ಶೂಟಿಂಗ್ ಬ್ಯುಸಿ ಮಧ್ಯೆ ಮತದಾನಕ್ಕಾಗಿ ಉಡುಪಿಗೆ ಆಗಮಿಸಿದ ನಟ ರಕ್ಷಿತ್ ಶೆಟ್ಟಿ

Update: 2019-04-18 10:51 GMT

ಉಡುಪಿ, ಎ.18: ಶೂಟಿಂಗ್ ಬ್ಯುಸಿ ಮಧ್ಯೆ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಬೆಂಗಳೂರಿನಿಂದ ಉಡುಪಿಗೆ ಆಗಮಿಸಿ ಕುಕ್ಕಿಕಟ್ಟೆಯ ಮತಗಟ್ಟೆಯಲ್ಲಿ ಮತದಾನದ ಹಕ್ಕನ್ನು ಚಲಾಯಿಸಿದರು.

ಎ.17ರಂದು ರಾತ್ರಿ ಪೂರ್ತಿ ಬೆಂಗಳೂರಿನಲ್ಲಿ ‘ಅವನೇ ಶ್ರೀಮನ್ನಾರಾಯಣ’ ಸಿನೆಮಾ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದ ಉಡುಪಿ ಅಲೆವೂರು ನಿವಾಸಿ ರಕ್ಷಿತ್ ಶೆಟ್ಟಿ, ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕಾಗಿಯೇ ಇಂದು ಬೆಳಗಿನ ಜಾವ ಐದು ಗಂಟೆ ಸುಮಾರಿಗೆ ಶೂಟಿಂಗ್ ಮುಗಿಸಿ ಕಾರಿನಲ್ಲಿ ಉಡುಪಿಗೆ ಹೊರಟಿದ್ದರು. ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಅಲೆವೂರಿನ ಮನೆ ತಲುಪಿದ ರಕ್ಷಿತ್ ಶೆಟ್ಟಿ, ಬಳಿಕ ಕುಟುಂಬದವರೊಂದಿಗೆ ಕುಕ್ಕಿಕಟ್ಟೆ ಅನುದಾನಿತ ಶಾಲೆಯಲ್ಲಿರುವ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.

ಮತ್ತೆ ಇಂದು ರಾತ್ರಿ ಬೆಂಗಳೂರಿಗೆ ತೆರಳಲಿರುವ ರಕ್ಷಿತ್ ಶೆಟ್ಟಿ, ಶುಕ್ರವಾರ ಬೆಳಗ್ಗೆಯಿಂದ ಬೆಂಗಳೂರಿನಲ್ಲಿ ಮತ್ತೆ ಶೂಟಿಂಗ್‌ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಕ್ಷಿತ್ ಶೆಟ್ಟಿ, ಶೂಟಿಂಗ್ ಮುಗಿಸಿ ಮತದಾನ ಮಾಡುವುದಕ್ಕಾಗಿಯೇ ಉಡುಪಿಗೆ ಆಗಮಿಸಿದ್ದೇನೆ. ಮತ್ತೆ ಇಂದೇ ಬೆಂಗಳೂರಿಗೆ ಹೊರಟು ನಾಳೆ ಬೆಳಗ್ಗೆ ಶೂಟಿಂಗ್‌ನಲ್ಲಿ ತೊಡಗಿಸಿಕೊಳ್ಳಲಿದ್ದೇನೆ. ಅಧಿಕಾರಕ್ಕೆ ಬಂದವರು ದೇಶಕ್ಕೆ ಒಳ್ಳೆಯ ಕೆಲಸ ಮಾಡಬೇಕು. ಆ ಮೂಲಕ ಭಾರತ ಕೂಡ ಇತರ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಒಂದಾಗಬೇಕು.

‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಬಗ್ಗೆ ಮಾತನಾಡಿದ ಅವರು, ಐದು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಈ ಸಿನೆಮಾ ಆಗಸ್ಟ್‌ನಲ್ಲಿ ತೆರೆಕಾಣಲಿದೆ ಎಂದರು 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News