ಪಾಯಲ್ ತಡ್ವಿ ಆತ್ಮಹತ್ಯೆ ಪ್ರಕರಣ: ಮುಂಬೈ ವೈದ್ಯೆಯ ಬಂಧನ
ಹೊಸದಿಲ್ಲಿ, ಮೇ.28: ಮುಂಬೈಯ ಬಿವೈಎಲ್ ನಾಯರ್ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದ ಪಾಯಲ್ ತಡ್ವಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ವೈದ್ಯೆ ಭಕ್ತಿ ಮೆಹೆರ್ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಬುಧವಾರ ಪಾಯಲ್ ಆತ್ಮಹತ್ಯೆ ಮಾಡಿದ ನಂತರ ಭಕ್ತಿ ಮೆಹೆರ್ ತಲೆಮರೆಸಿಕೊಂಡಿದ್ದರು. ಪಾಯಲ್ ಅವರನ್ನು ಜಾತಿ ನಿಂದನೆ ಮತ್ತು ರ್ಯಾಗಿಂಗ್ ಮಾಡುವ ಮೂಲಕ ಆಕೆಯ ಸಾವಿಗೆ ಕಾರಣರಾಗಿರುವ ಮೂವರು ಮಹಿಳಾ ವೈದ್ಯೆಯರ ವಿರುದ್ಧ ಅತ್ಯಂತ ಕಠಿಣ ಕ್ರಮ ಜರುಗಿಸುವಂತೆ ತಡ್ವಿಯವರ ಪತಿ ಸಲ್ಮಾನ್ ಮತ್ತು ತಾಯಿ ಅಬಿದಾ ಸಲೀಂ ಆಗ್ರಹಿಸಿದ್ದಾರೆ.
ತಡ್ವಿ ಪರಿಶಿಷ್ಟ ಪಂಗಡಕ್ಕೆ ಸೇರಿದವಳಾಗಿದ್ದ ಕಾರಣ ಆಕೆ ಜಾತಿ ನಿಂದನೆಗೆ ಒಳಗಾಗುತ್ತಿದ್ದಳು. ಈ ಬಗ್ಗೆ ಆಕೆ ನನ್ನ ಬಳಿ ತಿಳಿಸಿದ್ದಳು ಎಂದು ಅಬಿದಾ ಸಲೀಂ ತಿಳಿಸಿದ್ದಾರೆ. ಘಟನೆಯ ಬಗ್ಗೆ ವೈದ್ಯರ ಸಂಘಕ್ಕೆ ಪತ್ರ ಬರೆದಿರುವ ಆರೋಪಿ ವೈದ್ಯೆಯರು ಪ್ರಕರಣದ ನ್ಯಾಯಸಮ್ಮತ ತನಿಖೆ ನಡೆಸಬೇಕು ಮತ್ತು ನಮಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.