ಉಗ್ರರ ಮೇಲೆ ಬುಲೆಟ್ ಹಾರಿಸಲು ಯೋಧರು ಚುನಾವಣಾ ಆಯೋಗದ ಅನುಮತಿ ಪಡೆಯಬೇಕಾ?: ಮೋದಿ
ಹೊಸದಿಲ್ಲಿ, ಮೇ 12: ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಲು ಸೇನೆ ಚುನಾವಣಾ ಆಯೋಗದ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ರವಿವಾರ ಬೆಳಗ್ಗೆ ಜಮ್ಮು-ಕಾಶ್ಮೀರದ ಸೋಪಿಯಾನ್ನಲ್ಲಿ ಇಬ್ಬರು ಉಗ್ರರನ್ನು ಸೇನೆ ಹೊಡೆದುರುಳಿಸಿದ್ದನ್ನು ಉಲ್ಲೇಖಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಉತ್ತರಪ್ರದೇಶದ ಖುಷಿನಗರದಲ್ಲಿ ರವಿವಾರ ನಡೆದ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಹೇಳಿದ್ದಾರೆ.
ಉಗ್ರರು ಬಾಂಬ್ಗಳು ಹಾಗೂ ಗನ್ಗಳೊಂದಿಗೆ ಸೈನಿಕರ ಎದುರು ನಿಂತಿರುತ್ತಾರೆ. ಆಗ ನಮ್ಮ ಸೈನಿಕರು ಉಗ್ರರ ಮೇಲೆ ಶೂಟ್ ಮಾಡಲು ಚುನಾವಣಾ ಆಯೋಗದ ಅನುಮತಿ ಪಡೆಯಬೇಕಾ? ನಾವು ಅಧಿಕಾರಕ್ಕೆ ಬಂದ ಬಳಿಕ ಕಾಶ್ಮೀರದಲ್ಲಿ ಪ್ರತಿ ಎರಡು-ಮೂರು ದಿನ ಉಗ್ರರ ಸಂಹಾರ ನಡೆಯುತ್ತಿದೆ. ಇದು ನನ್ನ ಸ್ವಚ್ಛಗೊಳಿಸುವ ಕಾರ್ಯಾಚರಣೆ. ಚುನಾವಣೆ ನಡೆಯುತ್ತಿರುವಾಗ ಸೈನಿಕರು ಉಗ್ರರ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದಾರೆ ಎಂದು ವಿಪಕ್ಷಗಳು ಹೇಳುತ್ತಿವೆ. ಗುಂಡು ಹಾರಿಸಲು ಸೈನಿಕರು ಚುನಾವಣಾ ಆಯೋಗದ ಅನುಮತಿ ಪಡೆಯಬೇಕಾ? ಎಂದು ಮೋದಿ ವ್ಯಂಗ್ಯವಾಡಿದರು.