ನೂತನ ಸರಕಾರವು ಪ್ರಸಾರ ಭಾರತಿಯ ಸ್ವಾಯತ್ತತೆಯನ್ನು ಉಳಿಸಿಕೊಳ್ಳಲಿದೆ: ಜಾವಡೇಕರ್
Update: 2019-06-04 15:57 GMT
ಹೊಸದಿಲ್ಲಿ,ಜೂ.4: ಕೇಂದ್ರದ ನೂತನ ಸರಕಾರವು ಪ್ರಸಾರ ಭಾರತಿಯ ಸ್ವಾಯತ್ತತೆಯನ್ನು ಉಳಿಸಿಕೊಳ್ಳಲಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ ಜಾವಡೇಕರ್ ಅವರು ಹೇಳಿದ್ದಾರೆ.
ದಿಲ್ಲಿಯ ದೂರದರ್ಶನ ಭವನದಲ್ಲಿ ಅತ್ಯಾಧುನಿಕ ಹೈ ಡೆಫಿನಿಷನ್ ಡಿಎಸ್ಎನ್ಜಿ ವ್ಯಾನ್ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು,ಪ್ರಸಾರ ಭಾರತಿಯ ಸ್ವಾಯತ್ತತೆಯನ್ನು ಕಾಯಿದೆಯ ಮೂಲಕ ಸುರಕ್ಷಿತಗೊಳಿಸಲಾಗಿದೆ ಎಂದು ತಿಳಿಸಿದರು.
ಪ್ರಸಾರ ಭಾರತಿಯ ಸ್ವಾಯತ್ತತೆ ಮುಖ್ಯವಾಗಿದೆ. ನಾವದನ್ನು ಉಳಿಸಿಕೊಳ್ಳುತ್ತೇವೆ. ಪ್ರಸಾರ ಭಾರತಿ ಸುಲಲಿತವಾಗಿ ಕಾರ್ಯ ನಿರ್ವಹಿಸಬೇಕು ಮತ್ತು ಹೊಸ ಕಾರ್ಯಕ್ರಮಗಳನ್ನು ತರುವ ಜೊತೆಗೆ ಹೊಸ ಆಯಾಮವನ್ನು ಕಂಡುಕೊಳ್ಳಬೇಕು ಎಂದು ನಾವು ಬಯಸಿದ್ದೇವೆ ಎಂದು ಅವರು ಹೇಳಿದರು.
ತಮ್ಮ ವಿಶ್ವಾಸಾರ್ಹ ಕಾರ್ಯಕ್ರಮಗಳಿಗಾಗಿ ದೂರದರ್ಶನ ಮತ್ತು ಆಕಾಶವಾಣಿಗಳನ್ನು ಪ್ರಶಂಸಿಸಿದ ಅವರು,ಡಿಡಿ ಭಾರತಿಯಂತಹ ವಾಹಿನಿಗಳನ್ನು ಉತ್ತೇಜಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.