ಮಂಗಳೂರು: 'ಮಸ್ಜಿದ್ ಒನ್ ಮೂವ್‍ಮೆಂಟ್' ಅಂಗವಾಗಿ ತರಬೇತಿ ಶಿಬಿರ

Update: 2019-06-22 06:29 GMT

ಮಂಗಳೂರು: ಆಲ್ ಇಂಡಿಯಾ ಮುಸ್ಲಿಂ ಡೆವಲಪ್‍ಮೆಂಟ್ ಕೌನ್ಸಿಲ್ ದ.ಕ ಜಿಲ್ಲೆ ಇದರ ವತಿಯಿಂದ 'ಮಸ್ಜಿದ್ ಒನ್ ಮೂವ್‍ಮೆಂಟ್' ಅಂಗವಾಗಿ ಜಿಲ್ಲೆಯ ಆಯ್ದ ಮಸೀದಿಗಳ ಪ್ರತಿನಿಧಿಗಳಿಗೆ ಏಕದಿನ ತರಬೇತಿ ಶಿಬಿರವು ಜಮೀಯತುಲ್ ಫಲಾಹ್ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ಮಾತನಾಡಿದ ಮಹಮ್ಮದ್ ಇಮ್ತಿಯಾಝ್ “ಭಾರತದಲ್ಲಿ ಮುಸ್ಲಿಮರ ಸ್ಥಿತಿಗತಿಯು ಬಹಳ ಚಿಂತಾಜನಕವಾಗಿದ್ದು, ಅವರು ಎಲ್ಲಾ ಸ್ತರಗಳಲ್ಲಿಯೂ ಬಹಳ ಹಿಂದುಳಿದಿದ್ದಾರೆ. ಆ ಕಾರಣಕ್ಕಾಗಿಯೇ 'ಎಐಎಂಡಿಸಿ' ಇಂದು ಭಾರತದಾದ್ಯಂತ ಮಸ್ಜಿದ್‍ಗಳನ್ನ ಕೇಂದ್ರವಾಗಿಸಿಕೊಂಡು ಮುಸ್ಲಿಮರ ಸ್ಥಿತಿಗಳನ್ನು ಸುಧಾರಿಸಲು “ಮಸ್ಜಿದ್ ಒನ್ ಮೂವ್‍ಮೆಂಟ್” ಮೂಲಕ  ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.

ಮಸ್ಜಿದ್ ಎಂಬುವುದು ಸಾಮಾಜಿಕ ಚಟುವಟಿಕೆಗಳ ತಾಣವಾಗಬೇಕು, ಅಭಿವೃದ್ಧಿಗಳ ಕೇಂದ್ರವನ್ನಾಗಿಸಿ ಮಸೀದಿ, ಮಸೀದಿಯ ಉಸ್ತಾದರುಗಳ ಮತ್ತು ಮಸೀದಿಗಳ ಜಮಾಅತಿಗೊಳಪಟ್ಟ ಎಲ್ಲಾ ಮುಸ್ಲಿಮರ ಮಾಹಿತಿ ಸಂಗ್ರಹಿಸಿ ಈ ಮೂಲಕ ಅವರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಮಟ್ಟವನ್ನು ಉನ್ನತಿಗೇರಿಸಿ ಸಬಲರನ್ನಾಗಿಸುವುದು ಮತ್ತು ಸರಕಾರದ ಎಲ್ಲಾ ಸೌಲಭ್ಯಗಳು ಮಸ್ಜಿದ್‍ಗಳ ಮೂಲಕ ಪಡೆಯುವಂತಾಗಬೇಕು ಇದುವೇ ಇದರ ಮುಖ್ಯ ಉದ್ದೇಶವಾಗಿರುತ್ತದೆ ಎಂದು ಹೇಳಿದರು.

ಸರಕಾರಿ ಸೌಲಭ್ಯಗಳ ಕುರಿತ ಮಾಹಿತಿಯನ್ನು ಅಲ್ಪ ಸಂಖ್ಯಾತ ಇಲಾಖೆಯ ಅಬ್ದುಲ್ ಖಾದರ್ ನಾವೂರ್ ನೀಡಿದರು ಮತ್ತು ರಫೀಕ್ ಮಾಸ್ಟರ್ ಜಮಾಅತ್ ಸದಸ್ಯರ ಜವಾಬ್ದಾರಿಗಳ ಬಗ್ಗೆ ತಿಳಿಸಿದರು. ನಂತರ ಮುಖ್ಯ ಅತಿಥಿ ಭಾರತ್ ಕನ್ಸ್ಟ್ರಕ್ಷನ್‍ನ ಮುಸ್ತಫಾ ಸಮಯೋಚಿತವಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು 'ಎಐಎಂಡಿಸಿ' ಜಿಲ್ಲಾಧ್ಯಕ್ಷ ಅಹ್ಮದ್ ಮೊಹಿಯುದ್ದೀನ್‍ ವಹಿಸಿದ್ದರು ಮತ್ತು ಮಹಮ್ಮದ್ ಹುಸೈನ್ ನೂರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ರಫೀಕ್ ಮಾಸ್ಟರ್  ಕಾರ್ಯಕ್ರಮ ನಿರೂಪಿಸಿ, ಹಬೀಬ್ ಖಾದರ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News