ಕರ್ವೇಲ್: ಮನೆಯ ಮೇಲೆ ಮರದ ಗೆಲ್ಲು ಬಿದ್ದು ಅಪಾರ ಹಾನಿ

Update: 2019-06-03 05:06 GMT

ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕರ್ವೇಲ್ ಎಂಬಲ್ಲಿ ಮನೆಯ ಮೇಲೆ ಮರದ ಗೆಲ್ಲೊಂದು ಬಿದ್ದು ಹಾನಿ ಸಂಭವಿಸಿದ್ದು, ಮೂವರು ಮಕ್ಕಳು ಅಲ್ಪಸ್ವಲ್ಪ ಗಾಯವಾಗಿ ಅಪಾಯದಿಂದ ಪಾರಾದ ಘಟನೆ ಸೋಮವಾರ ಮುಂಜಾನೆ ನಡೆದಿದೆ.

ಇಲ್ಲಿನ ಮುಹಮ್ಮದ್ ಕುಂಞಿ ಅವರ ಮನೆಯ ಮೇಲೆ ಗಾಳಿ ಮಳೆಗೆ ಮನೆ ಸಮೀಪದ ಮಾವಿನ ಮರದ ಗೆಲ್ಲೊಂದು ನಸುಕಿನ ಜಾವ 2:30 ರ ಸುಮಾರಿಗೆ ಮುರಿದು ಬಿತ್ತು. ಇದರಿಂದ ಹಂಚುಗಳು ತುಂಡಾಗಿ ಬಿದ್ದಿದ್ದು, ಕೋಣೆಯೊಂದರಲ್ಲಿ ಮಲಗಿದ್ದ ಮಕ್ಕಳಾದ ಅಝ್ಮಲ್ (10), ರಿಷಾನ್ (8), ಅಝ್ಮೀಯಾ (18) ಅವರ ಮೇಲೆ ಹಂಚು ಬಿದ್ದು, ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. 

ಗ್ರಾ.ಪಂ. ಸದಸ್ಯೆ ಭೇಟಿ: ಸುದ್ದಿ ತಿಳಿದು 34 ನೆಕ್ಕಿಲಾಡಿ ಗ್ರಾ.ಪಂ. ಸದಸ್ಯೆ ಅನಿ ಮಿನೇಜಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ತಕ್ಷಣವೇ ಗ್ರಾಮ ಕರಣಿಕ ರಮಾನಂದ ಚಕ್ಕಡಿ ಅವರಿಗೆ ದೂರವಾಣಿ ಕರೆ ಮಾಡಿ, ಸ್ಥಳಕ್ಕೆ ಬಂದು ಪರಿಶೀಲಿಸಿ  ಪರಿಹಾರಕ್ಕೆ ಕಂದಾಯ ಇಲಾಖೆಗೆ ವರದಿ ಮಾಡಲು ಸೂಚಿಸಿದರು. 

ಈ ಸಂದರ್ಭದಲ್ಲಿ "ನಮ್ಮೂರು- ನೆಕ್ಕಿಲಾಡಿ" ಅಧ್ಯಕ್ಷ ಅಬ್ದುರ್ರಹ್ಮಾನ್ ಯುನಿಕ್, ಸ್ಥಳೀಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News