49 ಪುಲ್ವಾಮ ಹುತಾತ್ಮರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ನೀಡಿದ ಬಾಲಿವುಡ್ ಸೂಪರ್ ಸ್ಟಾರ್

Update: 2019-06-13 17:16 GMT

ಮುಂಬೈ,ಜೂ.13: ಬಿಹಾರದ ಎರಡು ಸಾವಿರಕ್ಕೂ ಅಧಿಕ ರೈತರ ಸಾಲಗಳನ್ನು ತೀರಿಸಿದ ಮರುದಿನ ಮತ್ತೊಮ್ಮೆ ತಮ್ಮ ಹೃದಯ ವೈಶಾಲ್ಯತೆ ಪ್ರದರ್ಶಿಸಿದ ನಟ ಅಮಿತಾಬ್ ಬಚ್ಚನ್, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ 49 ಸಿಆರ್‌ಪಿಎಫ್ ಯೋಧರ ಕುಟುಂಬಗಳಿಗೆ ಗುರುವಾರ ತಲಾ 5 ಲಕ್ಷ ರೂ. ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅಮಿತಾಬ್ ಬಚ್ಚನ್, “ಇನ್ನೊಂದು ಭರವಸೆಯನ್ನು ಈಡೇರಿಸಿದ್ದೇನೆ. ಹುತಾತ್ಮರ ಕುಟುಂಬಗಳಿಗೆ ಧನ ಸಹಾಯ ನೀಡಬೇಕು ಎಂದು ಯೋಚಿಸಿದ್ದೆ. ಅದನ್ನೀಗ ಹಿರಿಯ ಸಿಆರ್‌ಪಿಎಫ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮಾಡಿದ್ದೇನೆ. ಘಟನೆಯಲ್ಲಿ ಮೃತಪಟ್ಟ ಯೋಧರ ಹೆಸರುಗಳು ಮತ್ತು ವಿಳಾಸಗಳನ್ನು ಪಡೆಯುವಲ್ಲಿ ಸ್ವಲ್ಪ ಸಮಯ ಹಿಡಿಯಿತು. ಆದರೆ ನಮ್ಮ ಪ್ರಯತ್ನಕ್ಕೆ ಫಲ ಸಿಕ್ಕಿದೆ” ಎಂದು ತಿಳಿಸಿದ್ದಾರೆ.

ಹುತಾತ್ಮರ ಕುಟುಂಬಗಳಿಗೆ ಧನ ಸಹಾಯ ಹಸ್ತಾಂತರಿಸುವ ವೇಳೆ ಪುತ್ರ ಅಭಿಷೇಕ್ ಬಚ್ಚನ್ ಮತ್ತು ಪುತ್ರಿ ಶ್ವೇತಾ ಅವರು ಅಮಿತಾಬ್ ಜೊತೆಗಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಫೆಬ್ರವರಿ 14ರಂದು ಪುಲ್ವಾಮದಲ್ಲಿ ಯೋಧರು ಪ್ರಯಾಣಿಸುತ್ತಿದ್ದ ವಾಹನಕ್ಕೆ ಉಗ್ರನೊಬ್ಬ ಸ್ಫೋಟಕ ತುಂಬಿದ್ದ ತನ್ನ ವಾಹನವನ್ನು ಢಿಕ್ಕಿ ಹೊಡೆಸುವ ಮೂಲಕ ನಡೆಸಿದ ಸ್ಫೋಟದಲ್ಲಿ 49 ಸಿಆರ್‌ಪಿಎಫ್ ಯೋಧರು ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News