ಕೆಡುಕನ್ನು ಒಳಿತಿನ ಮೂಲಕ ಎದುರಿಸಿ ಮನುಷ್ಯಸ್ನೇಹಿಯಾಗಬೇಕು:ಅಬ್ದುಲ್ ಖಾದರ್ ಮೌಲವಿ
ಮಂಜೇಶ್ವರ, ಜೂ.5: ಈದುಲ್ ಫಿತ್ರ್ ಹಬ್ಬವು ಶಾಂತಿ ಸೌಹಾರ್ದತೆಯನ್ನು ಲೋಕಕ್ಕೆ ಸಾರುತ್ತದೆ. ಕೆಡುಕನ್ನು ಒಳಿತಿನ ಮೂಲಕ ಎದುರಿಸಿ ಮನುಷ್ಯ ಸ್ನೇಹಿಯಾಗಿ ಇತರ ಧರ್ಮದವರನ್ನು ನೋಯಿಸದೆ ಅವರನ್ನೂ ತಮ್ಮ ಸಹೋದರರಂತೆ ಕಾಣಲು ಪ್ರೇರೇಪಿಸಿದ ಧರ್ಮವಾಗಿದೆ ಇಸ್ಲಾಂ ಧರ್ಮ. ಮನುಷ್ಯ ಮನುಷ್ಯರೊಳಗಿನ ಸಂಬಂಧ ಉತ್ತಮವಾಗಬೇಕಿದೆ. ಹಳಸಿದ ಸಂಬಂಧಗಳು ಮರು ಜೋಡನೆಯಾಗಬೇಕಿದೆ ಎಂಬ ಖುರಾನ್ ಸಂದೇಶ ನಮಗೆಲ್ಲಾ ಸ್ಪೂರ್ತಿಯಾಗಲಿ ಎಂಬುದಾಗಿ ಹಿರಿಯ ವಿದ್ವಾಂಸ ಅಬ್ದುಲ್ ಖಾದರ್ ಮೌಲವಿ ಹೇಳಿದರು.
ಅವರು ಕುಂಜತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮಸ್ಜಿದುನ್ನೂರು ಜುಮಾ ಮಸೀದಿಯಲ್ಲಿ ಪೆರ್ನಾಲ್ ನಮಾಝ್ ನ ಬಳಿಕ ಖುತುಬಾ ಪ್ರವಚನ ಹಾಗೂ ಸಂದೇಶವನ್ನು ನೀಡಿ ಮಾತನಾಡುತಿದ್ದರು.
ಪವಿತ್ರವಾದ ರಂಜಾನ್ ಉಪವಾಸದ ಬಳಿಕ ಶವ್ವಾಲ್ ತಿಂಗಳ ಆರಂಭದ ದಿನ ಈದುಲ್ ಫಿತ್ರ್ ಹಬ್ಬವನ್ನು ಮಂಜೇಶ್ವರಾದ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತಿದೆ.
ಕುಂಜತ್ತೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮಸ್ಜಿದುನ್ನೂರು ಜುಮಾ ಮಸೀದಿಯಲ್ಲಿ ನಡೆದ ನಮಾಜಿಗೂ ಅಬ್ದುಲ್ ಖಾದರ್ ಮೌಲವಿಯವರು ನೇತೃತ್ವ ನೀಡಿದರು. ಈ ಮಸೀದಿಯಲ್ಲಿ ಸಹಸ್ರಾರು ಮಹಿಳೆಯರು ಹಾಗೂ ಪುರುಷರು ಮಕ್ಕಳು ಪ್ರಾರ್ಥನೆಯಲ್ಲಿ ಪಾಲ್ಗೊಂಡಿರುವುದು ವಿಶೇಷತೆಯಾಗಿತ್ತು.
ಅದೇ ರೀತಿ ಉದ್ಯಾವರ ಸಾವಿರ ಜಮಾಹತ್, ಕುಂಜತ್ತೂರು ಜಮಾಹತ್, ಪೊಸೋಟು ಜಮಾಹತ್, ಪಾಂಡ್ಯಾಲ್ ಜಮಾಹತ್, ಹೊಸಂಗಡಿ, ಕಡಂಬಾರ್, ಆನೆಕಲ್ಲು, ತೂಮಿನಾಡು, ಅಲ್ ಫತಾಃ ಜುಮಾ ಮಸೀದಿ ಗಳಲ್ಲಿ ಪೆರ್ನಾಲ್ ನಮಾಜ್ ಹಾಗೂ ಪ್ರವಚನ ಹಾಗೂ ಸಂದೇಶ ನಡೆಯಿತು.