​ದಲಿತ ಮಹಿಳೆ ಅತ್ಯಾಚಾರ: ಆರೋಪಿ ಸೆರೆ

Update: 2019-06-15 16:11 GMT

ಮಂಗಳೂರು, ಜೂ.15: ಪರಿಶಿಷ್ಟ ಜಾತಿಗೆ ಸೇರಿದ ಯುವತಿಯೊಬ್ಬಳನ್ನು ಅತ್ಯಾಚಾರವೆಸಗಿದ ಪ್ರಕರಣ ನಗರದ ಸುಭಾಸ್ ನಗರದಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಪಾಂಡೇಶ್ವರ ಸುಭಾಷ್‌ನಗರ ನಿವಾಸಿ ರವಿ ಉಚ್ಚಿಲ್ (40) ಪ್ರಕರಣದ ಆರೋಪಿ. ಈತ ಗ್ಯಾಸ್ ಏಜೆನ್ಸಿಯೊಂದರಲ್ಲಿ ಕೆಲಸಕ್ಕಿದ್ದ.

ಪ್ರಕರಣ ವಿವರ: ಯುವತಿಯು ಆರೋಪಿ ರವಿ ಉಚ್ಚಿಲ್‌ನ ಮನೆಯಲ್ಲಿ ಕಳೆದ ಏಳು ವರ್ಷಗಳಿಂದ ಮನೆಕೆಲಸ ಮಾಡಿಕೊಂಡಿದ್ದಳು. ಈಕೆಯನ್ನು ರವಿ ಉಚ್ಚಿಲ್ ಲೈಂಗಿಕಕ್ರಿಯೆಗೆ ಬಳಸಿಕೊಳ್ಳುತ್ತಿದ್ದುದಲ್ಲದೆ, ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದ ಎಂದು ತಿಳಿದು ಬಂದಿದೆ.
ಅಲ್ಲದೆ, ಯುವತಿಗೆ ನಿದ್ರೆ ಮಾತ್ರೆ ನೀಡಿ ಲೈಂಗಿಕ ಕ್ರಿಯೆ ನಡೆಸಿದ್ದು, ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವ ಬೆದರಿಕೆ ಒಡ್ಡಿದ್ದಾನೆಂದು ತಿಳಿದುಬಂದಿದೆ. ಸಂತ್ರಸ್ತೆ ಇತ್ತೀಚೆಗೆ ಗರ್ಭಿಣಿ ಕೂಡ ಆಗಿದ್ದು, ವೈದ್ಯರೊಬ್ಬರ ಬಳಿ ಗರ್ಭಪಾತ ಮಾಡಿಸಿದ್ದಾನೆಂದು ತಿಳಿದು ಬಂದಿದೆ.

ಈ ಕೃತ್ಯದ ಬಗ್ಗೆ ಯುವತಿ ತನ್ನ ಮನೆಯವರಿಗೆ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News