ಪ್ರಜ್ಞಾ ಸಿಂಗ್ ಬಿಜೆಪಿಯ ಆರೋಗ್ಯ ಸಚಿವಾಲಯದ ಅಭ್ಯರ್ಥಿ ಎಂದ ಒವೈಸಿ

Update: 2019-04-25 09:21 GMT

ಹೈದರಾಬಾದ್, ಎ.25: ಗೋಮೂತ್ರ ಸೇವನೆಯಿಂದ ತಾನು ಸ್ತನ ಕ್ಯಾನ್ಸರ್ ನಿಂದ ಮುಕ್ತಗೊಂಡಿದ್ದಾಗಿ ಹೇಳಿಕೊಂಡಿರುವ ಬಿಜೆಪಿಯ ಭೋಪಾಲ್ ಅಭ್ಯರ್ಥಿ ಪ್ರಜ್ಞಾ ಠಾಕುರ್ ಅವರನ್ನು ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ವ್ಯಂಗ್ಯವಾಡಿದ್ದಾರೆ. “ಬಿಜೆಪಿಗೆ ಆರೋಗ್ಯ ಸಚಿವಾಲಯಕ್ಕೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ ಅಭ್ಯರ್ಥಿ ಸಿಕ್ಕಿದ ಹಾಗಿದೆ'' ಎಂದು ಟ್ವೀಟ್ ಮಾಡಿದ್ದಾರೆ. “ಆದರೆ ದುರದೃಷ್ಟವಶಾತ್ ಸದ್ಯವೇ ಮಾಜಿಯಾಗಲಿರುವ ಪ್ರಧಾನಿ ನರೇಂದ್ರ ಮೋದಿಗೆ ಇದು ನಿಜವಾಗಿಸಲು ಸಾಧ್ಯವಾಗಲಿಕ್ಕಿಲ್ಲ” ಎಂದೂ ಅವರು ಬರೆದಿದ್ದಾರೆ.

ಗೋಮೂತ್ರ ಸೇವನೆಯಿಂದ ತಮ್ಮ ಕ್ಯಾನ್ಸರ್ ಗುಣವಾಗಿದೆ ಎಂಬ ಪ್ರಜ್ಞಾ ಸಿಂಗ್ ಹೇಳಿಕೆಗೆ ಮುಂಬೈಯ ಕ್ಯಾನ್ಸರ್ ತಜ್ಞರು ನಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವ ವರದಿಯನ್ನೂ ಉವೈಸಿ ಉಲ್ಲೇಖಿಸಿದ್ದಾರೆ.

ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಪ್ರಜ್ಞಾ ಸಿಂಗ್ ರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿಸಿದ್ದನ್ನು ಪ್ರಶ್ನಿಸಿ ಸ್ಫೋಟದಲ್ಲಿ ಸಾವಿಗೀಡಾದವರೊಬ್ಬರ ತಂದೆ ನ್ಯಾಯಾಲಯಕ್ಕೆ ಈಗಾಗಲೇ ಅಪೀಲು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News