ಸೋಲೊಪ್ಪಿದ ರಾಹುಲ್ ಗಾಂಧಿ: ಹಾಡು ಟ್ವೀಟ್ ಮಾಡಿದ ಸ್ಮೃತಿ ಇರಾನಿ

Update: 2019-05-23 16:48 GMT

ಹೊಸದಿಲ್ಲಿ, ಮೇ.23: ಸದ್ಯ ಎಲ್ಲರಿಂದಲೂ ಜೈಂಟ್ ಸ್ಲೇಯರ್ (ಬೃಹತ್ ಹಂತಕಿ) ಎಂದೇ ಕರೆಯಲ್ಪಡುತ್ತಿರುವ ಕೇಂದ್ರ ಸಚಿವೆ ಸ್ಮತಿ ಇರಾನಿ ಹಾಡೊಂದರ ಸಾಲನ್ನು ಟ್ವೀಟ್ ಮಾಡುವ ಮೂಲಕ ಚುನಾವಣಾ ಫಲಿತಾಂಶದ ಮಧ್ಯೆ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ ಸ್ಮೃತಿ ಇರಾನಿ ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕಣಕ್ಕಿಳಿದಿದ್ದರು. ಗುರುವಾರ ಈ ಕ್ಷೇತ್ರದಿಂದ ಅಚ್ಚರಿಯ ಫಲಿತಾಂಶ ಹೊರಬಿದ್ದಿದ್ದು ಇರಾನಿ ವಿರುದ್ಧ ರಾಹುಲ್ ಗಾಂಧಿ ಸೋಲನುಭವಿಸಿದ್ದರು.

ಇನ್ನೂ ಮತಗಳು ಎಣಿಕೆಗೆ ಬಾಕಿಯಿರುವಾಗಲೇ ರಾಹುಲ್ ತನ್ನ ಸೋಲನ್ನು ಒಪ್ಪಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಇರಾನಿ, ಕೌನ್ ಕೆಹತಾ ಹೆ ಆಸ್ಮಾನ್ ಮೆ ಸುರಾಖ್ ನಹೀ ಹೋ ಸಕ್ತಾ (ಯಾರು ಹೇಳಿದ್ದು ಆಕಾಶದಲ್ಲಿ ತೂತು ಬೀಳಲು ಸಾಧ್ಯವಿಲ್ಲವೆಂದು) ಎಂಬ ಸಾಲುಗಳನ್ನು ಟ್ವೀಟ್ ಮಾಡಿದ್ದಾರೆ.

ಈ ಸ್ಪೂರ್ತಿದಾಯಕ ಸಾಲುಗಳನ್ನು ಪ್ರಸಿದ್ಧ ಹಿಂದಿ ಕವಿ ದುಶ್ಯಂತ್ ಕುಮಾರ್ ಬರೆದ ಹಾಡಿನಿಂದ ಇರಾನಿ ತೆಗೆದುಕೊಂಡಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಇರಾನಿ, ರಾಹುಲ್ ಗಾಂಧಿ ವಿರುದ್ಧ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲನುಭವಿಸಿದ್ದರು. ಇದೀಗ ಎರಡನೇ ಅವಧಿಯಲ್ಲಿ ಫಲಿತಾಂಶ ತಲೆಕೆಳಗಾಗಿರುವುದನ್ನು ಉಲ್ಲೇಖಿಸಿರುವ ಕೇಂದ್ರ ಸಚಿವೆ, ಅಸಾಧ್ಯವಾದುದನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದವರು ಯಾರು ಎಂಬುದನ್ನು ಹಾಡಿನ ಸಾಲುಗಳ ಮೂಲಕ ಸೂಚ್ಯವಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News