬರು ಗಂಭೀರ ಗಾಯಗೊಂಡು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ವಳಚ್ಚಿಲ್ ನಿವಾಸಿ ಮೀನಾಕ್ಷಿ (55) ಮೃತಪಟ್ಟವರು. ಗೀತಾ (50), ಗೌತಮಿ (22) ಗಾಯಗೊಂಡವರು.

ಘಟನೆ ವಿವರ: ಮೂವರು ಮಹಿಳೆಯರು ಅಡ್ಯಾರ್ ದೇವಸ್ಥಾನದಲ್ಲಿ ನಡೆಯುತ್ತಿರುವ ಜಾತ್ರೆಗೆ ಬಂದಿದ್ದರು. ಆ ಬಳಿಕ ರಾತ್ರಿ 2 ಗಂಟೆ ಹೊತ್ತಿಗೆ ಮುಗಿಲಗುಡ್ಡೆ ತಮ್ಮ ಸಂಬಂಧಿಕರ ಮನೆಗೆ ಹೆದ್ದಾರಿ ಬದಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಮಂಗಳೂರಿನಿಂದ ಬಂಟ್ವಾಳಕ್ಕೆ ಹೋಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮಹಿಳೆಯರಿಗೆ ಢಿಕ್ಕಿಯಾಗಿದೆ. ಇದರ ಪರಿಣಾಮ ಮೀನಾಕ್ಷಿ ಮೃತಪಟ್ಟರೆ, ಉಳಿದಿಬ್ಬರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನ ಚಾಲಕ ಬಂಟ್ವಾಳದವರೆಂದು ತಿಳಿದು ಬಂದಿದೆ.
ಈ ಬಗ್ಗೆ ಕಂಕನಾಡಿ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News