​ಸೋನಿಯಾ, ರಾಹುಲ್ ಕ್ಷಮೆ ಯಾಚಿಸಲಿ: ಮಾಜಿ ಪ್ರಧಾನಿ ಪಿವಿಎನ್ ಮೊಮ್ಮಗ

Update: 2019-06-28 04:09 GMT
ಪಿವಿ ನರಸಿಂಹರಾವ್

ಹೈದರಾಬಾದ್: ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರಿಗೆ ಮಾಡಿದ ಅನ್ಯಾಯಕ್ಕಾಗಿ ಕಾಂಗ್ರೆಸ್‌ನ ಗಾಂಧಿ ಕುಟುಂಬ ಕ್ಷಮೆ ಯಾಚಿಸಬೇಕು ಎಂದು ಮಾಜಿ ಪ್ರಧಾನಿ ಪಿವಿಎನ್ ಅವರ ಮೊಮ್ಮಗ ಆಗ್ರಹಿಸಿದ್ದಾರೆ.

ಮಾಜಿ ಪ್ರಧಾನಿ ವಿರುದ್ಧ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಮಾಡಿದ ಆರೋಪಕ್ಕೆ ತಿರುಗೇಟು ನೀಡಿದ ಅವರು, ವಾಸ್ತವವಾಗಿ ಗಾಂಧಿಕುಟುಂಬ ಅವರಿಗೆ ಮಾಡಿದ ಅನ್ಯಾಯಕ್ಕಾಗಿ ಪಿವಿಎನ್ ಕುಟುಂಬದ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದಕ್ಕೂ ಮುನ್ನ ಎಐಸಿಸಿ ಕಾರ್ಯದರ್ಶಿ ಜಿ.ಚಿನ್ನಾ ರೆಡ್ಡಿ ಹೇಳಿಕೆ ನೀಡಿ, ನರಸಿಂಹರಾವ್ ಅವರು ತಮ್ಮ ಅಧಿಕಾರಾವಧಿಯಲ್ಲಿ ನೆಹರೂ-ಗಾಂಧಿ ಕುಟುಂಬವನ್ನು ಮೂಲೆಗುಂಪು ಮಾಡಲು ಯತ್ನಿಸಿದ್ದರು ಎಂದು ಆಪಾದಿಸಿದ್ದರು. "ಇದು ಶುದ್ಧ ಸುಳ್ಳು ಮತ್ತು ಖಂಡನಾರ್ಹ" ಎಂದು ಎನ್.ವಿ.ಸುಭಾಷ್ ಹೇಳಿದ್ದಾರೆ. "ರಾವ್ ವಿಶ್ವಾಸಾರ್ಹ ಹಾಗೂ ಗಾಂಧಿಕುಟುಂಬಕ್ಕೆ ನಿಷ್ಠರಾಗಿದ್ದರು. ಹಲವು ವಿಚಾರಗಳಲ್ಲಿ ಗಾಂಧಿ ಕುಟುಂಬಕ್ಕೆ ಮಾರ್ಗದರ್ಶನ ನೀಡಿದ್ದರು" ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

2014ರಲ್ಲಿ ಬಿಜೆಪಿ ಸೇರಿರುವ ಸುಭಾಷ್, ತೆಲಂಗಾಣ ಘಟಕದ ಅಧಿಕೃತ ವಕ್ತಾರರು. ನೆಹರೂ- ಗಾಂಧಿ ಕುಟುಂಬದ ಹೊರಗಿನ ನಾಯಕರನ್ನು, ಅದರಲ್ಲೂ ಮುಖ್ಯವಾಗಿ ನರಸಿಂಹರಾವ್ ಅವರನ್ನು ಕಾಂಗ್ರೆಸ್ ಪಕ್ಷ ಸದಾ ನಿರ್ಲಕ್ಷಿಸುತ್ತಲೇ ಬಂದಿದೆ. ರಾವ್ ಅವರ ಮೃತದೇಹವನ್ನು ಎಐಸಿಸಿ ಕೇಂದ್ರ ಕಚೇರಿಗೆ ತರಲು ಅವಕಾಶವನ್ನೂ ನೀಡಿರಲಿಲ್ಲ ಎಂದು ಆಪಾದಿಸಿದ್ದಾರೆ.

ಹೊಸದಿಲ್ಲಿಯಲ್ಲಿ ರಾವ್ ಹೊರತುಪಡಿಸಿ ಎಲ್ಲ ಮಾಜಿ ಪ್ರಧಾನಿಗಳ ಸ್ಮಾರಕ ನಿರ್ಮಿಸಲಾಗಿದೆ. ಇದು ಕಾಂಗ್ರೆಸ್ ಪಕ್ಷ ಅವರ ಬಗೆಗೆ ಹೊಂದಿದ ಉದಾಸೀನ ಮನೋಭಾವಕ್ಕೆ ಸಾಕ್ಷಿ ಎಂದು ಕಿಡಿ ಕಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News