ಚಂದ್ರಬಾಬು ನಾಯ್ಡುಗೆ ದೇವರೇ ಶಿಕ್ಷೆ ನೀಡಿದ್ದಾರೆ: ಜಗನ್ ಮೋಹನ್ ರೆಡ್ಡಿ

Update: 2019-05-25 14:58 GMT

ಅಮರಾವತಿ, ಮೇ.25: ಅನೈತಿಕ ಮತ್ತು ಅನ್ಯಾಯದ ದಾರಿ ಹಿಡಿಯುವವರನ್ನು ದೇವರೇ ಶಿಕ್ಷಿಸುತ್ತಾರೆ ಎನ್ನುವುದು ಇತ್ತೀಚೆಗೆ ಹೊರಬಿದ್ದ ರಾಜ್ಯ ವಿಧಾನಸಭಾ ಫಲಿತಾಂಶ ತೋರಿಸಿಕೊಟ್ಟಿದೆ ಎಂದು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕ ಜಗನ್ ಮೋಹನ್ ರೆಡ್ಡಿ ತಿಳಿಸಿದ್ದಾರೆ.

ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ಅವರ ಕುಕೃತ್ಯಗಳಿಗೆ ದೇವರೇ ಶಿಕ್ಷಿಸಿದ್ದಾನೆ ಎಂದು ರೆಡ್ಡಿ ಅಭಿಪ್ರಾಯಿಸಿದ್ದಾರೆ. 2014ರ ಚುನಾವಣೆಯ ನಂತರ ನಾಯ್ಡು ವೈಎಸ್‌ಆರ್‌ಸಿಪಿಯ 23 ಶಾಸಕರನ್ನು ಖರೀದಿಸಿದ್ದರು. ಈಗ ಟಿಡಿಪಿ ಕೇವಲ 23 ಸ್ಥಾನಗಳನ್ನು ಪಡೆದುಕೊಂಡಿದೆ ಮತ್ತು ಚುನಾವಣೆಯ ಫಲಿತಾಂಶವೂ ಮೇ.23ರಂದೇ ಘೋಷಣೆಯಾಗಿದೆ. ದೇವರು 23ರೊಂದಿಗೆ ಒಂದು ಸುಂದರ ಕತೆಯನ್ನು ರಚಿಸಿದ್ದಾನೆ ಎಂದು ರೆಡ್ಡಿ ನೂತನವಾಗಿ ಚುನಾಯಿತರಾದ ಶಾಸಕರನ್ನುದ್ದೇಶಿಸಿ ಮಾತನಾಡುವ ವೇಳೆ ತಿಳಿಸಿದ್ದಾರೆ.

ಚಂದ್ರಬಾಬು ನಾಯ್ಡು ವೈಎಸ್‌ಆರ್‌ಸಿಪಿಯ ಮೂವರು ಸಂಸದರನ್ನು ಅಕ್ರಮವಾಗಿ ತನ್ನ ಪಕ್ಷಕ್ಕೆ ಸೇರಿಸಿದ್ದರು. ಈಗ ಲೋಕಸಭೆಯಲ್ಲಿ ಅವರಿಗೆ ಕೇವಲ ಮೂರು ಸ್ಥಾನಗಳು ಲಭಿಸಿವೆ ಎಂದು ಜಗನ್ಮೋಹನ್ ರೆಡ್ಡಿ ವ್ಯಂಗ್ಯವಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News