ಪ್ರಾಣವನ್ನು ಮುಡಿಪಾಗಿಡುವೆವು ಹೊರತು ರಾಜಿ ಮಾಡುವ ಪ್ರಶ್ನೆಯೇ ಇಲ್ಲ: ಸಂತೋಷ್ ಬಜಾಲ್

Update: 2019-06-24 05:29 GMT

ಮಂಗಳೂರು: ಇಂದು ದೇಶವನ್ನು ಆಳುವಂತಹ ವ್ಯವಸ್ಥೆ ಬಹಳ ವ್ಯವಸ್ಥಿತವಾಗಿ ನಮ್ಮ ಸಂವಿಧಾನದ ಆಶಯವನ್ನು, ಪ್ರಜಾಪ್ರಭುತ್ವ ಮೌಲ್ಯಗಳನ್ನು ಬುಡಮೇಲು ಮಾಡಲು ಹೊರಟಿದೆ. ಇಂತಹ ದೇಶವಿರೋಧಿ, ಜನವಿರೋಧಿ ನೀತಿಗಳ ವಿರುದ್ಧ ಸಂವಿಧಾನದ ರಕ್ಷಣೆಗಾಗಿ, ಕೋಮು ಸೌಹಾರ್ದತೆಗಾಗಿ ಮತ್ತು ನವ ಸಮಾಜದ ನಿರ್ಮಾಣಕ್ಕಾಗಿ ನಡೆಯುವ ಹೋರಾಟದಲ್ಲಿ ನಮ್ಮ ಪ್ರಾಣವನ್ನೇ ಮುಡಿಪಾಗಿಡುವೆವು ಹೊರತು ರಾಜಿ ಮಾಡುವ ಪ್ರಶ್ನೆಯೇ ಇಲ್ಲ ಎಂದು ಡಿವೈಎಫ್ಐ ದ.ಕ. ಜಿಲ್ಲಾಕಾರ್ಯದರ್ಶಿ ಸಂತೋಷ್ ಬಜಾಲ್ ತಿಳಿಸಿದರು.

ಅವರು ಇಂದು ಪಕ್ಕಲಡ್ಕದಲ್ಲಿ ಕೋಮುವಾದಿಗಳ ಅಟ್ಟಹಾಸಕ್ಕೆ ಬಲಿಯಾದ ಶ್ರೀನಿವಾಸ್ ಬಜಾಲ್ ಅವರ ಹುತಾತ್ಮ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ದೇಶದ ಬಡವರ ನೆಮ್ಮದಿಯ ಬದುಕಿಗಾಗಿ, ಸೌಹಾರ್ದ ಪರಂಪರೆಯ ಉಳಿವಿಗಾಗಿ ಹೋರಾಡುತ್ತಿರುವ ಎಡಪಂಥೀಯ ನಾಯಕರುಗಳನ್ನು, ಕಾರ್ಯಕರ್ತರನ್ನು ಇಲ್ಲವಾಗಿಸುವ ಕೃತ್ಯವನ್ನು ಕೋಮುವಾಗಿ ನರಹಂತಕರು ಮಾಡುತ್ತಾ ಬಂದಿದ್ದಾರೆ. ಇಂತಹ  ಹೋರಾಟದಲ್ಲಿ ಮಡಿದವರಲ್ಲೊಬ್ಬರಾದ ನಮ್ಮೆಲ್ಲರ ಒಡನಾಡಿ ಶ್ರೀನಿವಾಸ್ ಬಜಾಲ್ ಅವರಿಂದ ಹಿಡಿದು ಎಂ ಎಂ ಕಲಬುರ್ಗಿ, ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ, ಗೌರಿ ಲಂಕೇಶ್ ಅವರಂತಹ ಪ್ರಗತಿಪರರನ್ನು ಹತ್ಯೆ ಮಾಡುವ ಮೂಲಕ ಅವರ ವಿಚಾರಧಾರೆಗಳನ್ನು ಧಮನಿಸಲು ಹೊರಟಿದ ಶಕ್ತಿಗಳನ್ನು ದೇಶವನ್ನಾಳುವ ರಾಜಕೀಯ ವ್ಯವಸ್ಥೆಯೂ ಪ್ರೇರೇಪಿಸುತ್ತಿರುವುದು ಬಹಳ ದುರಂತದ ಸಂಗತಿ. ಇಂತಹ ಮತಾಂದತೆಯನ್ನು ಪೋಷಿಸುವ ವ್ಯವಸ್ಥೆ ಅದೆಷ್ಟೇ ಎಡಪಂಥೀಯ ಕಾರ್ಯಕರ್ತರನ್ನು, ಪ್ರಗತಿಪರರನ್ನು ಕೊಂದರು ಅವರ ಜೀಪಪರ ವಿಚಾರಧಾರೆಗಳಿಗೆಂದೂ ಸಾವಿಲ್ಲ ಅನ್ನೋದು ಅಷ್ಟೇ ಸತ್ಯ. ಕ್ರಾಂತಿಕಾತಿಗಳಿಗೆಂದೂ ಸಾವಿಲ್ಲ ಅವರೆಂದೂ ಸಾಯುವುದಿಲ್ಲ. ಅವರೆಲ್ಲರ ತ್ಯಾಗ, ಆದರ್ಶಗಳನ್ನು ಮುನ್ನಡೆಸುವ ಮನಸ್ಸುಗಳು ಮತ್ತೆ ಮತ್ತೆ ಹುಟ್ಟಿ ಬರಲಿದೆ. ನವ ಸಮಾಜದ ನಿರ್ಮಾಣಕ್ಕಾಗಿ ನಡೆಯುವ ಹೋರಾಟಗಳಲ್ಲಿ ಆ ಎಲ್ಲಾ ಮನಸ್ಸುಗಳು ಜೊತೆಯಾಗಲಿದೆ ಎಂದರು.

ಡಿವೈಎಫ್ಐ ಮಾಜಿ ಮುಖಂಡರಾದ ರಾಜೇಶ್ ಈ ವೇಳೆ ದ್ವಜಾರೋಹಣಗೈದು ಮಾತನಾಡಿದರು. ಶ್ರೀನಿವಾಸ್ ಬಜಾಲ್ ಆ ದಿನ ರೋಗಿಯೊಬ್ಬರಿಗೆ ರಕ್ತದಾನ ಮಾಡಲೆಂದು ಬೇಗನೆ ಹೊರಟಾಗ ಕೋಮುವಾದಿ ನರಹಂತಕರು ಅವರನ್ನು ಸಂಚುಹಾಕಿ ಕೊಂದರು. ಶ್ರೀನಿವಾಸ್ ಪ್ರದೇಶದಲ್ಲಿ ಪರೋಪಕಾರಿಯಾಗಿದ್ದ, ಬಡವರ ಕಷ್ಟ ಕಾರ್ಪಣ್ಯಗಳಿಗೆ, ಅಸಹಾಯಕರಿಗೆ ಸ್ಪಂದಿಸುವ ಗುಣವನ್ನು ಹೊಂದಿದ್ದ ಅವರ ಆದರ್ಶವನ್ನು ನಾವುಗಳು ಮುನ್ನಡೆಸಿಕೊಂಡು ಹೋಗಬೇಕೆಂದು ಹೇಳಿದರು.

ಈ ವೇಳೆ ಕಾರ್ಮಿಕ ಮುಖಂಡರಾದ ಲೋಕೇಶ್ ಎಂ, ಸುರೇಶ್ ಬಜಾಲ್, ದೀಪಕ್ ಬೊಲ್ಲ‌ , ಅಶೋಕ್ ಸಾಲ್ಯಾನ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ನೇತೃತ್ವವನ್ನು ಡಿವೈಎಫ್ಐ ಪಕ್ಕಲಡ್ಕ ಘಟಕದ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ , ಧೀರಾಜ್, ನಾಗರಾಜ್ ಬಜಾಲ್, ವರಪ್ರಸಾದ್ ಕುಲಾಲ್, ಹರಿಹರನ್, ಅಖಿಲೇಶ್, ಸೋನಿಲ್ , ಅಶೋಕ್ ಎನೆಲ್ ಮಾರ್ ಮುಂತಾದವರು ವಹಿಸಿದ್ದರು.

 ಕಾರ್ಯಕ್ರಮಕ್ಕೂ ಮುನ್ನ ಶ್ರೀನಿವಾಸ್ ಬಜಾಲ್ ಹತ್ಯೆಯಾದ ಸ್ಥಳದಿಂದ ಘೋಷಣೆಗಳನ್ನು ಕೂಗುವ ಮೂಲಕ ಪಕ್ಕಲಡ್ಕ ಬಸ್ ನಿಲ್ದಾಣದವರೆಗೂ ಮೆರವಣೆಗೆ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News