ಎಚ್1ಎನ್1: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸಾರ್ವಜನಿಕರಿಗೆ ಸೂಚನೆ

Update: 2019-05-18 16:03 GMT

ಉಡುಪಿ, ಮೇ 18: ಎಚ್1ಎನ್1 ಕಾಯಿಲೆಯು ಎಚ್1ಎನ್1 ಎಂಬ ಇನ್‌ಪ್ಲುಯೆಂಜಾ ಜಾತಿಗೆ ಸೇರಿದ ವೈರಾಣುವಿನಿಂದ ಬರುವ ಕಾಯಿಲೆ ಯಾಗಿದೆ. ಇದು ಹೆಚ್ಚಿನ ಜನರಲ್ಲಿ ಮಾಮೂಲಿ ಶೀತ, ಕೆಮ್ಮು ರೂಪದಲ್ಲಿ ಬಂದು ಹೋಗುತ್ತದೆ. ಈ ಕಾಯಿಲೆಯಿಂದ ಸಾವಿರದಲ್ಲಿ ಒಬ್ಬರು ಅಥವಾ ಇಬ್ಬರು ಮಾತ್ರ ಸಾವಿಗೀಡಾಗಬಹುದು.

ಈ ರೋಗವಿರುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಅವನ ಬಾಯಿ ಮತ್ತು ಮೂಗಿನಿಂದ ಲಕ್ಷಾಂತರ ರೋಗಾಣುಗಳು 5ರಿಂದ 10 ಅಡಿ ತನಕ ಗಾಳಿಯಲ್ಲಿ ಹರಡುತ್ತದೆ. ಆಗ ರೋಗಿಯ ಆಸುಪಾಸು ಇರುವ ಆರೋಗ್ಯವಂತರ ಮೂಗಿಗೆ, ಬಾಯಿಗೆ ರೋಗಾಣು ಪ್ರವೇಶಿಸಿದಾಗ ರೋಗ ಬರುವ ಸಾಧ್ಯತೆ ಇರುತ್ತದೆ. ಹಾಗೆಯೇ ಈ ರೋಗಾಣು ಪರಿಸರದಲ್ಲಿ (ಉದಾ: ಕುರ್ಚಿ, ಮೇಜು, ಬಸ್ಸಿನ ಸೀಟುಗಳು) ಕೆಲವು ಗಂಟೆಗಳ ಕಾಲ ಜೀವಂತ ಇರುತ್ತದೆ. ಅಂತಹ ಸ್ಥಳಗಳನ್ನು ಮುಟ್ಟಿ ಅದೇ ಕೈಯಲ್ಲಿ ನಾವು ಬಾಯಿ, ಮೂಗು, ಕಣ್ಣು ಮುಟ್ಟಿಕೊಂಡಲ್ಲಿ ರೋಗ ಬರುವ ಸಾಧ್ಯತೆ ಇರುತ್ತದೆ.

ಎಚ್1ಎನ್1 ಲಕ್ಷಣಗಳು: ವಿಪರೀತ ಜ್ವರ, ಕೆಮ್ಮು, ವಿಪರೀತ ಸುಸ್ತು, ಗಂಟಲು ನೋವು, ವಿಪರೀತ ತಲೆ ನೋವು, ವಿಪರೀತ ಮೈಕೈ ನೋವು, ಸೀನು, ಮೂಗಿನಿಂದ ನೀರು ಬರುವುದು ಈ ರೋಗದ ಲಕ್ಷಣಗಳಾಗಿವೆ.

ಮುಂಜಾಗೃತ ಕ್ರಮಗಳು:  ಕೈಯನ್ನು ಯಾವುದೇ ಕಾರಣಕ್ಕೂ ತೊಳೆಯದೇ ಮುಖದ ಯಾವುದೇ ಭಾಗವನ್ನು ಮುಟ್ಟಬಾರದು. ರೋಗ ಇರುವವ ರೊಂದಿಗೆ ಆದಷ್ಟು ಕಡಿಮೆ ಓಡಾಟ ನಡೆಸಬೇಕು. ಸಂದರ್ಭ ಸಿಕ್ಕಾಗಲೆಲ್ಲ ಸಾಬೂನು ಉಪಯೋಗಿಸಿ ಕೈತೊಳೆದುಕೊಳ್ಳಬೇಕು. ಹಸ್ತಲಾಘವ- ಆಲಿಂಗನ ಮಾಡಬಾರದು. ಕೆಮ್ಮುವಾಗ, ಸೀನುವಾಗ ಕಡ್ಡಾಯವಾಗಿ ಕರವಸ್ತ್ರಗಳನ್ನು ಉಪಯೋಗಿಸಬೇಕು. ರೋಗದ ಲಕ್ಷಣ ಇರುವವರು ಶಾಲೆ, ಆಫೀಸಿಗೆ ಹೋಗದೇ ರಜೆ ಮಾಡಬೇಕು. ಶೀತ, ಕೆಮ್ಮು ಇರುವವರು ಸಾರ್ವಜನಿಕ ಸ್ಥಳಗಳಿಗೆ ಹೋಗಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದು.

ಮಕ್ಕಳು, ಗರ್ಭಿಣಿಯರು, ಹಿರಿಯ ನಾಗರಿಕರು ಮತ್ತು ತೀವ್ರತರದ ಕಾಯಿಲೆ ಇರುವವರಲ್ಲಿ ಎಚ್1ಎನ್1 ಗಂಡಾಂತರಕಾರಿಯಾಗಿದ್ದು, ಅವರಲ್ಲಿ ಕೆಮ್ಮು, ನೆಗಡಿ, ತಲೆನೋವು, ಗಂಟಲು ಕೆರೆತ ಕಂಡುಬಂದರೆ, ಚಿಕಿತ್ಸೆ ನೀಡಿದರೂ 24 ಗಂಟೆಯೊಳಗೆ ಗುಣವಾಗದಿದ್ದಲ್ಲಿ ಅವರನ್ನು ತಕ್ಷಣ ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು.

ನಿಯಂತ್ರಣಕ್ಕೆ ಕ್ರಮಗಳು: ಸರಕಾರಿ ವೈದ್ಯಾಧಿಕಾರಿ, ಖಾಸಗಿ ವೈದ್ಯರು ( ಐಎಂಎ ಸದಸ್ಯರು) ಮತ್ತು ಆಯುಷ್ ವೈದ್ಯರುಗಳಿಗೆ ಎಚ್1ಎನ್1 ಕುರಿತು ಅರಿವು ನೀಡುವ ಕಾರ್ಯಕ್ರಮ ನಡೆಸಲಾಗಿದೆ. ಸರಕಾರಿ ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖಾ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಸ್ವಸಹಾಯ ಗುಂಪಿನ ಸದಸ್ಯರುಗಳಿಗೆ ಎಚ್1ಎನ್1 ಕುರಿತು ಅರಿವು ಮೂಡಿಸಲಾಗುತ್ತಿದೆ.

ಸರಕಾರಿ ವೈದ್ಯಾಧಿಕಾರಿ, ಖಾಸಗಿ ವೈದ್ಯರು ( ಐಎಂಎ ಸದಸ್ಯರು) ಮತ್ತು ಆಯುಷ್ ವೈದ್ಯರುಗಳಿಗೆ ಎಚ್1ಎನ್1 ಕುರಿತು ಅರಿವು ನೀಡುವ ಕಾರ್ಯಕ್ರಮ ನಡೆಸಲಾಗಿದೆ. ಸರಕಾರಿ ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖಾ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಸ್ವಸಹಾಯ ಗುಂಪಿನ ಸದಸ್ಯರುಗಳಿಗೆ ಎಚ್1ಎನ್1 ಕುರಿತು ಅರಿವು ಮೂಡಿಸಲಾಗುತ್ತಿದೆ. ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಇಲಾಖಾ ಸಿಬ್ಬಂದಿಗಳು ಮನೆ ಮನೆಗೆ ಭೇಟಿ ನೀಡಿ, ಕರಪತ್ರ ಹಂಚಿ ಅರಿವು ಮೂಡಿಸುವ ಕೆಲಸ ಮಾಡುತಿದ್ದಾರೆ. ಎಚ್1ಎನ್1 ಕಂಡುಬಂದ ಮನೆಗಳು ಮತ್ತು ಮನೆಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜ್ವರ ಸಮೀಕ್ಷೆ ಮಾಡಲಾಗುತ್ತಿದ್ದು, ಸಂಶಯಾಸ್ಪದ ಪ್ರಕರಣಗಳನ್ನು ಪತ್ತೆ ಹಚ್ಚಿ ಔಧಿಮಾತ್ರೆಗಳನ್ನು ನೀಡಲಾಗುತ್ತಿದೆ.

ಪ್ರಾಥಮಿಕ/ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಟೆಮಿಪ್ಲೂ 75 ಎಂ.ಜಿ ಮತ್ತು 45 ಎಂ.ಜಿ ಮಾತ್ರೆಗಳು ಹಾಗೂ ಸಿರಪ್‌ಗಳನ್ನು ದಾಸ್ತಾನು ಇರಿಸಲಾಗಿದೆ. ಪ್ರತಿ ಆರೋಗ್ಯ ಸಂಸ್ಥೆಗಳಲ್ಲಿ ಎಚ್1ಎನ್1 ರೋಗಿಗಳಿಗಾಗಿ ಹಾಸಿಗೆಗಳನ್ನು ಕಾದಿರಿಸಿದ್ದು, ಸಂಶಯಾಸ್ಪದ ರೋಗಿಗಳನ್ನು ಪ್ರತ್ಯೇಕಿಕರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತಾಲೂಕು ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ಸ್‌ಗಳನ್ನು ಕಾದಿರಿಸಲಾಗಿದ್ದು, ತೀವ್ರ ಸ್ವರೂಪದ ರೋಗಿಗಳಿಗೆ ಬಳಸಲು ಸೂಚಿಸಲಾಗಿದೆ. ಎಚ್1ಎನ್1 ಕುರಿತು ಕರಪತ್ರಗಳನ್ನು ಮುದ್ರಿಸಿ ಹಂಚಲಾಗುತ್ತಿದೆ. ಪೋಸ್ಟರ್ ಮತ್ತು ಬ್ಯಾನರ್‌ಗಳನ್ನು ಮುದ್ರಿಸಿ, ಕಲ್ಯಾಣ ಮಂಟಪ, ಸಿನಿಮಾ ಮಂದಿರ, ರೈಲ್ವೇ ಸ್ಟೇಷನ್, ಬಸ್ಸು ನಿಲ್ದಾಣ, ದೇವಸ್ಥಾನ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲು ಎಲ್ಲಾ ಸರಕಾರಿ ವೈದ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ.

ಜ್ವರ, ನೆಗಡಿ, ಕೆಮ್ಮು, ಗಂಟಲು ಕೆರೆತ, ತಲೆ ನೋವು, ಮೈಕೈ ನೋವು, ಸುಸ್ತು ಇತ್ಯಾದಿಗಳಿಗಾಗಿ ರೋಗಿಗಳು ಎರಡು ದಿನದಲ್ಲಿ ಚಿಕಿತ್ಸೆಯಿಂದ ಗುಣಮುಖ ರಾಗದಿದ್ದಲ್ಲಿ ಸಮೀಪದ ಸರಕಾರಿ ಆಸ್ಪತ್ರೆಗೆ ಕಳುಹಿಸಿ ಟೆಮಿಪ್ಲೂಮಾತ್ರೆ ನೀಡಲಾಗುತ್ತದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News