ದ. ಕ.: ಸಂಭ್ರಮದ ಈದುಲ್ ಫಿತ್ರ್ ಆಚರಣೆ

Update: 2019-06-05 11:00 GMT

ಮಂಗಳೂರು, ಜೂ. ೫: ರಮ್ಜಾನ್ ತಿಂಗಳ ಉಪವಾಸದ ಬಳಿಕ ಶವ್ವಾಲ್ ತಿಂಗಳ ಆರಂಭದ ದಿನ ಈದುಲ್ ಫಿತ್ರ್ ಹಬ್ಬವನ್ನು ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಭ್ರಮ, ಸಡಗರದಿಂದ ಬುಧವಾರ ಆಚರಿಸಲಾಗುತ್ತಿದೆ. ಮಂಗಳೂರು ಬಾವುಟಗುಡ್ಡ ಈದ್ಗಾ ಮಸೀದಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ಬೆಳಗ್ಗೆ ನಮಾಝ್, ಪ್ರವಚನ ಮತ್ತು ಸಂದೇಶ ನಡೆಯಿತು.

ಪವಿತ್ರ ರಮ್ಜಾನ್ ತಿಂಗಳ 30  ಉಪವಾಸ ವ್ರತ, ದಾನ ಧರ್ಮಗಳನ್ನು ಮಾಡುತ್ತಾ, ಯಾವುದೇ ಕೆಡುಕಿಗೆ ಆಸ್ಪದ ನೀಡದ ಮುಸ್ಲಿಮರು, ಸಾಕಷ್ಟು ಒಳಿತಿನ, ಪುಣ್ಯದ  ಕಾರ್ಯಗಳನ್ನು ಮಾಡಿದ್ದಾರೆ. ಅದರ ಸಂತೋಷದಲ್ಲಿ ಈದುಲ್ ಫಿತ್ರ್ ಆಚರಿಸುತ್ತಿದ್ದಾರೆ ಎಂದು ಖಾಝಿ ಹೇಳಿದರು. ಮಾನಸಿಕ ಮಾಲಿನ್ಯದ ಶುದ್ಧಿಯ ಬಳಿಕ ದೈಹಿಕವಾಗಿ ಶುದ್ಧಿಗೊಂಡು, ಹೊಸ ಬಟ್ಟೆಗಳನ್ನು ಧರಿಸಿಕೊಂಡು, ಸುಗಂಧ ಹರಡಿಕೊಂಡು, ಲಘು ಸಿಹಿ ತಿಂಡಿ ಸೇವಿಸಿ, ಮಸೀದಿಗೆ ತೆರಳಿ ವಿಶೇಷ ಪ್ರಾರ್ಥನೆ, ಪ್ರವಚನದಲ್ಲಿ ಭಾಗವಹಿಸುವುದು ಹಬ್ಬದ ದಿನಚರಿ. ತಮ್ಮ ಸಂತೋಷದ ಜತೆ ಬಡವರಿಗೆ ದಾನ, ಧರ್ಮದ ಮೂಲಕ ಹಬ್ಬ ಆಚರಿಸುವಂತೆ  ಮಾಡುವುದು ಹಬ್ಬದ ವೈಶಿಷ್ಟ್ಯ ಎಂದರು.

ಈದುಲ್ ಫಿತ್ರ್ ಹಬ್ಬವು ಕುಟುಂಬ, ಸಮಾಜ, ದೇಶ ಮತ್ತು ಜಾಗತಿಕ ಮಟ್ಟದಲ್ಲಿ ಮನುಷ್ಯ- ಮನುಷ್ಯನ ನಡುವಿನ ಸಂಬಂಧ ವೃದ್ಧಿಗೆ ಪ್ರೇರಣೆ ನೀಡಲಿ. ಹಳಸಿದ ಸಂಬಂಧಗಳು ಮರು ಜೋಡಣೆಯಾಗಲಿ. ‘ಕೆಡುಕನ್ನು ಒಳಿತಿನ ಮೂಲಕ ಎದುರಿಸಿ’ ಎಂಬ ಕುರ್‌ಆನ್ ಸಂದೇಶ ಹಾಗೂ ಪರಸ್ಪರ ಪ್ರೀತಿ, ವಿಶ್ವಾಸದ ಮೂಲಕ ಜಗತ್ತನ್ನು ಗೆದ್ದಿರುವ ಪ್ರ ವಾದಿ ಬೋಧನೆ ನಮಗೆಲ್ಲಾ ಮಾರ್ಗದಶಿಯಾಗಲಿ ಎಂದು ಅವರು ಹೇಳಿದರು.

ಶಾಹ ಅಮೀರ್ ಅಲಿ ಮಸೀದಿಯ ಇಮಾಮ್ ಮೌಲಾನ ರಿಯಾಝುಲ್ ಹಖ್ ಈದ್ ನಮಾಝ್ ಬಗ್ಗೆ ಮಾಹಿತಿ ನೀಡಿದರು.

ಸೌಹಾರ್ದ ಸಭೆ: ಈದ್ ನಮಾಝ್ ಬಳಿಕ ಮಸೀದಿ ಆವರಣದಲ್ಲಿ ಸರ್ವಧರ್ಮೀಯ ಗಣ್ಯರ ಸಮ್ಮುಖದಲ್ಲಿ ಸೌಹಾರ್ದ ಸಭೆ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜ, ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಮಸ್ಜಿದ್ ಝೀನತ್ ಬಕ್ಷ್ ಅಧ್ಯಕ್ಷ ವೈ.ಅಬ್ದುಲ್ಲ ಕುಂಞಿ ಹಬ್ಬದ ಸಂದೇಶ ನೀಡಿದರು. ಮಾಜಿ ಶಾಸಕ ಜೆ.ಆರ್.ಲೋಬೊ, ಸಂತ ಅಲೋಶಿಯಸ್ ಕಾಲೇಜು ಪ್ರಿನ್ಸಿಪಾಲ್ ಫಾದರ್ ಪ್ರವೀಣ್ ಮಾರ್ಟಿಸ್, ಮಂಗಳೂರು ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್, ಡಿಸಿಪಿ ಹನುಮಂತರಾಯ ಮತ್ತಿತರರು ಉಪಸ್ಥಿತರಿದ್ದರು.

ಮಂಗಳೂರಿನ ವಿವಿಧ ಮಸೀದಿಗಳಲ್ಲಿ ವಿಶೇಷ ನಮಾಝ್, ಪ್ರವಚನ ಬಳಿಕ ಪರಸ್ಪರ ಹಸ್ತಲಾಘವ, ಆಲಿಂಗನ ಮೂಲಕ ಹಬ್ಬದ ಶುಭಾಶಯ ವಿನಿಮಯ ಹಾಗೂ ಮನೆಗಳಲ್ಲಿ ಹಬ್ಬದ ಸಂಭ್ರಮ ನಡೆಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News