ಉಡುಪಿ: ಸೈಂಟ್ ಸಿಸಿಲೀಸ್ ಮತ ಎಣಿಕಾ ಕೇಂದ್ರಕ್ಕೆ ಬಿಗಿ ಭದ್ರತೆ

Update: 2019-04-19 15:07 GMT

ಉಡುಪಿ, ಎ.19: ಗುರುವಾರ ಮತದಾನ ನಡೆದ ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಎಲ್ಲಾ ವಿದ್ಯುನ್ಮಾನ ಮತಯಂತ್ರಗಳನ್ನು ಬ್ರಹ್ಮಗಿರಿಯ ಸೈಂಟ್ ಸಿಸಿಲೀಸ್ ಪದವಿ ಪೂರ್ವ ಕಾಲೇಜಿನ ಮತ ಎಣಿಕಾ ಕೇಂದ್ರದಲ್ಲಿ ಇರಿಸಲಾಗಿದ್ದು, ಇದರ ಸುತ್ತ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.

ಉಡುಪಿ ಜಿಲ್ಲೆಯ ಉಡುಪಿ, ಕಾಪು, ಕುಂದಾಪುರ, ಕಾರ್ಕಳ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಮತಯಂತ್ರಗಳನ್ನು ನಿನ್ನೆ ಸಂಜೆ ಆಯಾ ಡಿಮಸ್ಟರಿಂಗ್ ಕೇಂದ್ರಗಳಿಗೆ ತಂದು ನಂತರ ಅಲ್ಲಿಂದ ಮತ ಎಣಿಕೆ ಕೇಂದ್ರವಾದ ಉಡುಪಿಗೆ ಜಿಪಿಎಸ್ ಅಳವಡಿಸಿದ ಕಂಟೈನರ್‌ನಲ್ಲಿ ಬಿಗಿ ಭದ್ರತೆಯೊಂದಿಗೆ ತರಲಾಯಿತು.

ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ, ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಮತಯಂತ್ರಗಳನ್ನು ಇಂದು ಮಧ್ಯಾಹ್ನ ವೇಳೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಉಡುಪಿಯ ಮತ ಎಣಿಕಾ ಕೇಂದ್ರಕ್ಕೆ ತರಲಾಯಿತು.

ಮತ ಎಣಿಕೆ ಕೇಂದ್ರಕ್ಕೆ ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ಜಿಲ್ಲಾ ಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಕೇಂದ್ರ ವೀಕ್ಷಕರಾದ ಕೃಷ್ಣ ಕುನಾಲ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಹಾಗೂ ಎಡಿಸಿ ವಿದ್ಯಾಕುಮಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೇ, ಅಧಿಕಾರಿಗಳಿಗೆ ಸೂಕ್ತ ಮಾರ್ಗ ದರ್ಶನಗಳನ್ನು ನೀಡಿದರು. ಕೇಂದ್ರದ ಒಳ ಆವರಣದಲ್ಲಿರುವ ಕೆಳ ಅಂತಸ್ತು ಹಾಗೂ ಒಂದನೆ ಮಹಡಿಯಲ್ಲಿನ ಎಲ್ಲಾ ಮತಯಂತ್ರಗಳ ಭದ್ರತಾ ಕೊಠಡಿಗಳಿಗೆ ಸಿಆರ್‌ಪಿಎಫ್ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಉಡುಪಿಯ ನಾಲ್ಕು ಹಾಗೂ ಚಿಕ್ಕಮಗಳೂರಿನ ನಾಲ್ಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗಳಿಂದ ತರಲಾದ ಎಲ್ಲಾ ಮತಯಂತ್ರಗಳನ್ನು ಸ್ಟ್ರಾಂಗ್ ರೂಮ್‌ಗಳಲ್ಲಿ ಇರಿಸಿ ಸೀಲ್ ಮಾಡಲಾಗಿದೆ. ಚಿಕ್ಕಮಗಳೂರು ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ತಲಾ ಮೂರು ರೂಮ್‌ಗಳಲ್ಲಿ ಇರಿಸಿದರೆ, ಉಳಿದ ಆರು ವಿಧಾನಸಭಾ ಕ್ಷೇತ್ರಗಳಿಗೆ ಸೇರಿದ ಮತಯಂತ್ರಗಳನ್ನು ತಲಾ ಎರಡೆರಡು ರೂಮ್‌ಗಳಲ್ಲಿ ಇರಿಸಿ ಸೀಲ್ ಮಾಡಲಾಗಿದೆ. ಕಾಲೇಜಿನ ಒಟ್ಟು 18 ರೂಮ್‌ಗಳಲ್ಲಿ ಈ ಮತಯಂತ್ರಗಳನ್ನು ಇರಿಸಲಾಗಿದೆ.

ಮತಗಟ್ಟೆಗಳಿಂದ ತರಲಾಗಿರುವ 17ಸಿ ಫಾರ್ಮ್, ಡಿಕ್ಲರೇಷನ್ ಫಾರ್ಮ್ ಹಾಗೂ ಅಣಕ ಮತಗಳನ್ನು ಹಾಕಲಾದ ಕವರ್‌ಗಳನ್ನು ಸಹ ಪ್ರತಿಯೊಂದು ರೂಮಿನಲ್ಲಿ ಆಯಾ ಮತಯಂತ್ರಗಳ ಮೇಲೆ ಇರಿಸಲಾಗಿದೆ.

ಮತಯಂತ್ರಗಳನ್ನು ಇರಿಸಿದ ರೂಮಿನಲ್ಲಿ ಯಾವುದೇ ಕಾರಣಕ್ಕಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗದಂತೆ ಆ ಕೋಣೆಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಪಾಸ್ ಇದ್ದವರನ್ನು ಹೊರತು ಪಡಿಸಿ ಉಳಿದಂತೆ ಯಾರಿಗೂ ಕೇಂದ್ರ ಒಳಗೆ ಪ್ರವೇಶ ನೀಡಲಾಗುತ್ತಿಲ್ಲ.

ಸ್ಟ್ರಾಂಗ್ ರೂಮ್‌ಗಳ ಉಸ್ತುವಾರಿಯನ್ನು ಕೇಂದ್ರ ಮೀಸಲು ಪೊಲೀಸ್ ಪಡೆಗೆ ವಹಿಸಲಾಗಿದೆ. 31 ಮಹಿಳಾ ಸಿಬ್ಬಂದಿಗಳು ಸೇರಿದಂತೆ ಒಟ್ಟು 35 ಸಿಬ್ಬಂದಿಗಳು ನಿರಂತರವಾಗಿ ಸರದಿ ಪ್ರಕಾರ ಭದ್ರತಾ ಕಾರ್ಯದಲ್ಲಿ ನಿರತರಾಗಲಿದ್ದಾರೆ. ಒಬ್ಬ ಡಿವೈಎಸ್ಪಿ, ಒಬ್ಬ ವೃತ್ತನಿರೀಕ್ಷಕ, ಇಬ್ಬರು ಎಸ್‌ಐಗಳು, ಪಾಳಿಗಳಲ್ಲಿ 25 ಮಂದಿ ಎಚ್‌ಸಿ ಮತ್ತು ಪಿಸಿ ಸೇರಿದಂತೆ ಒಟ್ಟು 69 ಮಂದಿ ಇಲ್ಲಿ ನಿರಂತರವಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಮಧ್ಯಭಾಗದಲ್ಲಿ ಕೆಎಸ್‌ಆರ್‌ಪಿ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಕೇಂದ್ರದ ಹೊರ ಆವರಣದಲ್ಲಿ ವಿದ್ವಂಸಕ ಕೃತ್ಯ ತಡೆ ಪಡೆ ಹಾಗೂ ಜಿಲ್ಲಾ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಇವರು ಮತ ಎಣಿಕೆ ನಡೆಯುವ ಮೇ 23ರವರೆಗೆ ನಿರಂತರವಾಗಿ ಕೇಂದ್ರದ ಭ್ರತಾ ಕಾರ್ಯವನ್ನು ನಿರ್ವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News