ವಿಜ್ಞಾನ ಮತ್ತು ವಿದ್ವತ್ತಿನ ವಿರುದ್ಧ ಮೋದಿ ಸರಕಾರದ ಸರ್ಜಿಕಲ್ ಸ್ಟ್ರೈಕ್

Update: 2019-05-06 18:31 GMT

ಮೇ 2014ರಿಂದ ಮೋದಿ ಸರಕಾರ, ಒಂದೊಂದಾಗಿ ನಮ್ಮ ಅತ್ಯುತ್ತಮ ವಿಶ್ವವಿದ್ಯಾನಿಲಯಗಳ ಹಾಗೂ ಸಂಶೋಧನಾ ಸಂಸ್ಥೆಗಳ ವಿರುದ್ಧ, ಆ ಮೂಲಕ ದೇಶದ ಧೀಮಂತರ ವಿರುದ್ಧ ಸತತವಾಗಿ ನಡೆಸಿರುವ ಯುದ್ಧವೇ ಈ ಸರಣಿ ಸರ್ಜಿಕಲ್ ದಾಳಿಗಳು. ಈ ದಾಳಿಗಳು ಈ ಸಂಸ್ಥೆಗಳ ನೈತಿಕ ಸ್ಥೈರ್ಯ ಮತ್ತು ವಿಶ್ವಾಸಾರ್ಹತೆಯನ್ನು ನಷ್ಟಗೊಳಿಸುವ ಮೂಲಕ ಭಾರೀ ಯಶಸ್ವಿಯಾಗಿವೆ. ಪರಿಣಾಮವಾಗಿ ಇವುಗಳಿಗೆ ಭಾರತದಲ್ಲಿ ಮತ್ತು ವಿಶ್ವದಲ್ಲಿ ಈ ಹಿಂದೆ ಇದ್ದ ಪ್ರತಿಷ್ಠೆಯನ್ನು ಹಾಗೂ ಸ್ಥಾನಮಾನವನ್ನು ಇವುಗಳು ಬಹಳ ವೇಗವಾಗಿ ಕಳೆದುಕೊಳ್ಳುತ್ತಿವೆ.


ನರೇಂದ್ರ ಮೋದಿ ಸರಕಾರದ ಅಚ್ಚುಮೆಚ್ಚಿನ, ಪ್ರೀತಿ ಪಾತ್ರವಾದ ಒಂದು ಪದಪುಂಜ ‘ಸರ್ಜಿಕಲ್’. ಸೆಪ್ಟಂಬರ್ 2016ರಲ್ಲಿ ಈ ಶಬ್ದಗಳನ್ನು ಪಾಕಿಸ್ತಾನದ ಮೇಲೆ ಗಡಿಯಾಚೆ ಭಾರತೀಯ ಸೇನೆ ಒಂದು ದಾಳಿ ನಡೆಸಿದ ಬಳಿಕ ಬಳಸಲಾಯಿತು. ಗಮನಿಸಬೇಕಾದ ವಿಷಯವೆಂದರೆ ಸ್ವತಃ ಭಾರತೀಯ ಸೇನೆ ಈ ಶಬ್ದಗಳನ್ನು ಬಳಸಲಿಲ್ಲ. ಇವುಗಳನ್ನು ಬಳಸಿದವರು ಪ್ರಧಾನಿ ಮೋದಿ ಮತ್ತು ಅವರ ಪ್ರಚಾರಕರು. ಅದೇ ವರ್ಷ ನವೆಂಬರ್‌ನಲ್ಲಿ ಪ್ರಧಾನಿಯವರು ದಿಢೀರನೆ ಗಂಡಾಂತರಕಾರಿಯಾಗಿ 1,000 ಮತ್ತು 500ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ತೆಗೆದುಕೊಂಡದ್ದು ಕೂಡ (ಕಪ್ಪು ಹಣದ ವಿರುದ್ಧ ನಡೆಸಿದ) ಸರ್ಜಿಕಲ್ ಸ್ಟ್ರೈಕ್ ಎಂದೇ ಆಳುವ ಪಕ್ಷದ ವಕ್ತಾರರು ಹೇಳಿದರು. ಭಯೋತ್ಪಾದನೆಯ ವಿರುದ್ಧ ನಡೆಸಿದ ಸರ್ಜಿಕಲ್ ದಾಳಿಯಿಂದ ಯಾವುದೇ ಪರಿಣಾಮವಾಗಲಿ ಉಪಯೋಗವಾಗಲಿ ಆಗಲಿಲ್ಲ. ಯಾಕೆಂದರೆ ನಮ್ಮ ಭದ್ರತಾ ಪಡೆಗಳು ಪಾಕಿಸ್ತಾನದ ನುಸುಳುಕೋರರ ವಿರುದ್ಧ ಹೆಚ್ಚು ಕಡಿಮೆ ಪ್ರತಿದಿನವೂ ಗುಂಡಿನ ಹೋರಾಟ ನಡೆಸುತ್ತಲೇ ಇವೆ. ಇನ್ನ್ನು, ಕಪ್ಪು ಹಣದ ವಿರುದ್ಧ ನಡೆಸಿದ ಸರ್ಜಿಕಲ್ ದಾಳಿ ನಿರೀಕ್ಷಿತ ಪರಿಣಾಮಕ್ಕೆ ವಿರುದ್ಧವಾದ ಪರಿಣಾಮ ಬೀರಿ ದೇಶದ ಅರ್ಥವ್ಯವಸ್ಥೆಗೆ ತಿರುಗು ಬಾಣವಾಯಿತು.

ನೋಟು ನಿಷೇಧದಿಂದ ಕಪ್ಪು ಹಣವನ್ನು ನಿರ್ಮೂಲ ಮಾಡಲು ವಿಫಲವಾಗುವುದರ ಜತೆಗೆ, ಸಾವಿರಾರು ಸಣ್ಣ ಪುಟ್ಟ ಉದ್ದಿಮೆದಾರರನ್ನು ವ್ಯಾಪಾರಿಗಳನ್ನು ದಿವಾಳಿಗೆ ತಳ್ಳುವ ಮೂಲಕ ಅವರನ್ನೇ ನಿರ್ಮೂಲ ಮಾಡಿತು. ಅವರು ತಮ್ಮ ವಹಿವಾಟುಗಳನ್ನು ಭಾಗಶಃ ನಗದಿನ ಮೂಲಕವೇ ಮಾಡುತ್ತಿದ್ದದ್ದು ಇದಕ್ಕೆ ಕಾರಣ. ಅಲ್ಲದೆ ನೋಟು ರದ್ದತಿ ಮಿಲಿಯನ್‌ಗಟ್ಟ್ಟಲೆ ರೈತರನ್ನು ಸಂಕಷ್ಟಕ್ಕೆ ತಳ್ಳಿತು. ಹೇಗೆಂದರೆ ತಮ್ಮ ಆರ್ಥಿಕ ಉಳಿವಿಗೆ ಆವಶ್ಯಕವಾಗಿದ್ದ ಬಿತ್ತನೆಯ ಬೀಜಗಳನ್ನು ಅಥವಾ ಗೊಬ್ಬರವನ್ನು ಕೊಂಡುಕೊಳ್ಳಲು ಬೇಕಾದ ನಗದು ಹಣ ಸಿಗದೆ ಅವರು ಕಂಗಾಲಾದರು. ಅದೇನಿದ್ದರೂ, ಸದ್ಯದ ಸರಕಾರ ನಡೆಸಿರುವ ಸರಣಿ ಸರ್ಜಿಕಲ್ ದಾಳಿಗಳ ಉಪಯೋಗ ಹಾಗೂ ಪರಿಣಾಮದ ಕುರಿತು ಯಾವುದೇ ವಾದವಿಲ್ಲ.ಮೇ 2014ರಿಂದ ಮೋದಿ ಸರಕಾರ, ಒಂದೊಂದಾಗಿ ನಮ್ಮ ಅತ್ಯುತ್ತಮ ವಿಶ್ವವಿದ್ಯಾನಿಲಯಗಳ ಹಾಗೂ ಸಂಶೋಧನಾ ಸಂಸ್ಥೆಗಳ ವಿರುದ್ಧ, ಆ ಮೂಲಕ ದೇಶದ ಧೀಮಂತರ ವಿರುದ್ಧ ಸತತವಾಗಿ ನಡೆಸಿರುವ ಯುದ್ಧವೇ ಈ ಸರಣಿ ಸರ್ಜಿಕಲ್ ದಾಳಿಗಳು. ಈ ದಾಳಿಗಳು ಈ ಸಂಸ್ಥೆಗಳ ನೈತಿಕ ಸ್ಥೈರ್ಯ ಮತ್ತು ವಿಶ್ವಾಸಾರ್ಹತೆಯನ್ನು ನಷ್ಟಗೊಳಿಸುವ ಮೂಲಕ ಭಾರೀ ಯಶಸ್ವಿಯಾಗಿವೆ. ಪರಿಣಾಮವಾಗಿ ಇವುಗಳಿಗೆ ಭಾರತದಲ್ಲಿ ಮತ್ತು ವಿಶ್ವದಲ್ಲಿ ಈ ಹಿಂದೆ ಇದ್ದ ಪ್ರತಿಷ್ಠೆಯನ್ನು ಹಾಗೂ ಸ್ಥಾನಮಾನವನ್ನು ಇವುಗಳು ಬಹಳ ವೇಗವಾಗಿ ಕಳೆದುಕೊಳ್ಳುತ್ತಿವೆ.

ಈಗಿನ ಪ್ರಧಾನಿಯವರು ವಿದ್ವಾಂಸರು ಹಾಗೂ ವಿದ್ವತ್ತಿನ ಬಗ್ಗೆ ಎಷ್ಟೊಂದು ತಿರಸ್ಕಾರದ ಭಾವನೆ ಹೊಂದಿದ್ದಾರೆಂಬುದು ಅವರು ಈ ಕ್ಷೇತ್ರಗಳಲ್ಲಿ ಆಯ್ದುಕೊಂಡಿರುವ ಕ್ಯಾಬಿನೆಟ್ ಸಚಿವರ ಆಯ್ಕೆಯಲ್ಲೇ ಸ್ಪಷ್ಟವಾಗುತ್ತದೆ. ಅವರು ಇಷ್ಟರವರೆಗೆ ನೇಮಿಸಿರುವ ಇಬ್ಬರು ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವರಿಗೆ ಶಿಕ್ಷಣ ಅಥವಾ ಸಂಶೋಧನೆಯಲ್ಲಿ ಯಾವುದೇ ರೀತಿಯ ಹಿನ್ನೆಲೆಯಿಲ್ಲ. ಇಷ್ಟೇ ಅಲ್ಲ, ಈ ರಂಗಗಳ ತಜ್ಞರ ಸಲಹೆ ಸೂಚನೆಗಳನ್ನು ಆಲಿಸುವುದರಲ್ಲಿ ಯಾವುದೇ ಆಸಕ್ತಿಯೂ ಇಲ್ಲ. ಈ ಸಚಿವರು ಒಮ್ಮಿಮ್ಮೆ ನೇರವಾಗಿ ಸ್ವಯಂ ಸೇವಕ ಸಂಘದಿಂದಲೇ ತಾವೇನು ಮಾಡಬೇಕು ಎಂಬ ಬಗ್ಗೆ ಸೂಚನೆಗಳನ್ನು ಪಡೆದಿದ್ದಾರೆ. ಉದಾಹರಣೆಗೆ, ಭಾರತೀಯ ಇತಿಹಾಸ ಸಂಶೋಧನಾ ಮಂಡಳಿ ಮತ್ತು ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿಯ ಮುಖ್ಯಸ್ಥರುಗಳಾಗಿ ಶೂನ್ಯ ವಿದ್ವತ್ ಅರ್ಹತೆವುಳ್ಳ ಆರೆಸ್ಸೆಸ್ ಸಿದ್ಧಾಂತಿ(ಐಡಿಯಾಲಾಗ್)ಗಳನ್ನು ನೇಮಕ ಮಾಡಲಾಗಿದೆ.

ಕೆಲವೊಮ್ಮೆ ಅವರು ಆರೆಸ್ಸೆಸ್‌ನ ವಿದ್ಯಾರ್ಥಿ ಸಂಘಟನೆಯಾಗಿರುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ)ನ ತಾಳಕ್ಕೆ ತಕ್ಕಂತೆ ಕುಣಿದಿದ್ದಾರೆ. ನಮ್ಮ ದೇಶದ ಎರಡು ಅತ್ಯುತ್ತಮ ಸಾರ್ವಕಾಲಿಕ ವಿಶ್ವವಿದ್ಯಾನಿಲಯಗಳಾಗಿರುವ ಹೈದರಾಬಾದ್ ಕೇಂದ್ರೀಯ ವಿವಿ ಮತ್ತು ಜವಾಹರಲಾಲ್ ನೆಹರೂ ವಿವಿ ಬಗ್ಗೆ ಎಚ್‌ಆರ್‌ಡಿ ಸಚಿವಾಲಯ ವ್ಯಕ್ತಪಡಿಸಿರುವ ತಿರಸ್ಕಾರ ಭಾವನೆಯ ಮನೋಧರ್ಮವೇ ಇದಕ್ಕೆ ಉದಾಹರಣೆ. ಇದು ಎಬಿವಿಪಿಯ ಕುಮ್ಮಕ್ಕಿನಿಂದಲೇ ಆಗಿದೆ. ತನ್ನ ಬೇಳೆ ಈ ಹಿಂದೆ ಯಾವ್ಯಾವ ಸಂಸ್ಥೆಗಳಲ್ಲಿ ಬೆಂದಿರಲಿಲ್ಲವೋ ಅಂತಹ ಸಂಸ್ಥೆಗಳು ಒಳಗೆ ಪ್ರವೇಶಿಸಿ ತನ್ನ ಚಟುವಟಿಕೆಗಳನ್ನು ವಿಸ್ತರಿಸಲು ಎಬಿವಿಪಿ ಈಗ ಹತಾಶ ಪ್ರಯತ್ನ ನಡೆಸುತ್ತಿದೆ. ಕೆಲವು ಮಂದಿ ಬಲಪಂಥೀಯ ಸಿದ್ಧಾಂತಿಗಳು, ಇದೆಲ್ಲ ವಿವಿಗಳ ಕೋರ್ಸ್ ಗಳನ್ನು ಸರಿಪಡಿಸುವುದಕ್ಕಾಗಿಯೇ ಹೊರತು ಬೇರೆ ಯಾವುದಕ್ಕಾಗಿಯೂ ಅಲ್ಲ; ಈ ಹಿಂದೆ ಈ ವಿವಿಗಳಲ್ಲಿ ವಿದೇಶಿ ಪ್ರಭಾವದ ಮಾರ್ಕ್ಸ್‌ವಾದಿ ಸಿದ್ಧಾಂತಿಗಳು ಪ್ರಾಬಲ್ಯ ಹೊಂದಿದ್ದರು; ಈಗ ಅವರ ಜಾಗದಲ್ಲಿ ಸ್ವದೇಶಿ ದೇಶ ಭಕ್ತರು ಕುಳಿತುಕೊಳ್ಳುತ್ತಿದ್ದಾರೆ ಅಷ್ಟೆ ಎಂದು ವಾದಿಸುತ್ತಿದ್ದಾರೆ. ಸಮಾಜ ವಿಜ್ಞಾನ ಮತ್ತು ಮಾನವಿಕ ವಿಷಯಗಳಿಗಷ್ಟೆ ಮೋದಿ ಸರಕಾರದ ವಿದ್ವತ್ ವಿರೋಧಿ ಯುದ್ಧ ಸೀಮಿತಗೊಂಡಿದ್ದರೆ ಈ ವಾದದಲ್ಲಿ ಸ್ವಲ್ಪ ಹುರುಳಿರುತ್ತಿತ್ತು. ಆದರೆ ಇದು ನಿಜವಲ್ಲ. ಮೋದಿ ಸರಕಾರದ ಯುದ್ಧವು ವಿಜ್ಞಾನ ವಿಷಯಗಳ ವಿರುದ್ಧವೂ ನಡೆದಿದೆ.

ಈ ನಿಟ್ಟಿನಲ್ಲಿ ಉನ್ನತ ಸ್ಥಾನದಿಂದಲೇ ಪ್ರಧಾನಿಯವರ ನೇತೃತ್ವದಲ್ಲೇ ಯುದ್ಧ ಸಾರಲಾಗಿದೆ. ಪ್ರಾಚೀನ ಭಾರತೀಯರು ಪ್ಲಾಸ್ಟಿಕ್ ಸರ್ಜರಿ ಹಾಗೂ ಕೃತಕ ಗರ್ಭಧಾರಣೆಯನ್ನು ಕಂಡು ಹಿಡಿದಿದ್ದರು ಎಂದು ಪ್ರಧಾನಿಯವರೇ ಘೋಷಿಸಿಬಿಟ್ಟಿದ್ದಾರೆ. ಅಲ್ಲದೆ ಅವರು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ತನ್ನ ಸಚಿವರನ್ನಾಗಿ, ಪ್ರತಿಯೊಂದು ಭಾರತೀಯ ಆಧುನಿಕ ಸಂಶೋಧನೆ, ಸಾಧನೆ ನಮ್ಮ ಪ್ರಾಚೀನ ವೈಜ್ಞಾನಿಕ ಸಾಧನೆಯ ಮುಂದುವರಿಕೆ ಎಂದು ನಂಬುವ ವ್ಯಕ್ತಿಯೊಬ್ಬರನ್ನು ನೇಮಿಸಿದ್ದಾರೆ. ವೇದಗಳು ಆಲ್ಬರ್ಟ್ ಐನ್‌ಸ್ಟೀನ್‌ರ ಸಿದ್ಧಾಂತಗಳನ್ನು ಮುಂಚಿತವಾಗಿಯೇ ನಿರೀಕ್ಷಿಸಿದ್ದವು ಎಂದೂ ಅವರು ಹೇಳುತ್ತಾರೆ.

ನಮ್ಮ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹೇಳಿಕೆಗಳನ್ನು ಯಾವುದೋ ಖಾಸಗಿ ಸಂಭಾಷಣೆಯಲ್ಲಿ ಅಥವಾ ಆರೆಸ್ಸೆಸ್ ಶಾಖೆಯಲ್ಲಿ ನೀಡಿರುವುದಲ್ಲ. ಬದಲಾಗಿ ಭಾರತೀಯ ವಿಜ್ಞಾನ ಅಧಿವೇಶನದಲ್ಲಿ ಈ ಸಚಿವರ ಬಂಟರು ಪ್ರಾಚೀನ ಭಾರತೀಯರು ವಿಮಾನವನ್ನು ಹಾಗೂ ಸ್ಟೆಮ್ ಸೆಲ್ ಸಂಶೋಧನೆಯನ್ನು ಕಂಡು ಹಿಡಿದಿದ್ದರು ಎಂದು ಪ್ರಬಂಧ ಮಂಡಿಸಿದರು.(ಕೌರವರು ಮೊತ್ತ ಮೊದಲ ಟೆಸ್ಟ್ ಟ್ಯೂಬ್ ಶಿಶುಗಳೆಂದು ಅವರು ವಾದಿಸಿದರು.) ಇದು ಕೇವಲ ತಮಾಷೆಯಷ್ಟೆ ಅಲ್ಲ, ಇದು ದುರಂತ. ಒಂದು ಶತಮಾನಕ್ಕೂ ಹಿಂದೆ ದೂರ ದೃಷ್ಟಿಯ ದಾರ್ಶನಿಕ ಜಮ್‌ಶೇಟ್‌ಜಿ ಟಾಟಾ ನೇತೃತ್ವದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಸ್ಥಾಪಿಸಲ್ಪಟ್ಟಿತ್ತು. ಅಂದಿನಿಂದ ಈ ದೇಶದಲ್ಲಿ ತರ್ಕ, ವಿಚಾರ ಮತ್ತು ಪ್ರಾಯೋಗಿಕತೆಯ ಮೂಲಕ ವೈಜ್ಞಾನಿಕ ಸಂಶೋಧನೆ ಮುಂದುವರಿಯುತ್ತ ಬಂತೇ ಹೊರತು ಮೂಢನಂಬಿಕೆ ಅಥವಾ ಮಿಥ್ಯೆಯ, ಸುಳ್ಳಿನ ಮೂಲಕವಲ್ಲ. ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಮತ್ತು ನ್ಯಾಶನಲ್ ಸೆಂಟರ್ ಫಾರ್ ಬಯೊಲಾಜಿಕಲ್ ಸಾಯನ್ಸಸ್‌ನಂತಹ ಸಂಸ್ಥೆಗಳು ಅನ್ವರ್ಥವಾಗಿಯೇ ಅಂತರ್‌ರಾಷ್ಟ್ರೀಯ ಖ್ಯಾತಿ ಪಡೆದಿವೆ.

ಇದೇ ವೇಳೆ, ಐಐಟಿಗಳು ತಾಂತ್ರಿಕ ಶಿಕ್ಷಣದ ಗುಣಮಟ್ಟವನ್ನು ಕಾಪಾಡುವಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸಿವೆ. ಆದರೆ ಈಗ (ಪ್ರಧಾನಿಯವರ ಪ್ರೋತ್ಸಾಹದೊಂದಿಗೆ), ಕೇಂದ್ರ ಸಚಿವರ ಅರ್ಥಹೀನ, ಗೊಂದಲಕಾರಿ ಕ್ರಮಗಳು ಹಾಗೂ ಮಾತುಗಳು ಭಾರತದಲ್ಲಿ ವೈಜ್ಞಾನಿಕ ಚಿಂತನೆಗೆ ಗಂಭೀರವಾದ ಹಾಗೂ ಸರಿಪಡಿಸಲಾಗದ ಹಾನಿವುಂಟುಮಾಡಿವೆೆ.

ನಮ್ಮ ದೇಶದ ಪ್ರಥಮ ಪ್ರಧಾನಿ ನೆಹರೂರವರು, ಹೋಮಿ ಭಾಭಾ ಮತ್ತು ವಿಕ್ರಂ ಸಾರಾಭಾಯ್ ಅಂತಹವರ ಮೂಲಕ ಭಾರತದ ವೈಜ್ಞಾನಿಕ ಸಾಧನೆ ಗಳಿಗೆ ತಳಪಾಯ ಹಾಕಿ ಕೊಟ್ಟಿದ್ದರು. ಆದರೆ ವೈಜ್ಞಾನಿಕ ಮನೋಭಾವಕ್ಕೆ ಸ್ಫೂರ್ತಿ ನೀಡುವ ಓರ್ವ ದಾರ್ಶನಿಕ ನಾಗಿದ್ದ ನೆಹರೂರವರನ್ನು ಅಲ್ಲಗಳೆಯುವ, ಪಕ್ಕಕ್ಕೆ ಸರಿಸುವ ತನ್ನ ಪ್ರಯತ್ನದಲ್ಲಿ ಮೋದಿಯವರು ಹುಸಿ ವೈಜ್ಞಾನಿಕ ಕಂದಾಚಾರಗಳನ್ನು ಮುಖ್ಯ ಪ್ರವಾಹಕ್ಕೆ ತಂದಿದ್ದಾರೆ.

ಮೋದಿ ಸರಕಾರವು ಭಾರತದ ಸಮಾಜ ವಿಜ್ಞಾನ ಪರಂಪರೆಗಳಿಗೆ ಕೂಡ ಗಂಭೀರ ಸ್ವರೂಪದ ಅಪಾಯ ತಂದೊಡ್ಡಿದೆ ಎಂದು ಕೂಡ ಹೇಳಲು ನಾನು ಬಯಸುತ್ತೇನೆ. ನೆಹರೂ ಯುಗದ ಅಕಾಡಮಿಯಲ್ಲಿ ಮಾರ್ಕ್ಸ್‌ವಾದವು ಹಲವು ಧೀಮಂತ ಪ್ರವಾಹಗಳಲ್ಲಿ ಕೇವಲ ಒಂದು ಪ್ರವಾಹವಷ್ಟೆ ಆಗಿತ್ತು. ಹೀಗಾಗಿ ಡಿ. ಆರ್. ಗಾಡ್ಗೀಳ್ ಮತ್ತು ಆ್ಯಂಡ್ರೆ ಬೆಟೀಲ್ಸ್, ಅನುಕ್ರಮವಾಗಿ, ಅರ್ಥಶಾಸ್ತ್ರ ಮತ್ತು ಸಮಾಜ ವಿಜ್ಞಾನ ರಂಗಗಳ ಭಾಭಾ ಮತ್ತು ಸಾರಾ ಭಾಯ್ ಆಗಿದ್ದರು. ಇಬ್ಬರು ಕೂಡ ಪ್ರಬಲ ಉದಾರವಾದಿಗಳು ಹಾಗೂ ಮಾರ್ಕ್ಸ್‌ವಾದದ ವಿರೋಧಿಗಳಾಗಿದ್ದರು. ಆದರೆ ಈಗ ಇಂತಹ ಮಹಾನ್ ಧೀಮಂತರ ಸ್ಥಾನಗಳಲ್ಲಿ ಆರೆಸ್ಸೆಸ್ ಪ್ರಾಯೋಜಿತ ವ್ಯಕ್ತಿಗಳನ್ನು, ಸಂಘಿಗಳನ್ನು ಕುಳ್ಳಿರಿಸಲಾಗಿದೆ.

ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯಕ್ಕೆ ಬಂದಾಗ, ಮೋದಿ ಸರಕಾರವು ಮೊದಲ ಎನ್‌ಡಿಎ ಸರಕಾರಕ್ಕಿಂತಲೂ ತುಂಬಾ ಕೀಳಾಗಿ ನಡೆದುಕೊಳ್ಳುತ್ತಿದೆ. ಅಂದಿನ ಎನ್‌ಡಿಎ ಸರಕಾರದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಆಯ್ಕೆ ಮಾಡಿಕೊಂಡಿದ್ದ ಕೆಲವರು ಸಚಿವರು ವಿದ್ವತ್ ಮತ್ತು ಅನುಭವದ ಬಗ್ಗೆ ಬಹಳ ಗೌರವ ಹೊಂದಿದ್ದರು.

ಮೊದಲ ಎನ್‌ಡಿಎ ಸರಕಾರದ ಮಾನವ ಸಂಪನ್ಮೂಲ ಸಚಿವ ಸ್ವತಃ ಎಂ.ಎಂ. ಜೋಶಿಯವರು ಭೌತಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಹೊಂದಿದವರಾಗಿದ್ದರು. ವಾಜಪೇಯಿಯವರ ಕ್ಯಾಬಿನೆಟ್ ಸಹೋದ್ಯೋಗಿಗಳಾಗಿದ್ದ ಜಾರ್ಜ್ ಫೆರ್ನಾಂಡಿಸ್, ಯಶವಂತ ಸಿನ್ಹಾ ಮತ್ತು ಎಲ್.ಕೆ.ಅಡ್ವಾಣಿಯವರು ಎಲ್ಲರೂ ಕೂಡ ಇತಿಹಾಸ ಮತ್ತು ಸಾರ್ವಜನಿಕ ನೀತಿ ಕುರಿತಾದ ಪುಸ್ತಕಗಳ ಉತ್ತಮ ಓದುಗರಾಗಿದ್ದರು. ಜಸ್ವಂತ್ ಸಿಂಗ್ ಮತ್ತು ಅರುಣ್ ಶೌರಿ ಗಂಭೀರ ಪುಸ್ತಕಗಳನ್ನು ಓದುತ್ತಿದ್ದುದಷ್ಟೇ ಅಲ್ಲ, ಅವರು ಪುಸ್ತಕಗಳ ಲೇಖಕರೂ ಆಗಿದ್ದರು.

ಇದೆಲ್ಲದಕ್ಕೆ ಹೋಲಿಸಿದರೆ, ಇಂದಿನ ಸರಕಾರದಲ್ಲಿ (ಪ್ರಧಾನಿಯವರೂ ಸೇರಿದಂತೆ) ಇತಿಹಾಸ, ಸಾಹಿತ್ಯ ಅಥವಾ ವಿಜ್ಞಾನದಲ್ಲಿ ಆಸಕ್ತಿ ಹೊಂದಿರುವ ಒಬ್ಬನೇ ಒಬ್ಬ ಸಚಿವರಿದ್ದಾರೆ ಅಂತ ನನಗನ್ನಿಸುವುದಿಲ್ಲ.

ಅವರಲ್ಲಿ ದೈನಿಕ ವಾರ್ತಾಪತ್ರಿಕೆಗಳನ್ನು ಬಿಟ್ಟು ಬೇರೆ ಏನನ್ನಾದರೂ ಓದುವವರಿದ್ದಾರೆ ಎಂದು ನನಗನ್ನಿಸುವುದಿಲ್ಲ. ಕೆಲವರಂತೂ ಫೇಸ್‌ಬುಕ್, ವಾಟ್ಸ್‌ಆ್ಯಪ್ ಅಥವಾ ಟ್ವಿಟರ್‌ಗಿಂತ ಮುಂದೆ ಹೋಗಿ ದೈನಿಕಗಳನ್ನು ಓದದೆ ಇರುವವರೂ ಇರಬಹುದು. ಹೀಗಾಗಿ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳನ್ನು ಅಥವಾ ಸಂಶೋಧನಾ ಸಂಸ್ಥೆಗಳ ನಿರ್ದೇಶಕರನ್ನು ನೇಮಕ ಮಾಡುವಾಗ ಅವರು (ಆ ಸಚಿವರು) ಫಸ್ಟ್ - ರೇಟ್, ಪ್ರತಿಭಾವಂತ ವಿದ್ವಾಂಸರನ್ನು ನೇಮಕಮಾಡದೆ ಥರ್ಡ್ - ರೇಟ್(ತೃತೀಯ ದರ್ಜೆಯ), ಕಳಪೆ ಸಿದ್ಧಾಂತಿಗಳನ್ನು ನೇಮಕ ಮಾಡುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.
ಜ್ಞಾನದ ಕುರಿತಾಗಿ ಮೋದಿ ಸರಕಾರಕ್ಕೆ ಇರುವ ದ್ವೇಷಪೂರಿತ ಮನೋಧರ್ಮ ಈ ಲೇಖಕನ ಬದುಕಿಗೆ ಹಾನಿ ಮಾಡಿಲ್ಲ. ಯಾಕೆಂದರೆ ನಾನು 25 ವರ್ಷಗಳ ಹಿಂದೆಯೇ ಶಿಕ್ಷಣರಂಗಕ್ಕೆ ವಿದಾಯ ಹೇಳಿದ್ದೆ. ಆದರೂ ಕೂಡ ಅಂದು ನನ್ನ ಸಹೋದ್ಯೋಗಿಗಳಾಗಿದ್ದವರು, ಈಗ ವೈಯಕ್ತಿಕವಾಗಿಯೂ, ವೃತ್ತಿಪರವಾಗಿಯೂ ತಮ್ಮ ಬದುಕನ್ನು ಯಾವ ಸಂಸ್ಥೆಗಳ ಸೇವೆಯಲ್ಲಿ ಸವೆಸಿದ್ದರೋ, ಅಂತಹ ಸಂಸ್ಥೆಗಳ ಮೇಲೆ ಈಗ ನಡೆಯುತ್ತಿರುವ ರಾಜಕೀಯ ಪ್ರೇರಿತ ದಾಳಿಗಳಿಂದ ಕಿರುಕುಳ ಅನುಭವಿಸುತ್ತಿರುವುದನ್ನು ನೋಡುವಾಗ ನನಗೆ ತುಂಬ ದುಃಖವಾಗುತ್ತದೆ.

ದಿಲ್ಲಿಯಲ್ಲಿ ಮೋದಿ ಅಧಿಕಾರಕ್ಕೆ ಬಂದು ಒಂದು ವರ್ಷದ ಬಳಿಕ, ಮೋದಿ ಸರಕಾರ ಈ ದೇಶ ಕಂಡ ‘‘ಅತ್ಯಂತ ಬುದ್ಧಿಜೀವಿ - ವಿರೋಧಿ’’ ಸರಕಾರ ಎಂದು ನಾನು ಬರೆದಿದ್ದೆ. ಅಂದಿನಿಂದ ಮೋದಿ ಸರಕಾರ ನನ್ನ ಈ ಅಭಿಪ್ರಾಯವನ್ನು ಬದಲಿಸುವಂತಹ ಅಥವಾ ಮರುಪರಿಶೀಲಿಸುವಂತಹ ಏನನ್ನೂ ಮಾಡಿಲ್ಲ. ಅದು ನನ್ನ ಈ ಅಭಿಪ್ರಾಯವನ್ನು ಮತ್ತಷ್ಟು ಬಲಪಡಿಸುವಂತಹ ಕ್ರಮಗಳನ್ನೇ ತೆಗೆದುಕೊಂಡಿದೆ. ಅಧಿಕಾರಕ್ಕೆ ಬಂದಂದಿನಿಂದ ಮೋದಿ ನೇತೃತ್ವದ ಸರಕಾರವು ವಿಜ್ಞಾನ ಮತ್ತು ವಿದ್ವತ್ತಿನ ವಿರುದ್ಧ ಸರಣಿ ಸರ್ಜಿಕಲ್ ದಾಳಿಗಳನ್ನು ನಡೆಸಿದೆ ಮತ್ತು ಈ ದಾಳಿಗಳು ಅದು ಭಯೋತ್ಪಾದನೆ ಮತ್ತು ಕಪ್ಪುಹಣದ ವಿರುದ್ಧ ನಡೆಸಿರುವ ದಾಳಿಗಳಿಗಿಂತ ಬಹಳಷ್ಟು ಹೆಚ್ಚು ಪರಿಣಾಮಕಾರಿಯಾಗಿದೆ ಎನ್ನುವುದು ಒಂದು ದುರಂತ.

ಜ್ಞಾನವನ್ನು ಉತ್ಪಾದಿಸುವ ಮತ್ತು ಸಂಶೋಧನೆಗೆ ಪ್ರೋತ್ಸಾಹ ನೀಡುವ ನಮ್ಮ ಅತ್ಯುತ್ತಮ ಸಂಸ್ಥೆಗಳಿಗೆ ಹಾನಿಮಾಡುವ ಮೂಲಕ ಮೋದಿ ಸರಕಾರವು ದೇಶದ ಸಾಮಾಜಿಕ ಹಾಗೂ ಆರ್ಥಿಕ ಭವಿಷ್ಯಕ್ಕೆ ಗಂಭೀರ ಸ್ವರೂಪದ ಹಾನಿಮಾಡಿದಂತಾಗಿದೆ. ಈಗ ಬದುಕುತ್ತಿರುವ ಹಾಗೂ ಭವಿಷ್ಯದಲ್ಲಿ ಜನಿಸಲಿರುವ ಭಾರತೀಯರು ಮೋದಿ ಸರಕಾರವು ಬುದ್ಧಿಮತ್ತೆಯ, ವಿದ್ವತ್ತಿನ ವಿರುದ್ಧ ನಡೆಸಿರುವ ಈ ಬರ್ಬರ, ನಿಷ್ಠುರ ಯುದ್ಧಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ.


ಕೃಪೆ: telegraphindia.com

Writer - ರಾಮಚಂದ್ರ ಗುಹಾ

contributor

Editor - ರಾಮಚಂದ್ರ ಗುಹಾ

contributor

Similar News