ಬಜ್ಪೆ ವಿಮಾನ ದುರಂತಕ್ಕೆ 9 ವರ್ಷ: ಪರಿಹಾರಕ್ಕಾಗಿ ಸಂತ್ರಸ್ತ ಕುಟುಂಬದ ಹೋರಾಟ

Update: 2019-05-22 05:34 GMT

ಮಂಗಳೂರು: ನಗರ ಹೊರವಲಯದ ಬಜ್ಪೆ ಕೆಂಜಾರಿನಲ್ಲಿ ವಿಮಾನ ದುರಂತ ಸಂಭವಿಸಿ ಮೇ 22ಕ್ಕೆ 9 ವರ್ಷಗಳು ತುಂಬುತ್ತಿವೆ. ಬಹುತೇಕ ಸಂತ್ರಸ್ತರ ಕುಟುಂಬವು ನ್ಯಾಯಾಲಯದಲ್ಲಿ ಹೋರಾಡಿ ಕನಿಷ್ಠ 1ರಿಂದ 8 ಕೋ.ರೂ.ವರೆಗೆ ಪರಿಹಾರ ಪಡೆದುಕೊಂಡಿದ್ದರೆ, ಹೆಚ್ಚಿನ ಪರಿಹಾರಕ್ಕಾಗಿ ಮಹಿಳೆಯರು ಮತ್ತು ಮಕ್ಕಳ ಸಂತ್ರಸ್ತ ಕುಟುಂಬವು ಸುಪ್ರೀಂ ಕೋರ್ಟ್ ನಲ್ಲಿ ನಡೆಸುತ್ತಿರುವ ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಗುವ ಲಕ್ಷಣ ಕಾಣಿಸುತ್ತಿದೆ. ಅಂದರೆ ಶೀಘ್ರ ಸುಪ್ರೀಂ ಕೋರ್ಟ್‌ನಿಂದ ತೀರ್ಪು ಹೊರಬೀಳುವ ವಿಶ್ವಾಸವನ್ನು ಮಂಗಳೂರು ವಿಮಾನ ದುರಂತ ಸಂತ್ರಸ್ತ ಕುಟುಂಬಗಳ ಸಮಿತಿ ಹೊಂದಿದೆ.

2010ರ ಮೇ 22ರಂದು ಮುಂಜಾನೆ ಸುಮಾರು 6:20ಕ್ಕೆ ದುಬೈಯಿಂದ ಬಜ್ಪೆ ಕೆಂಜಾರಿಗೆ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿದ್ದ 8 ಮಂದಿ ಸಿಬ್ಬಂದಿ ಸಹಿತ 166 ಮಂದಿಯ ಪೈಕಿ 158 ಮಂದಿ ಸುಟ್ಟುಕರಕಲಾಗಿದ್ದರು. ಲ್ಯಾಂಡ್ ಆಗುವ ಸಂದರ್ಭ ರನ್‌ವೇಯಿಂದ ಜಾರಿದ ವಿಮಾನವು ಪ್ರಯಾಣಿಕರ ಕಣ್ಣೆದುರೇ ಇಬ್ಭಾಗಗೊಂಡಿತ್ತು. ಈ ಪೈಕಿ 8 ಮಂದಿ ಜೀವದ ಹಂಗು ತೊರೆದು ನೆಲಕ್ಕೆ ಜಿಗಿದು ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು. ಆದರೆ ಫೈಲಟ್ ಮತ್ತು ಸಿಬ್ಬಂದಿ ಸಹಿತ ವಿಮಾನದಲ್ಲಿದ್ದ 158 ಮಂದಿ ಕೊನೆಯುಸಿರೆಳೆದಿದ್ದರು.

ಕೆಲವು ಮಹಿಳೆಯರು ಮತ್ತು ಮಕ್ಕಳಿಗೆ 30ರಿಂದ 40 ಲಕ್ಷ ರೂ.ವರೆಗೆ ಪರಿಹಾರ ಸಿಕ್ಕಿದೆ. ಈ ಪರಿಹಾರದ ಬಗ್ಗೆ ತೃಪ್ತಿ ಹೊಂದದ ಸಂತ್ರಸ್ಥ ಕುಟುಂಬಸ್ಥರು ಹೋರಾಟ ಮುಂದುವರಿಸಿದ್ದಾರೆ. ಅದರ ತೀರ್ಪು ಶೀಘ್ರ ಹೊರಬೀಳಬಹುದು.

ಮುಹಮ್ಮದ್ ಬ್ಯಾರಿ ಎಡಪದವು, 

ಅಧ್ಯಕ್ಷರು, ಮಂಗಳೂರು ವಿಮಾನ ದುರಂತ ಸಂತ್ರಸ್ತ ಕುಟುಂಬಗಳ ಸಮಿತಿ

ನಮ್ಮ ಹೋರಾಟವನ್ನು ನಿಲ್ಲಿಸಿಲ್ಲ. ಸಂತ್ರಸ್ತ ಕುಟುಂಬಸ್ಥರಿಗೆಲ್ಲಾ ನ್ಯಾಯೋಚಿತ ಪರಿಹಾರಕ್ಕಾಗಿ ಪ್ರಯತ್ನ ನಡೆಯುತ್ತಲೇ ಇದೆ. ಆರಂಭದಲ್ಲಿ ಸಂತ್ರಸ್ತ ಕುಟುಂಬದ ಸದಸ್ಯರೆಲ್ಲರೂ ಸಮಿತಿಯ ಸಭೆಯಲ್ಲಿ ಾಗವಹಿಸುತ್ತಿದ್ದರು. ಇದೀಗ ಕೆಲವರು ಸಮಿತಿಯೊಂದಿಗೆ ಸಂಪರ್ಕ ಬಿಟ್ಟಿದ್ದಾರೆ. ಸಮಿತಿಯ ಎಲ್ಲರೊಂದಿಗೂ ಸಂವಹನ ಸಾಧಿಸುವ ಅಗತ್ಯವಿದೆ. ಸುಪ್ರೀಂ ಕೋರ್ಟ್‌ನಲ್ಲಿ ಹೂಡಲಾದ ದಾವೆಯ ಬಗ್ಗೆ ಪರಸ್ಪರ ತಿಳಿದುಕೊಳ್ಳುವ ಅಗತ್ಯವಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮೇ 22ರಂದು ಎಲ್ಲಾ ಸಂತ್ರಸ್ತ ಕುಟುಂಬಸ್ಥರು ವಿಶೇಷವಾಗಿ ಪ್ರಾರ್ಥನೆ ಸಲ್ಲಿಸಬೇಕಿದೆ. ಹಾಗಾಗಿ ಎಲ್ಲರೂ ಅಬ್ದುರ್ರಹ್ಮಾನ್ ಜೆಪ್ಪು (ದುಬೈ) 00971505068260, ನಾರಾಯಣ ಕಲಿಂಗೋ 9562766669, ಎಡಪದವು ಮುಹಮ್ಮದ್ ಬ್ಯಾರಿ/ಅಬ್ದುಲ್ ರಝಾಕ್ 9448669444 ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.

 ಅಬ್ದುರ್ರಝಾಕ್ ಬಸ್ರೂರ್

ಕೋಶಾಧಿಕಾರಿ, ಮಂಗಳೂರು ವಿಮಾನ ದುರಂತ ಸಂತ್ರಸ್ತ ಕುಟುಂಬಗಳ ಸಮಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News