‘ಕನ್ನಡ ಕಣ್ಮಣಿ’ ಟ್ರೋಫಿ ಗೆದ್ದ ಉಡುಪಿಯ ಬಹುಮುಖ ಪ್ರತಿಭೆ ಸಂಹಿತಾ

Update: 2019-06-15 16:42 GMT

ಉಡುಪಿ, ಜೂ.16: ಝಿ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಕನ್ನಡ ಕಣ್ಮಣಿ ಕಾರ್ಯಕ್ರಮದ ಅಂತಿಮ ಸುತ್ತಿನಲ್ಲಿ ಬಹುಮುಖ ಪ್ರತಿಭೆ ಉಡುಪಿಯ ಸಂಹಿತಾ ಜಿ.ಪಿ. ‘ಕನ್ನಡ ಕಣ್ಮಣಿ’ ಕಿರಿೀಟ ಧರಿಸಿ ಪ್ರಥಮ ಸ್ಥಾನಿಯಾಗಿದ್ದಾಳೆ.

ಜೂ.14ರಂದು ನಡೆದ ಅಂತಿಮ ಸ್ಪರ್ಧೆಯಲ್ಲಿ ವಿಜಯಿಯಾದ ಸಂಹಿತಾ 2 ಲಕ್ಷ ನಗದು ಬಹುಮಾನದೊಂದಿಗೆ ಕನ್ನಡ ಕಣ್ಮಣಿ ಟ್ರೋಪಿ ಗೆದ್ದುಕೊಂಡಿ ದ್ದಾಳೆ. ಈಕೆ ಮಣಿಪಾಲದ ಮಾಧವ ಕೃಪಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದು, ಪರ್ಕಳ ನಿವಾಸಿ ಅದಮಾರು ಪೂರ್ಣಪ್ರಜ್ಞ ಕಾಲೇಜಿನ ಶಿಕ್ಷಕ ಜಿ.ಪಿ. ಪ್ರಭಾಕರ ತುಮರಿ ಹಾಗೂ ಮಣಿಪಾಲ ವಿವಿಯ ಉದ್ಯೋಗಿ ಕಲ್ಪನಾ ಪಿ. ದಂಪತಿಯ ಪುತ್ರಿಯಾಗಿದ್ದಾಳೆ.

ಎಳೆಯ ಪ್ರಾಯದಲ್ಲೇ ಸಾಹಿತ್ಯ ಸಂಗೀತ ಕಲೆಗಳಲ್ಲಿ ಆಸಕ್ತಿ ಹೊಂದಿದ್ದ ಸಂಹಿತಾ, ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಆತ್ರಾಡಿಯ ವಿದುಷಿ ಉಮಾ ಮಹೇಶ್ವರಿ ಭಟ್ ಹಾಗೂ ಭರತ ನಾಟ್ಯವನ್ನು ಹೆಜ್ಜೆಗೆಜ್ಜೆ ಸಂಸ್ಥೆಯ ವಿದುಷಿ ಯಶಾ ರಾಮಕೃಷ್ಣ ಮತ್ತು ಚಿತ್ರಕಲೆಯನ್ನು ಕಲಾವಿದ ಪರ್ಕಳ ಸುಬ್ರಾಯ ಶಾಸ್ತ್ರಿಯವರಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ.

ಭಾಷಣ ಸ್ಪರ್ಧೆಯಲ್ಲಿ ಹಲವು ಬಾರಿ ಬಹುಮಾನ ಗಳಿಸಿರುವ ಆಕೆ, ಕನ್ನಡ ಮತ್ತು ಇಂಗ್ಲಿಷ್ ಭಾಷಣ ಎರಡರಲ್ಲೂ ಪ್ರೌಢಿಮೆ ಹೊಂದಿದ್ದಾಳೆ. ರಂಗಭೂಮಿ ಸಂಸ್ಥೆ ಮತ್ತು ಮಣಿಪಾಲ ಸಂಗಮ ಕಲಾವಿದೆರ್ ನಡೆಸುವ ಬೇಸಿಗೆಯ ರಂಗತರಬೇತಿ ಶಿಬಿರದಲ್ಲಿ ಪ್ರತಿವರ್ಷ ಭಾಗವಹಿಸಿದ್ದಾಳೆ. ಖ್ಯಾತ ರಂಗನಿರ್ದೇಶಕ ಡಾ.ಶ್ರೀಪಾದ ಭಟ್ ನಿರ್ದೇಶನದ ಹಲವು ನಾಟಕಗಳಲಿ್ಲ ಉತ್ತಮ ಪ್ರದರ್ಶನ ನೀಡಿದ್ದಾಳೆ.

ಚಲನಚಿತ್ರದಲ್ಲೂ ಬಾಲನಟಿಯಾಗಿ ಅಭಿನಯಿಸಿದ ಸಂಹಿತಾ ಪ್ರವೀಣ ತೊಕ್ಕೊಟ್ಟು ನಿರ್ದೇಶಿಸಿದ ಪವಾಡಪುರುಷ ಸಂತ ಲಾರೆನ್ಸ್ ಎಂಬ ಸಿನೆಮಾದಲ್ಲಿ ಖ್ಯಾತ ಚಿತ್ರತಾರೆ ಭವ್ಯ ಅವರ ಮಗಳಾಗಿ ಅಭಿನಯಿಸಿದ್ದಾಳೆ. ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ ನಿರ್ಮಿಸಿದ ಕೆಲವು ಟೆಲಿ ಸಿನೆಮಾಗಳಲ್ಲೂ ಅಭಿನಯಿಸಿದ್ದಾಳೆ.

ಕನ್ನಡ ಕಣ್ಮಣಿಯಲ್ಲಿ ರಾಜ್ಯದ 32 ಕೇಂದ್ರಗಳಿಂದ ಸುಮಾರು 30ಸಾವಿರ ಮಕ್ಕಳಿಗೆ ಆಡಿಷನ್ ನಡೆಸಲಾಗಿತ್ತು. ಫೆಬ್ರವರಿಯಲ್ಲಿ ಆರಂಭಗೊಂಡ ಈ ಕಾರ್ಯಕ್ರಮ ಇದೀಗ ಪಿನಾಲೆಗೆ ಬಂದು ಸಮಾಪ್ತಿಗೊಂಡಿದೆ. ಇದರಲ್ಲಿ ತೀರ್ಪುಗಾರರಾಗಿ ಕನ್ನಡ ನಟ ಜಗ್ಗೇಶ, ಕವಿ ಜಯಂತ ಕಾಯ್ಕಿಣಿ, ಹಾಸ್ಯ ಕಲಾವಿದ ಪಾ್ರಣೇಶ ಗಂಗಾವತಿ ಸಹಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News