ರೈತರಿಗೆ ಸಕಾಲಕ್ಕೆ ತಲುಪದ ಸರಕಾರಿ ಯೋಜನೆಗಳ ಮಾಹಿತಿ: ಕೃಷಿ-ತೋಟಗಾರಿಕೆ ಇಲಾಖೆ ವಿರುದ್ಧ ಆಕ್ರೋಶ

Update: 2019-06-19 13:16 GMT

ಮಂಗಳೂರು, ಜೂ.19: ರೈತರ ಕಲ್ಯಾಣಕ್ಕಾಗಿ ರಾಜ್ಯ ಮತ್ತು ಕೇಂದ್ರ ಸರಕಾರವು ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಆದರೆ, ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಅರ್ಹ ರೈತರಿಗೆ ಯಾವುದೇ ಮಾಹಿತಿಯನ್ನು ಸಕಾಲಕ್ಕೆ ನೀಡದೆ ಯೋಜನೆಯಿಂದ ವಂಚಿತ ರನ್ನಾಗಿಸುತ್ತಿದ್ದಾರೆ ಎಂದು ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಉಭಯ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯ ರೈತ ಮುಖಂಡ ಧನಕೀರ್ತಿ ಬಲಿಪ ಮಾತನಾಡಿ, ಅಧಿಕಾರಿಗಳು ಸಭೆಯಲ್ಲಿ ವಿವಿಧ ಯೋಜನೆಗಳ ಕುರಿತು ಹೇಳುತ್ತಾರೆ. ಆದರೆ ತಾಲೂಕು-ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಹಿತಿ ನೀಡುವವರೇ ಇಲ್ಲ. ಗ್ರಾಮಮಟ್ಟದಲ್ಲೂ ಮಾಹಿತಿ ಸಿಗುತ್ತಿಲ್ಲ. ತಮಗೆ ಬೇಕಾದವರಿಗೆ ಮಾಹಿತಿ ರವಾನಿಸಿ ಸುಮ್ಮನಿರುತ್ತಾರೆ. ಇದರಿಂದ ಸಾವಿರಾರು ರೈತರು ಸರಕಾರದ ವಿವಿಧ ಯೋಜನೆಗಳಿಂದ ವಂಚಿತರಾಗಿದ್ದಾರೆ. ಆದ್ದರಿಂದ ಜಿಲ್ಲಾಮಟ್ಟದ ಅಧಿಕಾರಿಗಳು ತಾಲೂಕು ಮಟ್ಟದಲ್ಲಿ ರೈತರಿಗೆ ಮಾಹಿತಿ ನೀಡುವ ಸಭೆ ಆಯೋಜಿಸಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಸ್ಪಂದಿಸಿದ ಸಚಿವರು ಮುಂದಿನ ತಿಂಗಳಿಂದ ತಾಲೂಕು ಮಟ್ಟದಲ್ಲಿ ರೈತರ ಸಭೆ ನಡೆಸಲಾಗುವುದು. ಅಲ್ಲದೆ ಭವಿಷ್ಯದಲ್ಲಿ ಅದನ್ನು ಹೋಬಳಿ, ಗ್ರಾಮಮಟ್ಟದಲ್ಲೂ ನಡೆಸುವ ಉದ್ದೇಶವಿದೆ ಎಂದರು.

ಭತ್ತದ ಬೆಳೆಗೆ ಸಂಬಂಧಿಸಿ ರಾಜ್ಯ ಸರಕಾರ ಕಳೆದ ಬಜೆಟ್‌ನಲ್ಲಿ ಘೋಷಿಸಿದ ‘ಕರಾವಳಿ ಪ್ಯಾಕೇಜ್’ನ ಶೀಘ್ರ ಅನುಷ್ಠಾನಕ್ಕೂ ಕ್ರಮ ಜರಗಿಸಲಾಗುವುದು ಎಂದ ಸಚಿವ ಖಾದರ್, ಪ್ಯಾಕೇಜ್ ಪ್ರಕಾರ ಯಂತ್ರ ಹಾಗೂ ಕಾರ್ಮಿಕರನ್ನು ಬಳಸಿ ಭತ್ತ ಬೆಳೆಯುವ ರೈತರ ಖಾತೆಗೆ ಪ್ರತಿ ಹೆಕ್ಟೇರ್‌ಗೆ 7,500 ರೂ.ನೇರ ಜಮಾ ಮಾಡಲಾಗುವುದು. ಕರಾವಳಿಯ ಪ್ರಮುಖ ಬೆಳೆಯಾಗಿರುವ ಭತ್ತದ ಕಡೆಗೆ ಕೃಷಿಕರ ಆಸಕ್ತಿ ಕಡಿಮೆಯಾಗುತ್ತಿರುವುದರಿಂದ ರೈತರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಪ್ಯಾಕೇಜ್ ಜಾರಿಗೊಳಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಮಾತನಾಡಿ ಕೃಷಿ-ತೋಟಗಾರಿಕಾ ಇಲಾಖೆಯ ವಿವಿಧ ಮಾಹಿತಿ ನೇರವಾಗಿ ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾಮಟ್ಟದಲ್ಲಿ ದೂರವಾಣಿ ಸಂಪರ್ಕ ಕೇಂದ್ರ ಸ್ಥಾಪಿಸಲಾಗುವುದು. ರೈತ ಸಂಘಟನೆಗಳ ನೆರವು ಪಡೆದು ಯಾವ ರೀತಿ ಅನುಷ್ಠಾನಗೊಳಿಸಬೇಕು ಎಂಬುದರ ಬಗ್ಗೆ ಚರ್ಚಿಸಲಾಗುವುದು ಎಂದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಡಾ.ಸೀತಾ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಎಚ್.ಆರ್.ನಾಯ್ಕ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಪ್ರಸನ್ನ, ಸಹಕಾರಿ ಇಲಾಖೆಗಳ ಉಪನಿಬಂಧಕ ಸುರೇಶ್‌ಗೌಡ, ಪಾಲಿಕೆ ಉಪಾಯುಕ್ತೆ ಗಾಯತ್ರಿ ನಾಯಕ್, ವಿವಿಧ ರೈತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

ಕೊಳೆರೋಗ ಪರಿಹಾರ ವಿಳಂಬ ಪರಿಶೀಲನೆ

ಕಳೆದ ಸಾಲಿನಲ್ಲಿ ಅಡಿಕೆ ಕೊಳೆ ರೋಗ ಪರಿಹಾರ ಸಿಗದ ರೈತರ ಪಟ್ಟಿಯನ್ನು ಹೆಸರು, ತಾಲೂಕು, ಗ್ರಾಮ, ಸರ್ವೇ ನಂಬರ್ ಸಹಿತ ನೀಡಿದರೆ ಯಾವ ಕಾರಣಕ್ಕೆ ವಿಳಂಬವಾಗಿದೆ ಎಂದು ಅಧಿಕಾರಿಗಳ ಮೂಲಕ ಪತ್ತೆಹಚ್ಚಿ ಮೂರು ದಿನದಲ್ಲಿ ಮಾಹಿತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ರೈತ ಸಂಘಟನೆಗಳ ಮುಖಂಡರಿಗೆ ಭರವಸೆ ನೀಡಿದರು.

ಸುಳ್ಯ ತಾಲೂಕಿನ ವಿವಿಧ ಕಡೆ ಅಡಿಕೆ ಬೆಳೆಯದವರೂ ಕೂಡ ಕೊಳೆರೋಗದ ಪರಿಹಾರ ಧನ ಪಡೆದಿದ್ದಾರೆ. ಗ್ರಾಮಕರಣಿಕರು ಸ್ಥಳ ತನಿಖೆ ನಡೆಸದ ಕಾರಣ ಇಂತಹ ಎಡವಟ್ಟು ಆಗಿದೆ. ಈ ಬಗ್ಗೆ ಸೂಕ್ತ ಕ್ರಮ ಜರಗಿಸಬೇಕು ಎಂದು ರೈತ ಮುಖಂಡರೊಬ್ಬರು ಒತ್ತಾಯಿಸಿದರು.

ಪರಿಹಾರ ವಿಳಂಬ ಮತ್ತು ವಂಚನೆಯಾಗಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಸುಮಾರು 56 ಸಾವಿರ ಅರ್ಜಿಗಳು ಬಂದಿದ್ದು, ಅದರಲ್ಲಿ 50 ಸಾವಿರ ಮಂದಿಗೆ ಹೆಕ್ಟೇರ್‌ಗೆ 18 ಸಾವಿರದಂತೆ 50 ಕೋಟಿ ರೂ. ಪರಿಹಾರ ವಿತರಣೆ ಮಾಡಲಾಗಿದೆ ಎಂದರು.

ಹೈಕೋರ್ಟ್‌ನಲ್ಲಿ ದಾವೆ

ಪ್ರಾಣಿಗಳಿಂದ ಬೆಳೆಗಳ ರಕ್ಷಣೆಗಾಗಿ ಇರಿಸಿಕೊಂಡಿರುವ ಕೋವಿಗಳನ್ನು ಪ್ರತಿ ಮೂರು-ಆರು ತಿಂಗಳಿಗೊಮ್ಮೆ ಚುನಾವಣೆ ನೆಪದಲ್ಲಿ ಪೊಲೀಸ್ ಠಾಣೆಯಲ್ಲಿ ಇರಿಸಬೇಕಾಗಿದೆ. ಜತೆಗೆ ಪರವಾನಗಿ ನವೀಕರಣಕ್ಕೆ ಪ್ರತಿ ವರ್ಷ ಕಟ್ಟಬೇಕಾದ ಮೊತ್ತ ಹೆಚ್ಚಾಗುತ್ತಿದೆ. ಇದೀಗ ನವೀಕರಣಕ್ಕಾಗಿ 1,500 ರೂ. ಪಾವತಿಸಬೇಕಿದೆ. ಈ ಬಗ್ಗೆ ಗೃಹ ಇಲಾಖೆ-ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ. ಆದರೂ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ಹೈಕೋರ್ಟ್‌ನಲ್ಲಿ ದಾವೆ ಹೂಡಲಾಗುವುದು ಎಂದು ಸುಳ್ಯದ ರೈತರೊಬ್ಬರು ಹೇಳಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ 16 ಸಾವಿರ ಕೋವಿ ಪರವಾನಗಿ ಇದೆ. ಚುನಾವಣೆ ಶಾಂತಿಯುತವಾಗಿ ನಡೆಸುವ ನಿಟ್ಟಿನಲ್ಲಿ ಆಯೋಗದ ಆದೇಶದಂತೆ ಅವುಗಳನ್ನು ವಶಕ್ಕೆ ಪಡೆಯುವುದು ಅನಿವಾರ್ಯವಾಗಿದೆ. ಕೆಲವೊಂದು ಅತಿ ವಿರಳ ಪ್ರಕರಣಗಳಲ್ಲಿ ಮಾತ್ರ ವಿನಾಯಿತಿ ನೀಡಬಹುದಾಗಿದೆ ಎಂದರು.

ಹರೇಕಳ ಗ್ರಾಮದ ಅನೇಕ ಕಡೆ ರಾಜಕಾಲುವೆಯಲ್ಲಿ ಹೂಳು ತುಂಬಿವೆ. ಇದರಿಂದ ಆ ಭಾಗದ 200ಕ್ಕೂ ಅಧಿಕ ಎಕರೆ ಪ್ರದೇಶದ ಕೃಷಿ ಭೂಮಿ ನಾಶವಾಗಿದೆ. ಹಾಗಾಗಿ ರಾಜಕಾಲುವೆಯ ಹೂಳು ಮೇಲತ್ತೆಲು ಕ್ರಮ ಜರಗಿಸಬೇಕು ಎಂದು ರೈತ ಮುಖಂಡರೊಬ್ಬರು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಖಾದರ್, ಕೇವಲ ಹರೇಕಳ ಮಾತ್ರವಲ್ಲ. ಜಿಲ್ಲೆಯಲ್ಲಿ ಇಂತಹ ರಾಜಕಾಲುವೆ ಎಲ್ಲೆಲ್ಲಿವೆ ಎಂಬುದನ್ನು ಗುರುತಿಸಿ ಅವುಗಳನ್ನು ಹೂಳೆತ್ತಲು ಬೇಕಾದ ಅನುದಾನದ ಬಗ್ಗೆ ಜಂಟಿ ವರದಿ ನೀಡಲು ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಉಪ್ಪಿನಂಗಡಿ ಸಹಕಾರಿ ಸೊಸೈಟಿಯಿಂದ ನನ್ನ ತಂದೆ ಸಾಲ ಮಾಡಿದ್ದರು. ಅವರೀಗ ನಿಧನರಾಗಿದ್ದಾರೆ. ರಾಜ್ಯ ಸರಕಾರ ಕೃಷಿ ಸಾಲ ಮನ್ನಾ ಮಾಡಿದ್ದರೂ ಕೂಡ ಈ ಸೊಸೈಟಿಯವರು ನನಗೆ ನೋಟಿಸ್ ಜಾರಿಗೊಳಿಸಿದ್ದರು. ಅಲ್ಲದೆ ನನ್ನ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ರೈತರೊಬ್ಬರು ಆಗ್ರಹಿಸಿದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಸೊಸೈಟಿಯವರು ಕಾನೂನು ಮೀರಿ ನಡೆದಿದ್ದಾರೋ ಇಲ್ಲವೋ ಎಂಬುದನ್ನು ತನಿಖೆ ನಡೆಸಿ ವರದಿ ನೀಡಿ ಎಂದು ಸಹಕಾರ ಇಲಾಖೆಗಳ ಉಪನಿಬಂಧಕರಿಗೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News