ಪ್ರಜ್ಞಾ ಸಿಂಗ್ ಭಯೋತ್ಪಾದನೆ ಆರೋಪದಲ್ಲಿ ಖುಲಾಸೆಗೊಂಡಿದ್ದಾರೆಯೇ?: ಇಲ್ಲಿದೆ ವಾಸ್ತವ

Update: 2019-04-19 06:53 GMT

ಮಾಲೆಗಾಂವ್‍ ನಲ್ಲಿ 2008ರಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ಆರೋಪಿ ಪ್ರಜ್ಞಾ ಠಾಕೂರ್, ಬಿಜೆಪಿ ಟಿಕೆಟ್ ನಲ್ಲಿ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಭೋಪಾಲ್‍ ನಿಂದ ಪ್ರಜ್ಞಾ ರನ್ನು ಅಭ್ಯರ್ಥಿಯಾಗಿ ಬಿಜೆಪಿ ಘೋಷಿಸಿದ ಬೆನ್ನಲ್ಲೇ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಭಯೋತ್ಪಾದನೆ ಆರೋಪಿಯನ್ನು ಅಭ್ಯರ್ಥಿಯಾಗಿ ಘೋಷಿಸಿರುವ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನಟಿ ಸ್ವರಾ ಭಾಸ್ಕರ್ ಹೀಗೆ ಆಕ್ರೋಶ ವ್ಯಕ್ತಪಡಿಸಿದವರಲ್ಲೊಬ್ಬರು. ಪ್ರಜ್ಞಾರನ್ನು ಮಾಲೆಗಾಂವ್ ಭಯೋತ್ಪಾದಕ ಆರೋಪಿ ಮತ್ತು ರಾಜಕೀಯ ಭಯೋತ್ಪಾದಕಿ ಎಂದು ಉಲ್ಲೇಖಿಸಿರುವ ಅವರು, ಆಡಳಿತ ಪಕ್ಷದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಆದರೆ ಸ್ವರಾ ಭಾಸ್ಕರ್ ರ ಈ ಟ್ವೀಟ್ ಗೆ ಪತ್ರಕರ್ತ ಹಾಗೂ ನೆಟ್‍ ವರ್ಕ್ 18 ಕಾರ್ಯನಿರ್ವಾಹಕ ಸಂಪಾದಕ ಅಮೀಶ್ ದೇವಗನ್, "ಪ್ರಜ್ಞಾ ಅವರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ" ಎಂದು ಟ್ವೀಟ್ ಮಾಡಿದ್ದಾರೆ.

"ಅವರನ್ನು ನ್ಯಾಯಾಲಯ ಆರೋಪಮುಕ್ತಗೊಳಿಸಿದೆ. ಅದು ಹಿಂದೂ ಭಯೋತ್ಪಾದನೆಯ ಸುಳ್ಳು ಪ್ರಚಾರ. ಈಗ ನೀವು ನ್ಯಾಯಾಲಯದ ಮೇಲೂ ವಿಶ್ವಾಸ ಹೊಂದಿಲ್ಲವೇ?" ಎಂದು ಅಮೀಶ್ ದೇವಗನ್ ಟ್ವೀಟಿಸಿದ್ದಾರೆ. ಎಪ್ರಿಲ್ 17ರಂದು ಅಮೀಶ್ ಮಾಡಿದ ಈ ಟ್ವೀಟನ್ನು 5000 ಬಾರಿ ಮರುಟ್ವೀಟ್ ಮಾಡಲಾಗಿದೆ ಹಾಗೂ 13 ಸಾವಿರ ಬಾರಿ ಲೈಕ್ ಮಾಡಲಾಗಿದೆ. ದೇವಗನ್ ಹೊರತಾಗಿ ಹಲವು ಬಿಜೆಪಿ ಪರ ಹ್ಯಾಂಡಲ್‍ ಗಳು ಪ್ರಜ್ಞಾರನ್ನು ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ಆರೋಪಮುಕ್ತಗೊಳಿಸಲಾಗಿದೆ ಎಂದು ಸಮರ್ಥಿಸಿಕೊಂಡಿವೆ.

"ಕನ್ಹಯ್ಯ ಆರೋಪ ಸಾಬೀತಾಗುವವರೆಗೂ ಅಮಾಯಕ. ಆದರೆ ಸಾಧ್ವಿ ಪ್ರಜ್ಞಾ ಮಾತ್ರ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ದೋಷಮುಕ್ತಗೊಂಡರೂ ಇನ್ನೂ ಆರೋಪಿ. ವೈಬ್ರೇಟರ್ ಬ್ಯಾಟರಿ ಡೌನ್ ಆಗಿದೆಯೇ?" ಎಂದು ಚೌಕಿದಾರ್ ಸಫ್ರೋನಿಸ್ಟಾ ಎಂಬ ಹ್ಯಾಂಡಲ್‍ ನಿಂದ ಟ್ವೀಟ್ ಮಾಡಲಾಗಿದೆ. ಈ ಮೇಲಿನ ಟ್ವೀಟ್ 900 ಬಾರಿ ಮರುಟ್ವೀಟ್ ಆಗಿದೆ. ಇಂಥದ್ದೇ ಪ್ರತಿಪಾದನೆ ಮಾಡುತ್ತಿರುವ ಇತರ ಪ್ರಮುಖ ಹ್ಯಾಂಡಲ್ ಗಳೆಂದರೆ ರಿತು ರಾಥೋರ್ ಮತ್ತು ದೇಸಿಮೊಜಿಟೊ.

"ಉಗ್ರರಾದ ಯಾಕುಬ್ ಮೆನನ್ ಮತ್ತು ಕಸಬ್ ಪರವಾಗಿ ಅರ್ಜಿ ಸಲ್ಲಿಸಿದ ಉದಾರವಾದಿಗಳು, ಸಾಧ್ವಿ ಪ್ರಜ್ಞಾಗೆ ಬಿಜೆಪಿ ಟಿಕೆಟ್ ನೀಡಿದ್ದಕ್ಕೆ ಉರಿದುಕೊಳ್ಳುತ್ತಿದ್ದಾರೆ. ಆರೋಪಪಟ್ಟಿಯನ್ನೂ ಸಲ್ಲಿಸದೇ ಎಂಟು ವರ್ಷ ಕಾಲ ಜೈಲುವಾಸ, ನಾಲ್ಕನೇ ದರ್ಜೆ ಚಿತ್ರಹಿಂಸೆ ಅನುಭವಿಸಿದ ಅವರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿರುವುದು ಇವರಿಗೆ ಏನೂ ಅಲ್ಲ!" ಎಂದು ರಿತು ಟ್ವೀಟ್ ಮಾಡಿದ್ದಾರೆ.

ವಾಸ್ತವವೇನು?

ದೋಷಮುಕ್ತಿ ಎಂದರೆ ತೀರ್ಪಿನಲ್ಲಿ ಒಬ್ಬ ವ್ಯಕ್ತಿಯನ್ನು ಆಪರಾಧ ಆರೋಪದಿಂದ ಸಂಪೂರ್ಣವಾಗಿ ಮುಕ್ತಗೊಳಿಸುವುದು. ತೀರ್ಪಿನ ಮೂಲಕ ಆರೋಪಿಗಳನ್ನು ಯಾವುದೇ ತಪ್ಪು ಎಸಗಿಲ್ಲ ಎಂದು ಘೋಷಿಸುವುದು. ಇದನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿದೆ (ಕೆಳಹಂತದ ನ್ಯಾಯಾಲಯ ಈ ತೀರ್ಪು ನೀಡಿದಲ್ಲಿ). ದೋಷಮುಕ್ತಿ ಎಂದರೆ ತಪ್ಪು ಎಸಗಿಲ್ಲ ಎಂಬ ಅರ್ಥ. ಆದರೆ ಪ್ರಜ್ಞಾ ಸಿಂಗ್ ಠಾಕೂರ್ ಪ್ರಕರಣದಲ್ಲಿ ಗಮನಿಸಬೇಕಾದ ಅಂಶವೆಂದರೆ, ಆಕೆಯನ್ನು ದೋಷಮುಕ್ತಗೊಳಿಸಿಲ್ಲ.

ಪ್ರಜ್ಞಾ ಠಾಕೂರ್ ಸದ್ಯ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ. ಅನಾರೋಗ್ಯ ಕಾರಣಕ್ಕಾಗಿ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ. ನ್ಯಾಯಮೂರ್ತಿಗಳಾದ ಶಾಲಿನಿ ಫನ್ಸಾಲ್ಕರ್ ಜೋಶಿ ಮತ್ತು ರಂಜಿತ್ ಮೋರೆ ಅವರನ್ನೊಳಗೊಂಡ ಹೈಕೋರ್ಟ್ ನ್ಯಾಯಪೀಠ ಅವರಿಗೆ ನೀಡಿದ ಜಾಮೀನು ಆದೇಶದಲ್ಲಿ, ‘ಸ್ತನ ಕ್ಯಾನ್ಸರ್‍ನಿಂದ ಬಳಲುತ್ತಿರುವ’ ಮತ್ತು ‘ಬೇರೆಯವರ ಸಹಾಯ ಇಲ್ಲದೇ ನಡೆದಾಡಲು ಸಾಧ್ಯವಿಲ್ಲದ ಕಾರಣ’ ಪ್ರಜ್ಞಾಗೆ ಜಾಮೀನು ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ.

ಮಾಲೆಗಾಂವ್ ನಲ್ಲಿ 2008ರಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಪ್ರಜ್ಞಾ ಹಾಗೂ ಇತರ ಆರೋಪಿಗಳ ವಿಚಾರಣೆ ಇನ್ನೂ ನಡೆಯುತ್ತಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯ ವಿವಿಧ ಸೆಕ್ಷನ್ ಗಳಡಿ ಪ್ರಜ್ಞಾ ವಿರುದ್ಧ ಆರೋಪ ಹೊರಿಸಲಾಗಿದೆ. 2017ರ ಡಿಸೆಂಬರ್‍ ನಲ್ಲಿ ಎನ್‍ಐಎ ನ್ಯಾಯಾಲಯ ತೀರ್ಪು ನೀಡಿ, ಸಾಧ್ವಿ ಪ್ರಜ್ಞಾ, ಲೆಫ್ಟಿನೆಂಟ್ ಕರ್ನಲ್ ಪ್ರಶಾಂತ್ ಪುರೋಹಿತ್ ಹಾಗೂ ಇತರ ಆರು ಮಂದಿಯ ವಿರುದ್ಧ ಯುಎಪಿಎ ಅಡಿಯಲ್ಲಿ ಆರೋಪ ಹೊರಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಎಂದರೆ, "ವ್ಯಕ್ತಿಗಳ ಹಾಗೂ ಸಂಘಟನೆಗಳ ಕೆಲ ನಿರ್ದಿಷ್ಟ ಕಾನೂನುಬಾಹಿರ ಚಟುವಟಿಕೆಗಳನ್ನು ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ತಡೆಯಲು ಅವಕಾಶ ನೀಡುವ ಕಾಯ್ದೆ (ಉಗ್ರಗಾಮಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ)". ಈ ಸಂಬಂಧ 1967ರಲ್ಲಿ ಸುಗ್ರೀವಾಜ್ಞೆ ಹೊರಡಿಸಲಾಗಿದ್ದು, ಆ ಬಳಿಕ ಹಲವು ಬಾರಿ ಅದಕ್ಕೆ ತಿದ್ದುಪಡಿ ತರಲಾಗಿದೆ.

ಆದರೆ ನ್ಯಾಯಾಲಯ ಮಹಾರಾಷ್ಟ್ರ ಕಂಟ್ರೋಲ್ ಆಫ್ ಆರ್ಗನೈಸ್ಡ್ ಕ್ರೈಮ್ ಆ್ಯಕ್ಟ್ (ಎಂಕೋಕಾ) ಅಡಿಯಲ್ಲಿನ ಆರೋಪದಿಂದ ಮಾತ್ರ ಆರೋಪಿಗಳನ್ನು ಮುಕ್ತಗೊಳಿಸಿದೆ. ಎಂಕೋಕಾ ಆರೋಪದಿಂದ ಮುಕ್ತಗೊಳಿಸಿದ್ದನ್ನು, ದೋಷಮುಕ್ತಿ ಅಥವಾ ಆರೋಪಮುಕ್ತ ಎಂದು ತಪ್ಪಾಗಿ ಗ್ರಹಿಸಬಾರದು. ದೋಷಮುಕ್ತಿ ಎಂದರೆ ಒಂದು ಆರೋಪದಿಂದ ಸಂಪೂರ್ಣವಾಗಿ ದೋಷಮುಕ್ತವಾಗುವುದು. ಸ್ಫೋಟಕ್ಕೆ ಬಳಸಲಾದ ಮೋಟಾರ್ ಸೈಕಲ್ ಅವರ ಹೆಸರಿನಲ್ಲಿ ನೋಂದಣಿಯಾಗಿರುವ ಹಿನ್ನೆಲೆಯಲ್ಲಿ ಪ್ರಜ್ಞಾ ಪಾತ್ರದ ಬಗ್ಗೆ ತನಿಖಾ ಸಂಸ್ಥೆಗಳು ಕಣ್ಣಿಟ್ಟಿದ್ದವು. ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ಪಡೆ (ಎಟಿಎಸ್) ಸಲ್ಲಿಸಿದ ಆರೋಪಪಟ್ಟಿಯ ಪ್ರಕಾರ, 2006ರಿಂದೀಚೆಗೆ ನಡೆದ ಕ್ರಾಂತಿಕಾರಕ ಚಟುವಟಿಕೆಗಳಿಗೆ ಸಂಬಂಧಿಸಿದ ಬಹುತೇಕ ಎಲ್ಲ ಸಭೆಗಳಿಗೆ ಪ್ರಜ್ಞಾ ಹಾಜರಾಗಿದ್ದರು. ಇದರಲ್ಲಿ ಮುಸ್ಲಿಂ ಬಾಹುಳ್ಯದ ಪ್ರದೇಶಗಳ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಲಾಗಿತ್ತು. ಈ ದಾಳಿಗಳನ್ನು ಕಾರ್ಯಗತಗೊಳಿಸಲು ಸೂಕ್ತ ವ್ಯಕ್ತಿಗಳ ಹುಡುಕಾಟದ ಹೊಣೆಯನ್ನೂ ಆಕೆ ವಹಿಸಿಕೊಂಡಿದ್ದರು ಎಂದೂ ಆರೋಪಿಸಲಾಗಿದೆ.

ಇಲ್ಲಿ ವಾಸ್ತವ ಅಂಶವೆಂದರೆ, 2008ರ ಮಾಲೇಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ಞಾ ಪಾತ್ರದ ಬಗೆಗಿನ ಆರೋಪದಿಂದ ನ್ಯಾಯಾಲಯ ಅವರನ್ನು ಮುಕ್ತಗೊಳಿಸಿಲ್ಲ. ಬಿಜೆಪಿ ಪರ ಟ್ರೋಲ್ ಗಳು ಮತ್ತು ಕೆಲ ಪ್ರಮುಖ ವ್ಯಕ್ತಿಗಳು ಈ ಸಂಬಂಧ ಮಾಡುತ್ತಿರುವ ಪ್ರತಿಪಾದನೆಗಳು ಶುದ್ಧ ಸುಳ್ಳು.

Writer - ಅರ್ಜುನ್ ಸಿದ್ಧಾರ್ಥ್, altnews.in

contributor

Editor - ಅರ್ಜುನ್ ಸಿದ್ಧಾರ್ಥ್, altnews.in

contributor

Similar News