ಅನುವಾದಕ ಎರಡು ಭಾಷೆಗಳ ನಡುನ ‘ಸೇತುವೆ’ ಇದ್ದಂತೆ: ನಾ.ದಾ.ಶೆಟ್ಟಿ

Update: 2019-04-23 17:04 GMT

ಮಂಗಳೂರು, ಎ. 23: ಎರಡು ಭಾಷೆ, ಸಂಸ್ಕೃತಿಗಳ ನಡುವೆ ಸೇತುವೆಯಂತೆ ಅನುವಾದಕ ಕಾರ್ಯನಿರ್ವಹಿಸುತ್ತಾನೆ. ಅನುವಾದಕರು ಕೇವಲ ಒಂದು ಪುಸ್ತಕವನ್ನು ಮಾತ್ರ ಅನುವಾದಿಸುವುದಿಲ್ಲ. ಬದಲಾಗಿ ಆ ಭಾಷೆಯಲ್ಲಿರುವ ಸಂಸ್ಕೃತಿ, ಕಲೆ, ಆಚರಣೆಗಳನ್ನು ಮೂಲ ಭಾಷೆಯಿಂದ ಉದ್ದಿಷ್ಠ ಭಾಷೆಗೆ ವರ್ಗಾಯಿಸುತ್ತಾನೆ ಎಂದು ಸಾಹಿತಿ ಡಾ.ನಾ.ದಾಮೋದರ್ ಶೆಟ್ಟಿ ಅಭಿಪ್ರಾಯಪಟ್ಟರು. ನಗರದ ಹಿದಾಯತ್ ಸೆಂಟರ್ ಸಭಾಂಗಣದಲ್ಲಿ ಶಾಂತಿ ಪ್ರಕಾಶನ ಏರ್ಪಡಿಸಿದ್ದ ಮೂರು ದಿನಗಳ ಅನುವಾದ ಕಾರ್ಯಗಾರದ ಸಮಾರೋಪ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಅನುವಾದಕನಲ್ಲಿ ಎರಡು ಭಾಷೆಗಳ ಕುರಿತು ಸಮಗ್ರ ಪರಿಚಯ, ಶಾಬ್ಧಿಕ ತಾಕತ್ತು, ಹೇರಳ ಪದಸಂಪತ್ತು, ಪರ್ಯಾಯ ಪದಗಳ ಭಂಡಾರ ಇರಬೇಕು. ಆವಾಗ ಮಾತ್ರ ಅನುವಾದ ಉತ್ಕೃಷ್ಟವಾಗಿರುತ್ತದೆ ಎಂದು ಡಾ.ನಾ.ದಾಮೋದರ್ ಶೆಟ್ಟಿ ಹೇಳಿದರು.

ಸಮರೋಪ ನುಡಿಯನ್ನಾಡಿದ ಸಂಪನ್ಮೂಲ ವ್ಯಕ್ತಿ ಹಾಗೂ ತರಬೇತುದಾರ ಪ್ರೊ.ರಹಮಾನ್ ಪಾಷಾ, ಮಂಗಳೂರು ಆಕಾಶವಾಣಿಯಲ್ಲಿದ್ದ ತಮ್ಮ ದಿನ ಗಳನ್ನು ಸ್ಮರಿಸಿಕೊಂಡರಲ್ಲದೆ,ತಾನು ಬೆಳೆಯುವಲ್ಲಿ ಮಂಗಳೂರಿಗರ ಕೊಡುಗೆ ಅಪಾರವಾಗಿದೆ. ತಾನು ಸಮುದಾಯಕ್ಕೆ ಇದುವರೆಗೆ ಯಾವುದೇ ರೀತಿಯ ಸೇವೆಯನ್ನು ಸಲ್ಲಿಸದಿರುವುದಕ್ಕೆ ಹಲವು ಕಾರಣಗಳಿದೆ. ಮುಂದಿನ ದಿನಗಳಲ್ಲಿ ಸಮುದಾಯಕ್ಕಾಗಿ ತಾನು ತೊಡಗಿಸಿಕೊಳ್ಳುವುದಾಗಿ ಹೇಳಿದರು.

ಕಾರ್ಯಗಾರದಲ್ಲಿ ಅನುವಾದಕರು ಎದುರಿಸುತ್ತಿರುವ ಸವಾಲುಗಳು, ಅವಕಾಶಗಳು, ತಾಂತ್ರಿಕತೆ, ಸಾಧನ ಸಲಕರಣೆಗಳು ಮುಂತಾದ ವಿಷಯಗಳ ಕುರಿತಂತೆ ಮೂರುದಿನಗಳ ಕಾಲ ಶಿಬಿರಾರ್ಥಿಗಳಿಗೆ ತರಬೇತಿಯನ್ನು ನೀಡಲಾಯಿತು. ಅನುವಾದಕರಾದ ಡಾ.ರಾಜರಾಂ ತಲ್ಲೂರು ಹಾಗೂ ಸಾದುಲ್ಲಾರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಂತಿ ಪ್ರಕಾಶನದ ಉಪಾಧ್ಯಕ್ಷ ಕೆ.ಎಂ.ಶರೀಫ್, ಜಮಾಅತೆ ಇಸ್ಲಾಮಿ ಹಿಂದ್‌ನ ಸಂಚಾಲಕ ಮೌಲಾನ ಅಬ್ದುಸ್ಸಲಾಮ್ ಉಪ್ಪಿನಂಗಡಿ, ಜಮಾಅತೆ ಇಸ್ಲಾಮಿ ಹಿಂದ್‌ನ ಕಾರ್ಯದರ್ಶಿ ಕೆ.ಎಂ.ಅಶ್ರಫ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News