"ಬೊರಿಮಾರ್ ಚರ್ಚ್‍ನಲ್ಲಿ ನಡೆದ ಕಾರ್ಯಕ್ರಮ ನನ್ನ ಬದುಕಿಗೂ ಹೊಸ ಪ್ರೇರಣೆ ನೀಡಿದೆ"

Update: 2019-05-20 15:51 GMT

ಕರ್ನಾಟಕದ ಆರ್ಚ್ ಬಿಷಪ್ ಡಾ. ಪೀಟರ್ ಮಚಾದೊ ಭೇಟಿ

ಬಂಟ್ವಾಳ, ಮೇ 20: ಶತಮಾನೋತ್ತರ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಬೊರಿಮಾರ್ ಚರ್ಚ್‍ನಲ್ಲಿ ನಡೆದ ಅವಿಸ್ಮರಣೀಯ ಕಾರ್ಯಕ್ರಮ ನನ್ನ ಬದುಕಿಗೂ ಹೊಸ ಪ್ರೇರಣೆ ನೀಡಿದೆ. ಇದರಲ್ಲಿ ಪಾಲ್ಗೊಂಡು ನಾನೂ ಸಂತೃಪ್ತನಾಗಿದ್ದೇನೆ. ಸರ್ವಶಕ್ತನ ಅನುಗ್ರಹದೊಂದಿಗೆ 125ನೇ ವರ್ಷದ ಎಲ್ಲ ಕಾರ್ಯಕ್ರಮಗಳೂ ಯಶಸ್ವಿಯಾಗಲಿ ಎಂದು ಕರ್ನಾಟಕದ ಆರ್ಚ್ ಬಿಷಪ್ ಡಾ. ಪೀಟರ್ ಮಚಾದೊ ಹಾರೈಸಿದ್ದಾರೆ.

ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಬೊರಿಮಾರ್ ಚರ್ಚ್‍ಗೆ ಸೋಮವಾರ ಭೇಟಿ ನೀಡಿದ ಅವರು, ದಿವ್ಯ ಬಲಿಪೂಜೆ ಹಾಗೂ ಕಮ್ಯುನಿಯನ್ ಡೇ ಎಂಬ ಪವಿತ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.

ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮದ ಅಂಗವಾಗಿ ಪ್ರತೀ ತಿಂಗಳು ಮಾದರಿಯಾದ ಧಾರ್ಮಿಕ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸುತ್ತಿರುವ ಚರ್ಚಿನ ಧರ್ಮಗುರು ಹಾಗೂ ಪಾಲನಾ ಮಂಡಳಿಯನ್ನು ಅಭಿನಂದಿಸಿದ ಅವರು, ಮುಂದೆಯೂ ಇಂತಹಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದರು.

ಮಕ್ಕಳಾದ ಐಶಲ್ ಮಾರ್ಟಿಸ್, ಲೆನೊರಾ ಸಾನ್ಸಿಯಾ ಪಿಂಟೊ, ನತಾಶ ಮೆಂಡೊನ್ಸಾ, ಒಲಿಶಾ ನೊರೊನ್ಹಾ, ರಿಯೋನ್ ಪಾವ್ಲ್ ಮಾರ್ಟಿಸ್ ಹಾಗೂ ಶರುನ್ ರೊಡ್ರಿಗಸ್ ಅವರಿಗೆ ಪ್ರಪ್ರಥಮ ಬಾರಿಗೆ ಪರಮ ಪ್ರಸಾದ ನೀಡಿ ಹರಸಿದರು.

ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಡಾ. ಲಾರೆನ್ಸ್ ಮುಕ್ಕುಝಿ ಅವರು ಮಾತನಾಡಿ, ಆರ್ಚ್ ಬಿಷಪ್ ಭೇಟಿಯ ಈ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮನಸ್ಸು ತುಂಬಿ ಬಂದಿದೆ. ಇದೆಲ್ಲವೂ ದಯಾಮಯನಾದ ಸರ್ವಶಕ್ತನ ಪ್ರೇರಣೆಯಿಂದ ನಡೆದಿದೆ. ಪರಮಪ್ರಸಾದ ಸ್ವೀಕರಿಸಿದ ಮಕ್ಕಳ ಬದುಕು ಉಜ್ವಲವಾಗಲಿ ಎಂದು ಹಾರೈಸಿದರು.

ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಡಾ. ಗೀವರ್ಗೀಸ್ ಮಾರ್ ಮಕಾರಿಯೋಸ್ ಮಾತನಾಡಿ, ದೇವರ ಕಾರ್ಯದಲ್ಲಿ ಒಂದಾಗು ವುದಕ್ಕೂ ಅವನ ಕೃಪೆ ಇರಬೇಕು. ಶತಮಾನೋತ್ತರ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಚರ್ಚ್‍ನ ಈ ಕಾರ್ಯಕ್ರಮಗಳು ಇಡೀ ಸಮಾಜಕ್ಕೆ ಆದರ್ಶವನ್ನು ಹಂಚುತ್ತಿದೆ ಎಂದರು.

ಪರಮಪ್ರಸಾದ ಸ್ವೀಕರಿಸಿದ ಮಕ್ಕಳಿಗೆ ಹಾಗೂ ಮಕ್ಕಳ ಹೆತ್ತವರಿಗೆ ಪಕ್ಷಿಕೆರೆ ಚರ್ಚಿನ ಧರ್ಮಗುರು ವಂದನೀಯ ಫಾ.ಮೆಲ್ವಿನ್ ನೊರೋನ್ಹಾ ಅವರು ಎಲ್ಲ ಧರ್ಮಗುರುಗಳ ಪರವಾಗಿ ಆಶೀರ್ವಚನ ನೀಡಿದರು. ಮಂಗಳೂರು ಧರ್ಮಪ್ರಾಂತ್ಯದ ವಿವಿಧ ಚರ್ಚ್‍ಗಳ ಧರ್ಮಗುರುಗಳು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಚರ್ಚ್‍ನ ಪ್ರಧಾನ ಧರ್ಮಗುರು ಗ್ರೆಗರಿ ಪಿರೇರಾ ಹಾಗೂ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ರೋಷನ್ ಬೊನಿಫಾಸ್ ಮಾರ್ಟಿಸ್, ಕಾರ್ಯದರ್ಶಿ ಪ್ರೀತಿ ಲ್ಯಾನ್ಸಿ ಪಿರೇರಾ, ಶಿಕ್ಷಕಿ ಮೇರಿ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು. ಸ್ಟೇನಿ ಡಿಸೋಜ ಮತ್ತು ಇವ್ಲೀನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

ಆರ್ಚ್ ಬಿಷಪ್ ಅತ್ಯಂತ ಮೇಲು ಹುದ್ದೆಯಾಗಿದ್ದು, ಇವರು ಚರ್ಚ್‍ಗಳಿಗೆ ಭೇಟಿನೀಡುವುದು ವಿರಳ. ಈ ನಿಟ್ಟಿನಲ್ಲಿ ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಬೊರಿಮಾರ್ ಚರ್ಚ್‍ಗೆ ಆರ್ಚ್ ಬಿಷಪ್ ಡಾ. ಮಚಾದೊರವರು ಭೇಟಿ ನೀಡುತ್ತಿರುವುದು ಹಬ್ಬದ ಸಂಭ್ರಮ ತಂದಿತ್ತು. ಈ ವೇಳೆ ಆರ್ಚ್ ಬಿಷಪ್‍ರವರ ಹುಟ್ಟುಹಬ್ಬ ಆಚರಣೆ ನಡೆಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರಗಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News