ಮುಝಫ್ಫರ್‌ಪುರ: ಮೆದುಳಿನ ಉರಿಯೂತಕ್ಕೆ ಬಲಿಯಾದ ಮಕ್ಕಳ ಸಂಖ್ಯೆ 117ಕ್ಕೇರಿಕೆ

Update: 2019-06-20 16:08 GMT

ಪಾಟ್ನಾ, ಜೂ.20: ಬಿಹಾರದ ಮುಝಫ್ಫರ್‌ಪುರ ಜಿಲ್ಲೆಯಲ್ಲಿ ಮೆದುಳಿನ ಉರಿಯೂತದಿಂದ ಸಾವಿಗೀಡಾದ ಮಕ್ಕಳ ಸಂಖ್ಯೆ 117ಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ಬೆಳಗ್ಗಿನವರೆಗಿನ ಮಾಹಿತಿಯಂತೆ ಜಿಲ್ಲೆಯಲ್ಲಿರುವ ಸರಕಾರಿ ಅಧೀನದ ಶ್ರೀಕೃಷ್ಣ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 98 ಮಕ್ಕಳು, ಕೇಜ್ರೀವಾಲ್ ಆಸ್ಪತ್ರೆಯಲ್ಲಿ 19 ಮಕ್ಕಳು ಮೃತರಾಗಿದ್ದಾರೆ. ಈ ಮಧ್ಯೆ ಮುಝಫ್ಫರ್‌ಪುರಕ್ಕೆ ನೆರೆಯ ಜಿಲ್ಲೆಗಳಾದ ದರ್ಭಾಂಗ, ಸುಪೌಲ್, ಮಧುಬನಿ, ಸಮಷ್ಟಿಪುರ ಹಾಗೂ ಸೀತಾಮಡಿಗಳಿಂದ ಹೆಚ್ಚಿನ ವೈದ್ಯರನ್ನು ರಾಜ್ಯದ ಆರೋಗ್ಯ ಇಲಾಖೆ ನಿಯೋಜಿಸಿದೆ.

ಮಂಗಳವಾರ ಶ್ರೀಕೃಷ್ಣ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ನಿತೀಶ್ ಕುಮಾರ್ ಪರಿಸ್ಥಿತಿಯ ಅವಲೋಕನ ನಡೆಸಿದರು. ಕಾಯಿಲೆಯನ್ನು ನಿಯಂತ್ರಣಕ್ಕೆ ತರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ, ಜಿಲ್ಲಾಡಳಿತ ಹಾಗೂ ವೈದ್ಯರಿಗೆ ಸೂಚಿಸಿದ ಅವರು ಮೆದುಳಿನ ಉರಿಯೂತದಿಂದ ಮೃತಪಟ್ಟ ಮಕ್ಕಳ ಕುಟುಂಬದವರಿಗೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News