ಅತ್ಯಾಚಾರ ಆರೋಪಿ ಶಾಸಕನನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ ಸಂಸದ ಸಾಕ್ಷಿ ಮಹಾರಾಜ್!

Update: 2019-06-05 15:55 GMT

ಸೀತಾಪುರ್, ಜೂ.5: ತನ್ನ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಬುಧವಾರ ತನ್ನ ಪಕ್ಷದ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ರನ್ನು ಜೈಲಿನಲ್ಲಿ ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

 ಕುಲದೀಪ 16ರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ಇತ್ತೀಚೆಗೆ ಕೊನೆಗೊಂಡ ಲೋಕಸಭಾ ಚುನಾವಣೆಯಲ್ಲಿ ಉನ್ನಾವೊ ಕ್ಷೇತ್ರದಿಂದ ತಾನು ಭಾರೀ ಅಂತರದಿಂದ ಜಯ ಸಾಧಿಸಿರುವುದಕ್ಕೆ ಕುಲದೀಪ್‌ಗೆ ಮಹಾರಾಜ್ ಕೃತಜ್ಞತೆ ಸಲ್ಲಿಸಿದರು.

‘‘ಕುಲದೀಪ ದೀರ್ಘ ಸಮಯದಿಂದ ಜೈಲಿನಲ್ಲಿದ್ದು, ಆತನನ್ನು ಭೇಟಿಯಾಗಲು ಬಂದಿದ್ದೇನೆ. ಚುನಾವಣೆಯಲ್ಲಿ ತನಗೆ ಪರೋಕ್ಷವಾಗಿ ಬೆಂಬಲಿಸಿದ್ದಕ್ಕೆ ಆತನಿಗೆ ಕೃತಜ್ಞತೆ ಸಲ್ಲಿಸಿದ್ದೇನೆ’’ ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ.

ಉನ್ನಾವೊ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬಂಗಾರ್‌ವೌ ವಿಧಾನಸಭಾ ಕ್ಷೇತ್ರದ ಶಾಸಕನಾಗಿರುವ ಕುಲದೀಪ ಸಿಂಗ್ ತನ್ನ ಬಳಿ ಕೆಲಸ ಕೇಳಿ ಬಂದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಸೀತಾಪುರ ಜೈಲಿನಲ್ಲಿದ್ದಾನೆ. ಕುಲದೀಪ್ ವಿರುದ್ಧ ಅತ್ಯಾಚಾರ ಆರೋಪದ ಕುರಿತು ಯಾರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಅತ್ಯಾಚಾರ ಸಂತ್ರಸ್ತೆ ಬಾಲಕಿ ಮುಖ್ಯಮಂತ್ರಿ ಆದಿತ್ಯನಾಥ್‌ರ ಲಕ್ನೋದಲ್ಲಿರುವ ಅಧಿಕೃತ ಬಂಗ್ಲೆ ಮುಂದೆ ಆತ್ಮಹತ್ಯೆಗೆ ಯತ್ನಿಸಿತ್ತು.

 ಕುಲದೀಪ್ ಬೆಂಬಲಿಗರ ತೀವ್ರ ಹಲ್ಲೆಗೆ ಬಾಲಕಿಯ ತಂದೆ ಗಂಭೀರ ಸ್ವರೂಪದ ಗಾಯಕ್ಕೀಡಾಗಿದ್ದರು. ಶಸ್ತ್ರಾಸ್ತ್ರ ಕಾಯ್ದೆ ಅಡಿ ಜೈಲು ಪಾಲಾದ ಬಾಲಕಿಯ ತಂದೆ ಎ.8 ರಂದು ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದರು. ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದ ಬಳಿಕ ಸಿಬಿಐ ಕುಲದೀಪ್‌ನನ್ನ ತನ್ನ ವಶಕ್ಕೆ  ಪಡೆದಿತ್ತು. ರಾಜ್ಯ ಸರಕಾರ ಕುಲದೀಪನನ್ನು ರಕ್ಷಿಸಲು ಯತ್ನಿಸುತ್ತಿದೆ ಎಂಬ ಆರೋಪವೂ ಕೇಳಿಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News