ಆದಿತ್ಯನಾಥ್‌ರನ್ನು ಟೀಕಿಸಿದ ದಿಲ್ಲಿಯ ಪತ್ರಕರ್ತ ಪೊಲೀಸ್ ವಶಕ್ಕೆ

Update: 2019-06-08 16:59 GMT

ಹೊಸದಿಲ್ಲಿ, ಜೂ.8: ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಟೀಕೆ ಮಾಡಿದ್ದ ದಿಲ್ಲಿಯ ಪತ್ರಕರ್ತನನ್ನು ಉತ್ತರಪ್ರದೇಶ ಪೊಲೀಸರು ವಶಕ್ಕೆ ಪಡೆದು ಲಕ್ನೋಗೆ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ.

  ಪ್ರಶಾಂತ್ ಕನೋಜಿಯಾ ಎಂಬ ಪತ್ರಕರ್ತ ಶೇರ್ ಮಾಡಿರುವ ಟ್ವೀಟ್‌ನ ಹಿನ್ನೆಲೆಯಲ್ಲಿ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದಿತ್ಯನಾಥ್ ಅವರ ಕಚೇರಿಯ ಹೊರಗೆ ವರದಿಗಾರರೊಂದಿಗೆ ಮಾತನಾಡುತ್ತಿದ್ದ ಮಹಿಳೆಯೊಬ್ಬಳು ತಾನು ಆದಿತ್ಯನಾಥ್‌ರೊಂದಿಗೆ ವೀಡಿಯೊ ಚಾಟ್ ಮಾಡಿದ್ದು ಅವರಿಗೆ ಮದುವೆಯ ಪ್ರಸ್ತಾಪ ಮಾಡಿರುವುದಾಗಿ ಹೇಳಿರುವುದನ್ನು ಕನೋಜಿಯಾ ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಮುಖ್ಯಮಂತ್ರಿಗಳ ಘನತೆಗೆ ಕುಂದು ತರುವ ರೀತಿಯ ಟೀಕೆ ಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಪೊಲೀಸ್ ಸಮವಸ್ತ್ರ ಧರಿಸಿರದ ಕೆಲವು ವ್ಯಕ್ತಿಗಳು ತಮ್ಮನ್ನು ಪೊಲೀಸರು ಎಂದು ಪರಿಚಯಿಸಿಕೊಂಡಿದ್ದು ತನ್ನ ಪತಿಯನ್ನು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ ಎಂದು ಕನೋಜಿಯಾರ ಪತ್ನಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಅವರು ಅರೆಸ್ಟ್ ವಾರಂಟ್ ಅನ್ನೂ  ತೋರಿಸಿಲ್ಲ ಎಂದವರು ಹೇಳಿದ್ದಾರೆ.

ಕನೋಜಿಯಾರನ್ನು ಬಂಧಿಸಿಲ್ಲ. ಅವರನ್ನು ಈಗ ಪ್ರಶ್ನಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News