2018ನೇ ತಂಡದ ಅಧಿಕಾರಿಗಳಿಗೆ ಕೇಡರ್ ಹಂಚಿಕೆ: ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು
ಹೊಸದಿಲ್ಲಿ,ಮೇ 13: 2018ರ ತಂಡದ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಕೇಡರ್ ಹಂಚಿಕೆಯನ್ನು ರದ್ದುಗೊಳಿಸಿರುವ ದಿಲ್ಲಿ ಉಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಕೇಂದ್ರ ಸರಕಾರವು ಸಲ್ಲಿಸಿರುವ ಮೇಲ್ಮನವಿಯನ್ನು ಮೇ 17ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸರ್ವೋಚ್ಚ ನ್ಯಾಯಾಲಯವು ಸೋಮವಾರ ಒಪ್ಪಿಕೊಂಡಿದೆ.
ಸಮಗ್ರ ಕೇಡರ್ ಹಂಚಿಕೆ ಪ್ರಕ್ರಿಯೆಯನ್ನು ಹೊಸದಾಗಿ ನಡೆಸುವಂತೆ ಉಚ್ಚ ನ್ಯಾಯಾಲಯವು ಸರಕಾರಕ್ಕೆ ಸೂಚಿಸಿದೆ. 2018ರ ತಂಡದಲ್ಲಿ ಕೇಡರ್ ಹಂಚಿಕೆಯಾಗಿರುವ ಅಧಿಕಾರಿಗಳು ತರಬೇತಿಯನ್ನು ಪೂರ್ಣಗೊಳಿಸಿದ್ದು,ಮೇ 10ರಿಂದ ತಮ್ಮ ತಮ್ಮ ಕೇಡರ್ಗಳಿಗೆ ಸೇರಿಕೊಳ್ಳಬೇಕಿತ್ತು ಎಂದು ತುರ್ತು ವಿಚಾರಣೆಗೆ ಕೋರಿದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಸಂಜೀವ ಖನ್ನಾ ಅವರ ಪೀಠಕ್ಕೆ ತಿಳಿಸಿದರು.
ನೂತನ ನೀತಿಯಡಿ 2018ರ ತಂಡದ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಕೇಂದ್ರದಿಂದ ಕೇಡರ್ ಹಂಚಿಕೆಯನ್ನು ಇತ್ತೀಚಿಗೆ ರದ್ದುಗೊಳಿಸಿದ್ದ ದಿಲ್ಲಿ ಉಚ್ಚ ನ್ಯಾಯಾಲಯವು ಹೊಸದಾಗಿ ಕೇಡರ್ ಹಂಚಿಕೆಗೆ ಆದೇಶಿಸಿತ್ತು.