ರಾಹುಲ್ ನಿರ್ಧಾರ ವಿಪಕ್ಷಗಳನ್ನು ವಿಭಜಿಸಿತು: ಸಿಪಿಐ
Update: 2019-05-23 16:43 GMT
ಹೊಸದಿಲ್ಲಿ, ಮೇ 23: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತೆಗೆದುಕೊಂಡ ಕೆಲವು ನಿರ್ಧಾರಗಳು ವಿಪಕ್ಷಗಳಲ್ಲಿಯೇ ವಿಭಜನೆಗೆ ಕಾರಣವಾಯಿತಲ್ಲದೆ ನರೇಂದ್ರ ಮೋದಿಯ ಗೆಲುವಿಗೆ ದಾರಿ ಮಾಡಿಕೊಟ್ಟಿತು ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅತುಲ್ ಕುಮಾರ್ ಅಂಜಾನ್ ಹೇಳಿದ್ದಾರೆ.
ಸಾಮಾಜಿಕ ಮತ್ತು ಧಾರ್ಮಿಕ ವಿಭಜನೆಯ ನೀತಿಯ ಆಧಾರದಲ್ಲಿ ಬಿಜೆಪಿ ಚುನಾವಣೆ ಎದುರಿಸಿದೆ ಮತ್ತು ಈ ನೀತಿಗೆ ಅನುಗುಣವಾಗಿಯೇ ಅವರು ಅಜೆಂಡಾ ರೂಪಿಸಿದ್ದರು. ಆದರೆ ಇದಕ್ಕಿಂತ ಮಹತ್ವದ ಅಂಶವೆಂದರೆ, ರಾಹುಲ್ ಗಾಂಧಿಯವರ ನಿರ್ಧಾರ ಹಾಗೂ ಕಾರ್ಯನೀತಿ ವಿಪಕ್ಷಗಳ ಒಗ್ಗಟ್ಟನ್ನು ದುರ್ಬಲಗೊಳಿಸಿ ಮೋದಿಯ ಗೆಲುವಿಗೆ ದಾರಿ ಮಾಡಿಕೊಟ್ಟಿತು ಎಂದು ಅತುಲ್ ಕುಮಾರ್ ಹೇಳಿದ್ದಾರೆ. ದೇಶದ ಬಹುತೇಕ ಭಾಗಗಳಲ್ಲಿ ಮೋದಿ ಅಲೆಯ ಮೇಲೇರಿ ಮುಂದುವರಿದ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ.