ಅನುವಾದಕ ಎರಡು ಭಾಷೆಗಳ ನಡುವಿನ ‘ಸೇತುವೆ’ ಇದ್ದಂತೆ- ನಾ.ದಾ.ಶೆಟ್ಟಿ

Update: 2019-04-23 14:34 GMT

ಮಂಗಳೂರು: ಎರಡು ಭಾಷೆ, ಸಂಸ್ಕೃತಿಗಳ ನಡುವೆ ಸೇತುವೆಯಂತೆ ಅನುವಾದಕ ಕಾರ್ಯನಿರ್ವಹಿಸುತ್ತಾನೆ ಎಂದು ಖ್ಯಾತ ಅನುವಾದಕ ಲೇಖಕ ಡಾ. ನಾ. ದಾಮೋದರ್ ಶೆಟ್ಟಿ ಅಭಿಪ್ರಾಯಪಟ್ಟರು.

ಅವರು ಇಲ್ಲಿನ ಹಿದಾಯತ್ ಸೆಂಟರ್ ಸಭಾಂಗಣದಲ್ಲಿ ಶಾಂತಿ ಪ್ರಕಾಶನ ಏರ್ಪಡಿಸಿದ್ದ ಮೂರು ದಿನಗಳ ಅನುವಾದ ಕಾರ್ಯಗಾರ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು.

ಅನುವಾದಕರು ಕೇವಲ ಒಂದು ಪುಸ್ತಕವನ್ನು ಮಾತ್ರ ಅನುವಾದಿಸುವುದಿಲ್ಲ ಬದಲಾಗಿ ಆ ಭಾಷೆಯಲ್ಲಿರು ಸಂಸ್ಕೃತಿ, ಕಲೆ, ಆಚರಣೆಗಳನ್ನು ಮೂಲ ಭಾಷೆಯಿಂದ ಉದ್ದಿಷ್ಠ ಭಾಷೆಗೆ ವರ್ಗಾಯಿಸುತ್ತಾನೆ ಎಂದ ಅವರು, ಹೀಗೆ ಮಾಡಬೇಕಾದರೆ ಅನುವಾದಕನಲ್ಲಿ ಎರಡು ಭಾಷೆಗಳ ಕುರಿತು ಸಮಗ್ರ ಪರಿಚಯ, ಶಾಬ್ಧಿಕ ತಾಕತ್ತು, ಹೇರಳ ಪದಸಂಪತ್ತು, ಪರ್ಯಾಯ ಪದಗಳ ಭಂಡಾರ ಇರಬೇಕು ಎಂದರು.

ಸಮರೋಪ ನುಡಿಯನ್ನಾಡಿದ ಸಂಪನ್ಮೂಲ ವ್ಯಕ್ತಿ ಹಾಗೂ ತರಬೇತುದಾರ ಪ್ರೋ.ಎಂ.ಅಬ್ದುಲ್ ರಹಮಾನ್ ಪಾಷಾ, ಮಂಗಳೂರು ಆಕಾಶವಾಣಿಯಲ್ಲಿದ್ದ ತಮ್ಮ ದಿನಗಳನ್ನು ಸ್ಮರಿಸಿಕೊಳ್ಳುತ್ತ ತಾನು ಬೆಳೆಯುವಲ್ಲಿ ಮಂಗಳೂರಿಗರ ಕೊಡುಗೆ ಅಪಾರವಾಗಿದ್ದು ಮುಂದಿನ ದಿನಗಳಲ್ಲಿ ಶಾಂತಿ ಪ್ರಕಾಶನದ ಮೂಲಕ ಉತ್ತಮ ಕೃತಿಗಳು ಹೊರಬರಲಿ ಇನ್ನೂ ಹೆಚ್ಚಿನ ರೀತಿಯ ತರಬೇತಿ ಕಮ್ಮಟಗಳು ಆಯೋಜನೆಗೊಳ್ಳಲಿ ಎಂದರು.

ತಾನು ಸಮುದಾಯಕ್ಕೆ ಇದುವರೆಗೆ ಯಾವುದೇ ರೀತಿಯ ಸೇವೆಯನ್ನು ಸಲ್ಲಿಸದೆ ಇರುವುದಕ್ಕೆ ಹಲವು ಕಾರಣಗಳಿದ್ದು ಇನ್ನು ಮುಂದಿನಗಳಲ್ಲಿ ಸಮುದಾಯಕ್ಕಾಗಿ ತಾನು ತೊಡಗಿಸಿಕೊಳ್ಳುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಎ.21 ರಂದು ಆರಂಭಗೊಂಡ ಈ ಕಾರ್ಯಗಾರದಲ್ಲಿ ಅನುವಾದಕರು ಎದುರಿಸುತ್ತಿರುವ ಸವಾಲುಗಳು, ಅವಕಾಶಗಳು, ತಾಂತ್ರಿಕತೆ, ಸಾಧನ ಸಲಕರಣೆಗಳು ಮುಂತಾದ ವಿಷಯಗಳ ಕುರಿತಂತೆ ಪ್ರೋ.ಪಾಷಾ ಮೂರುದಿನಗಳ ಕಾಲ ಶಿಬಿರಾರ್ಥಿಗಳಿಗೆ ತರಬೇತಿಯನ್ನು ನೀಡಿದರು.  ಖ್ಯಾತ ಅನುವಾದಕರಾದ ಡಾ.ರಾಜರಾಂ ತಲ್ಲೂರು ಹಾಗೂ ಸಾದುಲ್ಲಾ ರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಶಾಂತಿ ಪ್ರಕಾಶನ ಸಂಸ್ಥೆಯ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಪ್ರಸ್ತಾವಿಕವಾಗಿ ಮಾತನಾಡಿದರು.ಆಯ್ದ ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನಸು ಹಂಚಿಕೊಂಡರು.

ಶಾಂತಿ ಪ್ರಕಾಶನದ ಉಪಾಧ್ಯಕ್ಷ ಕೆ.ಎಂ.ಷರೀಫ್, ಜಮಾಅತೆ ಇಸ್ಲಾಮಿ ಸಂಚಾಲಕ ಮೌಲಾನ ಅಬ್ದುಸ್ಸಲಾಮ್ ಉಪ್ಪಿನಂಗಡಿ, ಜಮಾಅತೆ ಇಸ್ಲಾಮಿ ಕಾರ್ಯದರ್ಶಿ ಕೆ.ಎಂ.ಅಶ್ರಫ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News