ಅಸ್ತಾನ ಲಂಚ ಪ್ರಕರಣ: ತನಿಖೆ ಪೂರ್ಣಗೊಳಿಸಲು ಸಿಬಿಐಗೆ 4 ತಿಂಗಳ ಹೆಚ್ಚುವರಿ ಕಾಲಾವಕಾಶ
Update: 2019-05-31 15:54 GMT
ಹೊಸದಿಲ್ಲಿ, ಮೇ 31: ಸಿಬಿಐ ಮಾಜಿ ನಿರ್ದೇಶಕ ರಾಕೇಶ್ ಅಸ್ತಾನ ಭಾಗಿಯಾಗಿರುವ ಲಂಚ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ದಿಲ್ಲಿ ಉಚ್ಚ ನ್ಯಾಯಾಲಯ ಸಿಬಿಐಗೆ ಶುಕ್ರವಾರ ಮತ್ತೆ ನಾಲ್ಕು ತಿಂಗಳ ಕಾಲಾವಕಾಶ ನೀಡಿದೆ.
ಅಸ್ತಾನ, ಡಿಎಸ್ಪಿ ದೇವೇಂದರ್ ಕುಮಾರ್ ಹಾಗೂ ಮಧ್ಯವರ್ತಿ ಮನೋಜ್ ಪ್ರಸಾದ್ ವಿರುದ್ಧ ದಾಖಲಿಸಲಾಗಿರುವ ಪ್ರಕರಣದ ತನಿಖೆ ಪೂರ್ಣಗೊಳಿಸಲು ಸಮಯ ವಿಸ್ತರಿಸುವಂತೆ ಕೋರಿ ಸಲ್ಲಿಸಿದ ಸಿಬಿಐ ಮನವಿಗೆ ನ್ಯಾಯಮೂರ್ತಿ ಮುಖ್ತಾ ಗುಪ್ತಾ ಅನುಮತಿ ನೀಡಿದೆ. ಈ ಹಿಂದೆ ಜನವರಿ 11ರಂದು ನ್ಯಾಯಾಲಯ ತನಿಖೆ ಪೂರ್ಣಗೊಳಿಸಲು ಸಿಬಿಐಗೆ 10 ವಾರಗಳ ಕಾಲಾವಕಾಶ ನೀಡಿತ್ತು.
10 ವಾರಗಳ ಕಾಲಾವಧಿ ಮುಗಿದ ಬಳಿಕ ಸಿಬಿಐ ನ್ಯಾಯಾಲಯವನ್ನು ಸಂಪರ್ಕಿಸಿತ್ತು. ಲಂಚ ತಡೆ ಕಾಯ್ದೆಯ ವಿವಿಧ ಕಲಮುಗಳ ಅಡಿಯಲ್ಲಿ ಕ್ರಿಮಿನಲ್ ಸಂಚು, ಭ್ರಷ್ಟಾಚಾರ ಹಾಗೂ ಕ್ರಿಮಿನಲ್ ದುರ್ನಡತೆ ಪ್ರಕರಣಗಳನ್ನು ಅಸ್ತಾನ ವಿರುದ್ಧ ದಾಖಲಿಸಲಾಗಿದೆ.