ಪೆರಿಯದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ ಪ್ರಕರಣ: ಆರೋಪಿ ಸೆರೆ

Update: 2019-05-16 05:13 GMT
ಸುಬೀಷ್

ಕಾಸರಗೋಡು : ಪೆರಿಯದಲ್ಲಿ ನಡೆದ ಯುವ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಆರೋಪಿಯೋರ್ವನನ್ನು ತನಿಖಾ ತಂಡ ಮಂಗಳೂರು ವಿಮಾನ ನಿಲ್ದಾಣದಿಂದ ಬಂಧಿಸಿದೆ.

ಬಂಧಿತನನ್ನು ಉದುಮ ಪಾಕಂನ ಸುಬೀಷ್ ಎಂದು ಗುರುತಿಸಲಾಗಿದೆ.

ಕೃತ್ಯದ ಬಳಿಕ  ವಿದೇಶಕ್ಕೆ ಪರಾರಿಯಾಗಿದ್ದ ಸುಬೀಷ್ ಊರಿಗೆ ಮರಳುತ್ತಿದ್ದಾಗ ಮಂಗಳೂರು ವಿಮಾನ ನಿಲ್ದಾಣದಿಂದ ಈತನನ್ನು ಬಂಧಿಸುವಲ್ಲಿ ತನಿಖಾ ತಂಡ ಯಶಸ್ವಿಯಾಗಿದೆ. ಈತ ಪ್ರಕರಣದಲ್ಲಿ ನೇರವಾಗಿ ಭಾಗಿಯಾದ ಆರೋಪಿಯಾಗಿದ್ದು,  ಇದರಿಂದ ಪ್ರಕರಣದಲ್ಲಿ ಇದುವರೆಗೆ ಬಂಧಿತರಾದವರ ಸಂಖ್ಯೆ 14 ಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫೆ. 17 ರಂದು ರಾತ್ರಿ ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಕೃಪೇಶ್ ಮತ್ತು ಶರತ್ ಲಾಲ್ ಎಂಬವರನ್ನು ತಂಡವು ಕೊಲೆಗೈದಿತ್ತು. 
ಸುಬೀಷ್ ವಿದೇಶಕ್ಕೆ ತೆರಳಿರುವ ಬಗ್ಗೆ ಮಾಹಿತಿ ತಿಳಿದ ಕ್ರೈಂ  ಬ್ರಾಂಚ್  ತನಿಖಾ ತಂಡ ಇಂಟರ್ ಪೋಲ್ ನ ನೆರವು ಪಡೆಯಲು ತೀರ್ಮಾನಿಸಿತ್ತು. 

ಈ ನಡುವೆ ಈತ ಊರಿಗೆ ಮರಳುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ  ಇಂದು ಮುಂಜಾನೆ ಮಂಗಳೂರು  ವಿಮಾನ ನಿಲ್ದಾಣದಿಂದ ಬಂಧಿಸಲಾಗಿದೆ. ತಲೆ ಹೊರೆ ಕೂಲಿ ಕಾರ್ಮಿಕನಾಗಿರುವ ಈತ ಕೃತ್ಯದ ಬಳಿಕ  ಕೆಲ ದಿನ ಊರಲ್ಲಿದ್ದು ಬಳಿಕ ವಿದೇಶಕ್ಕೆ ಪರಾರಿಯಾಗಿದ್ದನು ಎಂದು ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News