ಕಾಂಗ್ರೆಸ್ ಪರ ಪ್ರಚಾರ: ಕುಸ್ತಿಪಟು, ಎಸಿಪಿ ನರಸಿಂಗ್ ಯಾದವ್ ವಿರುದ್ಧ ಎಫ್‌ಐಆರ್

Update: 2019-04-23 09:38 GMT

ಮುಂಬೈ, ಎ.23: ಕುಸ್ತಿಪಟು ಹಾಗೂ ಪೊಲೀಸ್ ಸಹಾಯಕ ಆಯುಕ್ತರಾಗಿರುವ ನರಸಿಂಗ್ ಯಾಧವ್ ವಿರುದ್ಧ ಸೋಮವಾರ ಅಂಬೋಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಯಾದವ್ ಕಾಂಗ್ರೆಸ್ ಪಕ್ಷದ ಪರ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ನಡೆಸಿದ್ದಾರೆ ಎನ್ನಲಾಗಿದೆ. ಯಾದವ್ ಪ್ರಸ್ತುತ ಮುಂಬೈ ಪೊಲೀಸ್ ಇಲಾಖೆಯಲ್ಲಿ ಎಸಿಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 ಶಿವಸೇನೆ ಕಾರ್ಯಕರ್ತರು ಯಾದವ್ ವಿರುದ್ಧ ದೂರು ದಾಖಲಿಸಿದ್ದು, ಯಾವುದೇ ರಾಜಕೀಯ ಪಕ್ಷಕ್ಕೆ ಸಾರ್ವಜನಿಕವಾಗಿ ಬೆಂಬಲ ವ್ಯಕ್ತಪಡಿಸಬಾರದು ಎಂದು ಪೊಲೀಸ್ ಕಮಿಶನರ್ ಅವರು ಯಾದವ್‌ಗೆ ಎಚ್ಚರಿಕೆ ನೀಡಿದ್ದಾರೆ.

ರವಿವಾರ ಯಾದವ್ ಅವರು ಕಾಂಗ್ರೆಸ್ ಅಭ್ಯರ್ಥಿ ಸಂಜಯ್ ನಿರುಪಮ್ ಪರ ಯಾದವ ನಗರದಲ್ಲಿ ನಡೆದ ಚುನಾವಣಾ ಪ್ರಚಾರದ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅವರು ಸಮಾವೇಶದಲ್ಲಿ ಭಾಷಣ ಮಾಡಿರಲಿಲ್ಲ. ನಿರುಪಮ್ ಅವರು ಯಾದವ್ ಕುಸ್ತಿಪಟುವಾಗುವ ಮೊದಲು ಆರ್ಥಿಕ ಸಂಕಷ್ಟದಲ್ಲಿದ್ದಾಗ ನೆರವಾಗಿದ್ದರು. ನಿರುಪಮ್‌ಜೀಗೆ ನೈತಿಕ ಬೆಂಬಲ ನೀಡಲು ಯಾದವ್ ಬಂದಿದ್ದರು ಎಂದು ಕಾಂಗ್ರೆಸ್ ಕಾರ್ಯಕರ್ತ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News