ಬಸವಣ್ಣರ ‘ಕಾಯಕವೇ ಕೈಲಾಸ’ ಸಂದೇಶ ಎಲ್ಲರಿಗೂ ಸ್ಪೂರ್ತಿಯಾಗಲಿ: ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ

Update: 2019-05-07 14:38 GMT

ಉಡುಪಿ, ಮೇ 7: ಬಸವಣ್ಣ ಅವರ ‘ಕಾಯಕವೇ ಕೈಲಾಸ’ ಸಂದೇಶ ಎಲ್ಲರಿಗೂ ಸ್ಪೂರ್ತಿಯಾಗಬೇಕು. ಜನಸಾಮಾನ್ಯರಂತೆ ಸರಕಾರಿ ಅಧಿಕಾರಿಗಳು, ಸಿಬ್ಬಂದಿಗಳು ಸಹ ತಮ್ಮ ದಿನನಿತ್ಯದ ಕೆಲಸದಲ್ಲಿ ಬಸವಣ್ಣರ ಸಂದೇಶವನ್ನು ಅಳವಡಿಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಮಂಗಳವಾರ, ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ನಡೆದ ಬಸವ ಜಯಂತಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತಾಡುತಿದ್ದರು.

ರಾಜ್ಯದಲ್ಲಿ ಬಸವಣ್ಣನವರ ವಚನಗಳನ್ನು ತಿಳಿಯದವರೇ ಇಲ್ಲ. ಅವರ ವಚನಗಳ ಸಂದೇಶಗಳು ಪ್ರತಿಯೊಬ್ಬರಿಗೂ ಸ್ಪೂರ್ತಿ ನೀಡುವಂತಿವೆ. ಹೊರ ರಾಜ್ಯದಿಂದ ಕರ್ನಾಟಕಕ್ಕೆ ಬಂದ ತಾನೂ ಸಹ ಬಸವಣ್ಣನವರ ‘ಕಾಯಕವೇ ಕೈಲಾಸ’ ಎಂಬ ಸಂದೇಶದಿಂದ ಸ್ಪೂರ್ತಿ ಪಡೆದಿದ್ದೇನೆ. ಬಸವಣ್ಣನವರ ಬಸವ ತತ್ವಗಳು ಪ್ರಚಾರಗೊಂಡ ಜಿಲ್ಲೆಯಲ್ಲಿ ತಾನು ಕರ್ತವ್ಯ ನಿರ್ವಹಿಸಿದ್ದು, ಅಲ್ಲಿನ ಗ್ರಾಮಗಳಲ್ಲಿ ಜನತೆ ಸಹ ಬಸವಣ್ಣರ ವಚನಗಳಿಂದ ಪ್ರೇರಣೆಗೊಂಡಿ ರುವುದನ್ನು ಗಮನಿಸಿದ್ದೇನೆ. ಅನುಭವವೇ ಗುರು ಮತ್ತು ಕಾಯಕವೇ ಕೈಲಾಸ ಸಂದೇಶಗಳು ಸೇರಿದಂತೆ ಬಸವಣ್ಣರ ಪ್ರತಿಯೊಂದು ಸಂದೇಶಗಳು ಸದಾಕಾಲಕ್ಕೂ ಪ್ರಸ್ತುತ ಎಂದು ಹೆಪ್ಸಿಬಾ ರಾಣಿ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿಂಧೂ ಬಿ ರೂಪೇಶ್ ಮಾತನಾಡಿ, ಕರ್ನಾಟಕವು ಅನೇಕ ಮಹಾ ಪುರುಷರನ್ನು ವಿಶ್ವಕ್ಕೆ ನೀಡಿದೆ. ಅದರಲ್ಲಿ ಬಸವಣ್ಣ ಪ್ರಮುಖರು. ಎಲ್ಲರಿಗೂ ತಿಳಿಯುವಂತೆ ಅತ್ಯಂತ ಸರಳ ಭಾಷೆಯಲ್ಲಿ ಅವರ ರಚನೆಯ ವಚನಗಳು ಎಲ್ಲರನ್ನೂ ಒಳಗೊಳ್ಳುವ ಸಂದೇಶಗಳಿಂದ ಕೂಡಿದೆ. 12ನೇ ಶತಮಾನದಲ್ಲಿ ರಚಿಸಿದ ಅವರ ವಚನಗಳು ಇಂದಿಗೂ ಪ್ರಸ್ತುತ. ನಾವು ಇಂದು ಎಷ್ಟೇ ಮುಂದುವರಿದಿದ್ದರೂ ನಮ್ಮಲ್ಲಿ ಜಾತೀಯತೆಯ ವ್ಯವಸ್ಥೆ ಇನ್ನೂ ಇದೆ. ಈ ಬಗ್ಗೆ ಬಸವಣ್ಣ ನೀಡಿದ ಸಾಮಾಜಿಕ ಸಂದೇಶ ಇಂದಿಗೂ ಪ್ರಸ್ತುತ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಷಾ ಜೇಮ್ಸ್ ಮಾತನಾಡಿ, ಬವಸಣ್ಣ ಅಂದು ಆರಂಭಿಸಿದ ಅನುಭವ ಮಂಟಪ, ಇಂದಿನ ಪ್ರಜಾಪ್ರುತ್ವ ವ್ಯವಸ್ಥೆ ಮತ್ತು ಸಂಸತ್‌ಗೆ ಮಾದರಿಯಾಗಿದೆ. ಅವರ ವಚನಗಳಲ್ಲಿನ ಸಂದೇಶಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಜಿಲ್ಲಾ ಬಸವ ಸಮಿತಿಯ ಅಧ್ಯಕ್ಷ ಪಾಟೀಲ್, ಆಡಳಿತ ನಿರ್ದೇಶಕ ನಿರಂಜನ್ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News