ಆರೆಸ್ಸೆಸ್, ಬಿಜೆಪಿ ನನಗೆ ಕಿರುಕುಳ, ಬೆದರಿಕೆಯೊಡ್ಡುತ್ತಿವೆ: ಕೋರ್ಟ್ ಗೆ ಹಾಜರಾಗುವ ಮುನ್ನ ರಾಹುಲ್
Update: 2019-07-06 09:22 GMT
ಹೊಸದಿಲ್ಲಿ, ಜು.6: ತಮಗೆ ಕಿರುಕುಳ ಹಾಗೂ ಬೆದರಿಕೆಯೊಡ್ಡುವ ಬಿಜೆಪಿ-ಆರೆಸ್ಸೆಸ್ ಯೋಜನೆಯಂತೆ ತಮ್ಮ ವಿರುದ್ಧ `ರಾಜಕೀಯ ಎದುರಾಳಿಗಳು' ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟ್ನಾದ ನ್ಯಾಯಾಲಯಕ್ಕೆ ಹಾಜರಾಗುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಆರೆಸ್ಸೆಸ್ ಕಾರ್ಯಕರ್ತರೊಬ್ಬರು ಮುಂಬೈ ನ್ಯಾಯಾಲಯದಲ್ಲಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯ ವಿಚಾರಣೆಗಾಗಿ ರಾಹುಲ್ ಗಾಂಧಿ ಹಾಗೂ ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಭಾಗವಹಿಸಿದ್ದ ಕೆಲವೇ ದಿನಗಳಲ್ಲಿ ಇದೀಗ ರಾಹುಲ್ ಪಾಟ್ನಾ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.
“ನನಗೆ ಕಿರುಕುಳ ಬೆದರಿಕೆಯೊಡ್ಡುವ ಆರೆಸ್ಸೆಸ್/ಬಿಜೆಪಿ ಯತ್ನವಾಗಿ ರಾಜಕೀಯ ಎದುರಾಳಿಗಳು ದಾಖಲಿಸಿದ್ದ ಇನ್ನೊಂದು ಪ್ರಕರಣದಲ್ಲಿ ಇಂದು ಅಪರಾಹ್ನ ಎರಡು ಗಂಟೆಗೆ ನಾನು ಪಾಟ್ನಾ ಸಿವಿಲ್ ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗಲಿದ್ದೇನೆ'' ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.