ಒಡಿಶಾ ಶಾಲೆಯಲ್ಲಿನ ಗಾಂಧಿ ವಿಗ್ರಹ ಭಗ್ನ
Update: 2019-06-17 16:33 GMT
ಬಾಲಾಸೋರ,ಜೂ.17: ಒಡಿಶಾದ ಬಾಲಾಸೋರ ಪಟ್ಟಣದ ಸೋವಾರಾಮಪುರ ಪ್ರದೇಶದಲ್ಲಿಯ ಸರಕಾರಿ ಉನ್ನತ ಪ್ರಾಥಮಿಕ ಶಾಲೆಯಲ್ಲಿನ ಮಹಾತ್ಮಾ ಗಾಂಧಿಯವರ ಪ್ರತಿಮೆಯನ್ನು ಸಮಾಜ ವಿರೋಧಿ ಶಕ್ತಿಗಳು ಧ್ವ್ವಂಸಗೊಳಿಸಿರುವುದು ರವಿವಾರ ಬೆಳಕಿಗೆ ಬಂದಿದೆ.
ಗಾಂಧೀಜಿಯವರ ಗೌರವಾರ್ಥ ‘ಬಾಪೂಜಿ ಕಖಿಯಾ’ ಎಂದು ನಾಮಕರಣಗೊಂಡಿದ್ದ ಕೋಣೆಯಲ್ಲಿಯೂ ದುಷ್ಕರ್ಮಿಗಳು ದಾಂಧಲೆಯನ್ನು ಮೆರೆದಿದ್ದು, ಕೋಣೆಯ ತುಂಬ ಎಲ್ಲೆಂದರಲ್ಲಿ ಸಿಗರೇಟ್ ತುಂಡುಗಳು ಮತ್ತು ಖಾಲಿ ಮದ್ಯದ ಬಾಟಲ್ಗಳನ್ನು ಎಸೆದಿರುವುದು ಪತ್ತೆಯಾಗಿದೆ. ಗಾಂಧಿ ಪ್ರತಿಮೆಯ ರುಂಡವನ್ನು ತುಂಡರಿಸಿ ನೆಲಕ್ಕೆಸೆಯಲಾಗಿದೆ.
ಶಾಲೆಯು ಬೇಸಿಗೆ ರಜೆಯ ನಿಮಿತ್ತ ಮುಚ್ಚಲ್ಪಟ್ಟಿದ್ದು,ಜೂ.14ರಂದು ಈ ಘಟನೆ ನಡೆದಿದೆ ಎಂದ ಶಂಕಿಸಿರುವುದಾಗಿ ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ. ಆದರೆ ಘಟನೆಯ ಹಿಂದೆ ರಾಜಕೀಯ ಕಾರಣವಿರುವುದನ್ನು ಅವರು ನಿರಾಕರಿಸಿದ್ದಾರೆ.